

ನಟ ಕಿರಣ್ ರಾಜ್ ನಾಯಕನಾಗಿ ನಟಿಸಿರುವ 'ಜಾಕಿ 42' ಚಿತ್ರದಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿ ಅರುಣ್ ಆಚಾರ್ ಗಮನ ಸೆಳೆದಿದ್ದಾರೆ. ಕಲಾವಿದರ ಕುಟುಂಬದಲ್ಲಿ ಜನಿಸಿದ ಅರುಣ್ ಮೈಸೂರಿನರಾಗಿದ್ದು ಅವರ ತಾತ ಚಿನ್ನ ಆಚಾರ್ ಕರ್ನಾಟಕ ಸಂಗೀತದಲ್ಲಿ ವಿದ್ವಾನ ಹಾಗೂ ನಾಟಕಗಳಲ್ಲಿ ಸಂಗೀತಗಾರರಾಗಿದ್ದರು. ತಾತನಂತೆ ಕಲಾ ಆಸಕ್ತಿ ಬೆಳೆಸಿಕೊಂಡ ಅರುಣ್ ಅಚಾರ್ ನಟನಾಗಿ ಜಾಕಿ 42 ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.
ಗುರುತೇಜ್ ಶೆಟ್ಟಿ ನಿರ್ದೇಶನದ ಗೋಲ್ಡನ್ ಗೇಟ್ ಬ್ಯಾನರ್ ನಡಿಯಲ್ಲಿ ಭಾರತಿ ಸತ್ಯನಾರಾಯಣ ನಿರ್ಮಾಣದ 'ಜಾಕಿ 42' ಚಿತ್ರದಲ್ಲಿ ಮುಖ್ಯ ಪಾತ್ರ ಒಂದರಲ್ಲಿ ಅರುಣ್ ಆಚಾರ್ ಅಭಿನಯಿಸಿದ್ದಾರೆ. ಹಾರ್ಸ್ ರೇಸ್ ಹಿನ್ನೆಲಿಯಲ್ಲಿ ನಡೆಯುವ ಕಥೆಯಲ್ಲಿ 'ಗಡ್ಡ ನಾಗ' ಎನ್ನುವ ಪಾತ್ರ ದಲ್ಲಿ ಕಾಣಿಸಿಕೊಂಡಿದ್ದಾರೆ. ಅರುಣ್ 'Ronny'ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದರು. ಅದರಲ್ಲಿ ಅವರ ಲುಕ್ ಸ್ಕ್ರೀನ್ ಪ್ರೆಸೆನ್ಸ್ ನೋಡಿ ಈ ಪಾತ್ರಕ್ಕೆ ಆಯ್ಕೆ ಮಾಡಿಕೊಂಡೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ಹೇಳಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ಅಭಿನಯಕ್ಕೆ ಮಹತ್ವ ಇರುವ ಗಟ್ಟಿ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳೊತ್ತೇನೆ ಎಂದು ಅರುಣ್ ಆಚಾರ್ ಹೇಳಿದರು. ಅರುಣ್ ಆಚಾರ್ ಅವರ ಲುಕ್ ಹಾಗೂ ಫಿಸಿಕ್ ನೋಡಿದರೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ ಎಂದು ಹೇಳಬಹುದು. ಸದ್ಯದಲ್ಲೇ 'ಜಾಕಿ 42' ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಲಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ U/A ಪ್ರಮಾಣ ಪತ್ರ ನೀಡಿದೆ.
ಕಿರಣ್ ರಾಜ್, ಹೃತಿಕ ಶ್ರೀನಿವಾಸ್, ಯುಕ್ತ ಶೆಟ್ಟಿ, ರಾಜೇಂದ್ರ ಕಾರಂತ್, ಬಾಲರಾಜ್ ವಾಡೆ, ಗಿರೀಶ್ ಹೆಗ್ಡೆ, ದೀಪಕ್ ರೈ, ಶಾಂತಲ ಕಾಮತ್ ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನ, ವಿನೋದ್ ಯಜಮಾನ್ಯ ಸಂಗೀತ ನಿರ್ದೇಶನ, ಭೂಷಣ್ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ.