ಕೇಂದ್ರ ಸರಕಾರ ಅತ್ಯಂತ ಲಾಭದಾಯಕವಾಗಿದ್ದ ಎಲ್ಐಸಿ ಸಂಸ್ಥೆಯ 3.5 ಪ್ರತಿಶತ ಷೇರುಗಳನ್ನ ಮಾರಾಟಕ್ಕಿಟ್ಟದ್ದು ಮುಂದೊಂದು ದಿನ ಅದನ್ನ ಪೂರ್ಣವಾಗಿ ಖಾಸಗೀಕರಣಗೊಳಿಸುವ ಮೊದಲ ಹಂತವೆಂದು ಹಲವರು ವಿಮರ್ಶಿಸಿದ್ದರು. ಗಮನಿಸಿ ನೋಡಿ ಯಾವಾಗ ಕೆಲವೊಂದು ಪಬ್ಲಿಕ್ ಸೆಕ್ಟರ್ ಸಂಸ್ಥೆಗಳು ಅಥವಾ ಪೂರ್ಣ ಸರಕಾರಿ ಸಂಸ್ಥೆಗಳು ನಿಗದಿತ ರೀತಿಯಲ್ಲಿ ಫಲಿತಾಂಶವನ್ನ ನೀಡದೆ ಕಾರ್ಯ ನಿರ್ವಹಿಸುತ್ತದೆ ಆಗ ಅವುಗಳಲ್ಲಿ ಕಾರ್ಯ ಕ್ಷಮತೆಯನ್ನ ಹೆಚ್ಚಿಸುವ ಸಲುವಾಗಿ ಅವುಗಳನ್ನ ಖಾಸಗೀಕರಣಗೊಳಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂಸ್ಥೆ ಹೆಚ್ಚು ಲಾಭದಾಯಕವಾಗಿದ್ದರು ಅವುಗಳನ್ನ ಖಾಸಗೀಕರಣಗೊಳಿಸುವ ಉದ್ದೇಶ ಎದ್ದು ಕಾಣುತ್ತಿದೆ.
ಸರಕಾರದ ಕೆಲಸ ಕೇವಲ ಲಾಭ ಮಾಡುವುದಷ್ಟೇ ಅಲ್ಲ, ಸೇವೆ ನೀಡುವುದು ಕೂಡ ಹೌದು, ಆ ನಿಟ್ಟಿನಲ್ಲಿ ಹಲವಾರು ಸಂಸ್ಥೆಗಳನ್ನ ಸರಕಾರ ನಡೆಸುವುದು ಒಳ್ಳೆಯದು. ಈ ಮಾತುಗಳು ಚರ್ಚೆಗೆ ಬರಲು ಕಾರಣ ಎಲೆಕ್ಟ್ರಿಸಿಟಿ ಅಮೆಂಡ್ಮೆಂಟ್ ಬಿಲ್ 2022. ಹೌದು ಈ ಎಲೆಕ್ಟ್ರಿಸಿಟಿ ಪ್ರೈವೆಟೈಸೇಷನ್ ಬಿಲ್ (ವಿದ್ಯುತ್ ಖಾಸಗೀಕರಣ ಮಸೂದೆ)ನ್ನು ಸೋಮವಾರ ಅಂದರೆ 08/08/2022 ರಂದು ಲೋಕಸಭೆಯ ಪಾರ್ಲಿಮೆಂಟರಿ ಬೋರ್ಡ್ ಎದುರು ಒಪ್ಪಿಗೆಗೆ ಇಡಲಾಗಿದೆ. ಹೀಗೆ ವಿದ್ಯುತ್ ಖಾಸಗೀಕರಣ ಗೊಳಿಸುವುದರಿಂದ ಆಗುವ ಸಾಧಕ ಮತ್ತು ಬಾಧಕಗಳನ್ನ ನೋಡೋಣ.
ಒಂದು ಸಂಸ್ಥೆಯ ಮಾಲೀಕತ್ವ, ಆಪರೇಷನ್ ಮತ್ತು ಕಂಟ್ರೋಲ್ ಹೀಗೆ ಎಲ್ಲವನ್ನೂ ಸರಕಾರಿ ಅಥವಾ ಪಬ್ಲಿಕ್ ಸೆಕ್ಟರ್ ಪರಿಧಿಯಿಂದ ಹೊರತೆಗೆದು ಮೂರನೆಯ ವ್ಯಕ್ತಿಗೆ ಅಥವಾ ಸಂಸ್ಥೆಗೆ ನೀಡುವ ಕ್ರಿಯೆಗೆ ಖಾಸಗೀಕರಣ ಎನ್ನುತ್ತಾರೆ. ಸಾಮಾನ್ಯವಾಗಿ ಆರ್ಥಿಕವಾಗಿ ಮತ್ತು ಕಾರ್ಯಕ್ಷಮತೆ ಎರಡರಲ್ಲೂ ಇನ್ನಿಲ್ಲದ ಸೋಲು ಕಂಡ ಸಂಸ್ಥೆಗಳನ್ನ ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಇಂತಹ ಖಾಸಗೀಕರಣವನ್ನ ಮಾಡಲಾಗುತ್ತದೆ.
