ಬ್ಯಾಂಕಾಕ್: ಬಾಹುಬಲಿ ಚಿತ್ರದ ಮೂಲಕ ಇಡೀ ವಿಶ್ವಕ್ಕೆ ಪರಿಚಿತರಾದ ಟಾಲಿವುಡ್ ನಟ ಪ್ರಭಾಸ್ ಇದೀಗ ಪ್ರತಿಷ್ಟಿತ ಮೇಡಂ ಟ್ಯೂಸಾಡ್ಸ್ ಮ್ಯೂಸಿಯಂನಿಂದ ದೊಡ್ಡ ಗೌರವಕ್ಕೆ ಪಾತ್ರರಾಗಿದ್ದಾರೆ.
ಹೌದು ಖ್ಯಾತನಾಮರ ಮೇಣದ ಪ್ರತಿಮೆ ಮೂಲಕ ವಿಶ್ವವಿಖ್ಯಾತಿ ಗಳಿಸಿರುವ ಮೇಡಂ ಟ್ಯೂಸಾಡ್ಯ್ ಮ್ಯೂಸಿಯಂ ನಟ ಪ್ರಭಾಸ್ ಅವರನ್ನು ಗೌರವಿಸಿದ್ದು, ಬ್ಯಾಂಕಾಕ್ ನಲ್ಲಿರುವ ತಮ್ಮ ಮ್ಯೂಸಿಯಂನಲ್ಲಿ ನಟ ಪ್ರಭಾಸ್ ಅವರ ಮೇಣದ ಪ್ರತಿಮೆಯನ್ನು ನಿರ್ಮಿಸಿದೆ. ಇತ್ತೀಚೆಗೆ ತೆರೆಕಂಡು ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಚಲನಚಿತ್ರರಂಗ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ಬಾಹುಬಲಿ-2 ಚಿತ್ರದಲ್ಲಿನ ಒಂದು ಅವತಾರವನ್ನು ಮೇಡಂ ಟ್ಯೂಸಾಡ್ಸ್ ಮ್ಯೂಸಿಯಂನಲ್ಲಿ ಮೇಣದ ಪ್ರತಿಮೆಯಾಗಿ ರೂಪಿಸಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ.
ಇನ್ನು ನಟ ಪ್ರಭಾಸ್ ಈ ಗೌರವಕ್ಕೆ ಪಾತ್ರರಾದ ದಕ್ಷಿಣ ಭಾರತದ ಮೊದಲ ನಟ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಬಾಲಿವುಡ್ ನ ಹಲವು ಖ್ಯಾತನಾಮರು, ಕ್ರೀಡಾಲೋಕದ ದಿಗ್ಗಜರು ಮೇಡಂ ಟ್ಯೂಸಾಡ್ಸ್ ನಿಂದ ಮೇಣದ ಪ್ರತಿಮೆ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ನಟ ಪ್ರಭಾಸ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಚ್ಚರಿ ಎಂದರೆ ದಕ್ಷಿಣ ಭಾರತದ ಖ್ಯಾತ ನಟರಾದ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಕೇರಳ ಚಿತ್ರರಂಗದ ಮೋಹನ್ ಲಾಲ್, ಮಮ್ಮುಟಿ ರಂತಹ ದಿಗ್ಗಜ ನಟರಿಗೂ ಸಿಗದ ಅಪರೂಪದ ಈ ಗೌರವಕ್ಕೆ ನಟ ಪ್ರಭಾಸ್ ಪಾತ್ರರಾಗಿರುವುದು ಅಚ್ಚರಿ ತಂದಿದೆ. ಈ ಹಿಂದೆಯೇ ಬಾಹುಬಲಿ ನಿರ್ದೇಶಕ ರಾಜಮೌಳಿ ಟ್ವಿಟರ್ ನಲ್ಲಿ ಈ ವಿಚಾರ ಬಹಿರಂಗ ಪಡಿಸಿದ್ದರಾದರೂ, ಇದೀಗ ರಮೇಶ್ ಬಾಲಾ ಎಂಬ ಟ್ವಿಟರ್ ಖಾತೆದಾರರು ಪ್ರಭಾಸ್ ಮೇಣದ ಪ್ರತಿಮೆ ಅನಾವರಣಗೊಂಡ ವಿಚಾರವನ್ನು ಟ್ವೀಟ್ ಮಾಡಿದ್ದಾರೆ.
Advertisement