

ನಟಿ ತ್ರಿಷಾ ಕೃಷ್ಣನ್ ಚೆನ್ನೈಯಲ್ಲಿ ಮೊನ್ನೆ ನಡೆದ ಮದುವೆ ಕಾರ್ಯಕ್ರಮದಲ್ಲಿ ದಳಪತಿ ವಿಜಯ್ ಜೊತೆ ಆಗಮಿಸಿ ಭಾಗಿಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಸುದ್ದಿಯಾದ ನಂತರ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು ಕ್ಯಾಪ್ಷನ್ ಬರೆದಿದ್ದು ಗಮನ ಸೆಳೆದಿದೆ.
ಚಿತ್ರ ನಿರ್ಮಾಪಕ ಕಲ್ಪತಿ ಸುರೇಶ್ ಮತ್ತು ಮೀನಾಕ್ಷಿ ಅವರ ಪುತ್ರನ ಮದುವೆಯಲ್ಲಿ ವಿಜಯ್ ಮತ್ತು ತ್ರಿಷಾ ಇಬ್ಬರೂ ಒಂದೇ ಕಾರಿನಲ್ಲಿಆಗಮಿಸಿ, ಒಟ್ಟಿಗೇ ಹೊರಟು ಹೋಗಿರುವುದು ಕಂಡುಬಂತು.
ಈ ಕಾರ್ಯಕ್ರಮಕ್ಕೆ ಇಬ್ಬರೂ ಸಂಪ್ರದಾಯಬದ್ಧ ಒಂದೇ ಬಣ್ಣದ ಉಡುಪುಗಳಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವಿಜಯ್ ಕೈಯಲ್ಲಿ ಹೂಗುಚ್ಛ ಹಿಡಿದು ಕಾರಿನಿಂದ ಇಳಿಯುತ್ತಿರುವುದು, ಅವರ ಹಿಂದೆ ತ್ರಿಷಾ ಬರುತ್ತಿರುವುದು ಹಾಗೂ ಅವರನ್ನು ಸ್ವಾಗತಿಸುವುದು ಕಾಣಿಸುತ್ತದೆ.
ನಂತರ ತ್ರಿಷಾ ತಮ್ಮ ಇನ್ಟ್ಸಾಗ್ರಾಂ ಖಾತೆಯಲ್ಲಿ ಆ ಸಂಜೆ ತೆಗೆದ ಎರಡು ಸಿಂಗಲ್ ಫೋಟೋಗಳನ್ನು ಹಂಚಿಕೊಂಡು, “ನನ್ನನ್ನು ಸದಾ ಬೆಂಬಲಿಸುವುದಕ್ಕೆ ತುಂಬಾ ಧನ್ಯವಾದಗಳು” ಎಂದು ಬರೆದಿದ್ದಾರೆ. ಈ ಪೋಸ್ಟ್ಗೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾಮೆಂಟ್ ವಿಭಾಗದಲ್ಲಿ ಅಭಿನಂದನೆಗಳು ಮತ್ತು ಬೆಂಬಲ ಸಂದೇಶಗಳು ಹರಿದುಬಂದಿವೆ.
ವಿಜಯ್ ಮತ್ತು ತ್ರಿಷಾ ಹಲವಾರು ಜನಪ್ರಿಯ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದು, ಅವರಿಬ್ಬರ ನಡುವೆ ದೀರ್ಘಕಾಲದ ವೃತ್ತಿಪರ ಸಂಬಂಧವಿದೆ. ಈ ಕಾರ್ಯಕ್ರಮದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡುದು ಸಾಮಾಜಿಕ ಜಾಲತಾಣಗಳಲ್ಲಿ ಅವರ ಸ್ನೇಹದ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಇದರ ನಡುವೆ ವಿಜಯ್ ಅವರ ವೈಯಕ್ತಿಕ ಜೀವನವೂ ಇತ್ತೀಚೆಗೆ ಚರ್ಚೆಯಲ್ಲಿದೆ. ಅವರ ಪತ್ನಿ ಸಂಗೀತ ಸೋರ್ನಲಿಂಗಂ ಅವರು ಕಳೆದ ವರ್ಷ ಡಿಸೆಂಬರ್ ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. 27 ವರ್ಷಗಳ ವಿವಾಹ ಜೀವನವನ್ನು ಕೊನೆಗೊಳಿಸಲು “ನಿರಂತರ ಮಾನಸಿಕ ಹಿಂಸೆ, ನಿರ್ಲಕ್ಷ್ಯ ಮತ್ತು ತ್ಯಜನೆ” ಕಾರಣ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಹಾಗೂ ವಿಚಾರಣೆಯನ್ನು ಖಾಸಗಿಯಾಗಿ ನಡೆಸಲು ಮನವಿ ಮಾಡಿದ್ದಾರೆ.
ವಿಜಯ್ ಮತ್ತು ಸಂಗೀತಾ 1998ರಲ್ಲಿ ಇಂಗ್ಲೆಂಡ್ ನಲ್ಲಿ ವಿವಾಹವಾಗಿದ್ದು, ನಂತರ 1999ರಲ್ಲಿ ಭಾರತದಲ್ಲೂ ಮತ್ತೊಂದು ಸಮಾರಂಭ ನಡೆದಿತ್ತು. ಇತ್ತೀಚಿನ ವಾರಗಳಲ್ಲಿ ಇವರಿಬ್ಬರ ವಿಚ್ಛೇದನ ಪ್ರಕರಣ ಸಾರ್ವಜನಿಕ ಗಮನ ಸೆಳೆದಿದೆ.
ಫೆಬ್ರವರಿ 27ರಂದು ಸಂಗೀತಾ ಸಲ್ಲಿಸಿದ ವಿಚ್ಛೇದನ ಅರ್ಜಿಯ ವಿವರಗಳು ಆನ್ಲೈನ್ನಲ್ಲಿ ಹೊರಬಂದಿವೆ. ಚೆಂಗಲ್ಬೆಟ್ಟು ಫ್ಯಾಮಿಲಿ ಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಅವರು ವಿವಾಹ ಜೀವನವನ್ನು ಕೊನೆಗೊಳಿಸುವಂತೆ ಮನವಿ ಮಾಡಿದ್ದು, ದಾಂಪತ್ಯ ದ್ರೋಹ, ಮಾನಸಿಕ ಹಿಂಸೆ, ನಿರ್ಲಕ್ಷ್ಯ ಕಾರಣಗಳಾಗಿ ಉಲ್ಲೇಖಿಸಿದ್ದಾರೆ.
ಇದರ ಜೊತೆಗೆ ವಿಜಯ್ ಒಬ್ಬ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಈ ನಡುವೆ ವಿಚ್ಛೇದನ ಸಮಜಾಯಿಷಿಯ ಭಾಗವಾಗಿ ವಿಜಯ್ ಅವರು ಸಂಗೀತಾಗೆ ಸುಮಾರು 250 ಕೋಟಿ ರೂಪಾಯಿ ಪರಿಹಾರ ನೀಡಬಹುದು ಎಂಬ ವರದಿಗಳೂ ಹರಿದಾಡುತ್ತಿವೆ. ಈ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.
Advertisement