ನಮ್ಮೆಲ್ಲರ ಮನೆಯಲ್ಲಿ ಹಿಂದೆ ಬಿಎಸ್ಎನ್ಎಲ್ ವತಿಯಿಂದ ಲ್ಯಾಂಡ್ಲೈನ್ ಇದ್ದವು, ಬಿಲ್ ಅಲ್ಲಿಂದ ಬರುತ್ತಿತ್ತು ಅಲ್ಲವೇ? ಈಗೇನಾಗಿದೆ ಆ ಜಾಗದಲ್ಲಿ ಹಲವಾರು ಸೇವೆ ನೀಡುವ ಸಂಸ್ಥೆಗಳು ಬಂದಿವೆ. ಗ್ರಾಹಕನ ಮುಂದೆ ಯಾರ ಸೇವೆಯನ್ನ ಪಡೆಯ ಬೇಕು ಎನ್ನುವ ಆಯ್ಕೆ ಇರುತ್ತದೆ. ಇದೆ ಮಾದರಿಯಲ್ಲಿ ವಿದ್ಯುತ್ ಸರಬರಾಜು ಮಾಡುವ ಹಲವಾರು ಸಂಸ್ಥೆಗಳು ಇದ್ದರೆ ಒಳ್ಳೆಯದು ಎನ್ನುವುದು ಈ ಬಿಲ್ ನ ಉದ್ದೇಶ. ಅರ್ಥ ಬಹಳ ಸರಳ ಈಗಾಗಲೇ ವಿದ್ಯುತ್ ಬಿಲ್ ಗಳ ಹಣವನ್ನ ವಸೂಲಿ ಮಾಡುವುದು ಖಾಸಗೀಕರಣಗೊಳಿಸಲಾಗಿದೆ, ಅದೇ ರೀತಿಯಲ್ಲಿ ವಿದ್ಯುತ್ ಸರಬರಾಜು ಕೂಡ ಹಲವಾರು ಖಾಸಗಿ ಸಂಸ್ಥೆಗಳಿಗೆ ನೀಡಿದರೆ ಆಗ ಗ್ರಾಹಕ ತನಗೆ ಯಾರು ಬೇಕು ಅವರಿಂದ ವಿದ್ಯುತ್ ಪಡೆಯಬಹುದು. ಟೆಲಿಕಾಮ್ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಯನ್ನ ನೀವು ಗಮನಿಸಿ ನೋಡಿ, ಈ ಬಿಲ್ ಪಾಸಾದರೆ ವಿದ್ಯುತ್ ಕ್ಷೇತ್ರದಲ್ಲಿ ಕೂಡ ಅದೇ ರೀತಿಯ ಬದಲಾವಣೆಯನ್ನ ನೀವು ಕಾಣಬಹುದು.
ಈಗ ನಿಮ್ಮಲ್ಲಿ ಒಂದು ಪ್ರಶ್ನೆ ಉದ್ಭವಾಗಿರುತ್ತದೆ, ಜಿಡ್ಡುಗಟ್ಟಿದ ಸರಕಾರಿ ಸಂಸ್ಥೆಗಳಿಗೆ ಸರಿಯಾಗಿ ಬುದ್ದಿ ಕಲಿಸಲು ಕಾರ್ಯ ಕ್ಷೇತ್ರವನ್ನ ಖಾಸಗೀಕರಣಗೊಳಿಸುವುದು ಒಳ್ಳೆಯದು ಅದಕ್ಕೇಕೆ ರೈತರು ಮತ್ತು ಅಲ್ಲಿನ ಸಿಬ್ಬಂದಿ ತಕರಾರು ಎತ್ತಬೇಕು?
ಗಮನಿಸಿ ಭಾರತದಲ್ಲಿ ಎಲ್ಲರಿಗೂ ಸಾಮಾಜಿಕ ಭದ್ರತೆಯಿಲ್ಲ. ಇಲ್ಲಿ ಎಲ್ಲದಕ್ಕೂ ಹಣವನ್ನ ತೆರಬೇಕಾದ ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ 27 ಲಕ್ಷ ಸಿಬ್ಬಂದಿ ತಮ್ಮ ಮುಂದಿನ ಭವಿಷ್ಯ ನೆನೆದು ಅಭದ್ರತೆಯಲ್ಲಿ ಜೀವನ ಸಾಗಿಸಬೇಕಾಗುತ್ತದೆ. ವರ್ಷಾನುಗಟ್ಟಲೆ ಅಲ್ಲಿ ಕೆಲಸ ಮಾಡಿರುವ ಜನ ಬೇರೆ ಕ್ಷಮತೆ, ಕೌಶಲ್ಯವಿಲ್ಲದ ಕಾರಣ ಬೇರಾವ ಕೆಲಸ ಕೂಡ ಮಾಡಲಾಗದ ಸ್ಥಿತಿಯನ್ನ ತಲುಪಿರುತ್ತಾರೆ. ಒಮ್ಮೆಲೇ ಎದುರಾಗುವ ಇಂತಹ ಸ್ಥಿತಿಯನ್ನ ಎದುರಿಸುವ ತಾಕತ್ತು ಅವರಿಗಿರುವುದಿಲ್ಲ.
ಇನ್ನು ರೈತರಿಗೆ ಡಿಸ್ಕೌಂಟ್ ಬೆಲೆಯಲ್ಲಿ, ಕೆಲವೊಮ್ಮೆ ಉಚಿತ ವಿದ್ಯುತ್ ಕೂಡ ನೀಡಲಾಗುತ್ತಿದೆ. ಇದು ನಿಲ್ಲುತ್ತದೆ ಎನ್ನುವ ಭಯ ಅವರದು. ಇಂದಿಗೆ ಸರಕಾರ ಹಾಗೇನಿಲ್ಲ ರೈತರಿಗೆ ನೀಡುತ್ತಿರುವ ಸವಲತ್ತು ಮುಂದುವರೆಸುತ್ತೇವೆ ಎನ್ನುತ್ತಿದೆ. ಆದರೆ ಗಮನಿಸಿ ಗ್ಯಾಸ್ ಸಬ್ಸಿಡಿ ಸಮಯದಲ್ಲಿ ಕೂಡ ಸರಕಾರ ಇದೆ ರೀತಿ ಮಾಡಿತು. ಮೊದಲು ಸ್ವಇಚ್ಛೆಯಿಂದ ಬಿಡಿ, ಬಿಟ್ಟವರು ಬಿಡಬಹುದು, ಇಲ್ಲದವರು ಬೇಡ ಎಂದಿತು, ಆಮೇಲೆ ಸದ್ದಿಲ್ಲದೇ ಎಲ್ಲರ ಸಬ್ಸಿಡಿ ತೆಗೆದು ಬಿಟ್ಟಿತು. ನಾಳೆ ರೈತರಿಗೆ ಸಿಗುತ್ತಿರುವ ಉಚಿತ ಅಥವಾ ಸಬ್ಸಿಡಿ ವಿದ್ಯುತ್ ಕಥೆಯೂ ಹೀಗೆ ಆಗುತ್ತದೆ ಎನ್ನುವ ಭಯ ಅವರದು.
ಕೊನೆ ಮಾತು: ಖಾಸಗೀಕರಣ ಖಂಡಿತ ತಪ್ಪಲ್ಲ, ಸಂಪನ್ಮೂಲಗಳ ಗರಿಷ್ಟ ಬಳಕೆಗೆ, ಉತ್ತಮ ಸೇವೆಗೆ ಮತ್ತು ಹೆಚ್ಚಿನ ಲಾಭ ತೆಗೆಯಲು ಖಾಸಗೀಕರಣ ಉತ್ತಮ ಮಾರ್ಗ. ಆದರೆ ಯಾವ ಸಮಯದಲ್ಲಿ ಯಾವುದನ್ನ ಖಾಸಗೀಕರಣಗೊಳಿಸಬೇಕು ಎನ್ನುವುದು ಕೂಡ ಮುಖ್ಯ. ಸರಕಾರ ಎಲ್ಲವನ್ನೂ ಖಾಸಗೀಕರಣಗೊಳಿಸುತ್ತಾ ಕೇವಲ ತೆರಿಗೆ ಸಂಗ್ರಹಣೆಯಲ್ಲಿ ಮಾತ್ರ ತೊಡಗಿಸಿಕೊಳ್ಳುವುದು ಸಾಧುವಲ್ಲ. ಹೀಗೆ ಖಾಸಗೀಕರಣಗೊಳಿಸುವ ಮುನ್ನ ಸಮಾಜದಲ್ಲಿ ಪ್ರಬಲ ಸಾಮಾಜಿಕ ಭದ್ರತೆಯನ್ನ ಸೃಷ್ಟಿಸಬೇಕು. ಆ ನಂತರ ಏನಾದರೂ ಜನರ ಬೆಂಬಲ ಇರುತ್ತದೆ. ಹೀಗೆ ಏಕಾಏಕಿ ಖಾಸಗೀಕರಣ ಭಾರತದ ಮಟ್ಟಿಗೆ ಒಳ್ಳೆಯದಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement