social_icon

ಆಲ್ಝೈಮರ್ಸ್ ಕಾಯಿಲೆ ಅಥವಾ Alzheimer's Disease (ಕುಶಲವೇ ಕ್ಷೇಮವೇ)

ಮಾನವರಲ್ಲಿ ವಯಸ್ಸಾದ ಮೇಲೆ ಹಲವಾರು ವಿಷಯಗಳು ಮರೆತುಹೋಗುವುದು ಸಾಮಾನ್ಯ. ಕೆಲವರಲ್ಲಿ ಮರೆವಿನ ಕಾಯಿಲೆ ಡಿಮೆನ್ಷಿಯಾ ಮತ್ತು ನೆನಪಿನ ನಷ್ಟ ತೀವ್ರವಾಗುವ ಆಲ್ಝೈಮರ್ಸ್ ಕಾಯಿಲೆಗಳು ಬರುತ್ತವೆ. ಇತ್ತೀಚೆಗೆ ಆಲ್ಝೈಮರ್ಸ್ ರೋಗದ ಬಗ್ಗೆ ನಾವು ಕೇಳುತ್ತಲೇ ಇರುತ್ತವೆ.

Published: 08th July 2023 12:15 PM  |   Last Updated: 08th July 2023 06:20 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source :

ಮಾನವರಲ್ಲಿ ವಯಸ್ಸಾದ ಮೇಲೆ ಹಲವಾರು ವಿಷಯಗಳು ಮರೆತುಹೋಗುವುದು ಸಾಮಾನ್ಯ. ಕೆಲವರಲ್ಲಿ ಮರೆವಿನ ಕಾಯಿಲೆ ಡಿಮೆನ್ಷಿಯಾ ಮತ್ತು ನೆನಪಿನ ನಷ್ಟ ತೀವ್ರವಾಗುವ ಆಲ್ಝೈಮರ್ಸ್ ಕಾಯಿಲೆಗಳು ಬರುತ್ತವೆ. ಇತ್ತೀಚೆಗೆ ಆಲ್ಝೈಮರ್ಸ್ ರೋಗದ ಬಗ್ಗೆ ನಾವು ಕೇಳುತ್ತಲೇ ಇರುತ್ತವೆ.

ಆಲ್ಝೈಮರ್ಸ್ ಕಾಯಿಲೆಯ ಮೊದಲ ಲಕ್ಷಣವು ಇತ್ತೀಚಿನ ಘಟನೆಗಳನ್ನು ನೆನಪಿಟ್ಟುಕೊಳ್ಳುವಲ್ಲಿ ತೊಂದರೆಯಿಂದ ಶುರುವಾಗುತ್ತದೆ. ಆದರೆ ನಿಧಾನವಾಗಿ ರೋಗವು ಮುಂದುವರೆದಂತೆ ಅದರ ಲಕ್ಷಣಗಳು ಹೆಚ್ಚಾಗುತ್ತವೆ. ಮಾತನಾಡಲು ತೊಂದರೆ, ದಿಗ್ಭ್ರಮೆ, ಮನಸ್ಥಿತಿ ಬದಲಾವಣೆಗಳು, ನಿರ್ಲಕ್ಷ್ಯ ಮತ್ತು ವರ್ತನೆಯ ಸಮಸ್ಯೆಗಳು ಎದುರಾಗುತ್ತವೆ. ಇದರ ಪರಿಣಾಮವಾಗಿ ಆಲ್ಝೈಮರ್ಸ್ ರೋಗಿಗಳು ಮನೆಯವರಿಂದ ಮತ್ತು ಸುತ್ತಲಿನ ಜನರಿಂದ ಬೇರೆಯಾಗುತ್ತಾ ಹೋಗುತ್ತಾರೆ. ಅವರನ್ನು ವೈದ್ಯರಿಗೆ ತೋರಿಸಿ ಮನೆಯಲ್ಲಿ ವಿಶೇಷವಾಗಿ ಆರೈಕೆ ಮಾಡಬೇಕಾಗುತ್ತದೆ. ಇದರಿಂದ ಅವರ ಜೀವಿತಾವಧಿಗೆ ಪರಿಣಾಮ ಉಂಟಾಗುತ್ತದೆ.

ಆಲ್ಝೈಮರ್ಸ್ ಕಾಯಿಲೆ ಎಂದರೇನು?
ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ಆಲ್ಝೈಮರ್ಸ್ ಕಾಯಿಲೆ ಎಂದರೆ ವಯಸ್ಸಾದಂತೆ ಮೆದುಳಿನ ಮೇಲೆ ಪರಿಣಾಮ ಬೀರುವ ಕ್ರಮೇಣ ಹೆಚ್ಚಾಗುತ್ತಲೇ ಹೋಗುವ ನರವೈಜ್ಞಾನಿಕ ಅಸ್ವಸ್ಥತೆ. ಇದರಲ್ಲಿ ಮೊದಲನೆಯದಾಗಿ ನೆನಪಿನ ಶಕ್ತಿ ಕಡಿಮೆಯಾಗುತ್ತದೆ ಮತ್ತು ಅರಿವು ನಷ್ಟವಾಗುತ್ತಾ ಹೋಗುತ್ತದೆ. ಬುದ್ಧಿಯು ದಿನಗಳು ಕಳೆದಂತೆ ಮಂದವಾಗುತ್ತಾ ಹೋಗುತ್ತದೆ.

ಈ ರೋಗಕ್ಕೆ ನಿಖರವಾದ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ಇದು ಅನುವಂಶಿಕ, ಜೀವನಶೈಲಿ ಮತ್ತು ಪರಿಸರ ಅಂಶಗಳ ಸಂಯೋಜನೆ ಎಂದು ಹೇಳಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಮತ್ತು ಖ್ಯಾತ ಇಂಗ್ಲೀಷ್ ಕವಿ ನಿಸ್ಸೀಮ್ ಎಜೆಕಿಲ್ ಆಲ್ಝೈಮರ್ಸ್ ರೋಗಕ್ಕೆ ತುತ್ತಾದವರಲ್ಲಿ ಪ್ರಮುಖರು. ಭಾರತದಲ್ಲಿ ಸುಮಾರು 40 ಲಕ್ಷ ಡಿಮೆನ್ಷಿಯಾ/ಆಲ್ಝೈಮರ್ಸ್ ರೋಗಿಗಳು ಇರಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಡಿಸ್ಲೆಕ್ಸಿಯಾ: ಇದು ಕಾಯಿಲೆ ಅಲ್ಲ; ಆತಂಕ ಬೇಡ, ಕಾಳಜಿ ಇರಲಿ

ಈ ರೋಗವು ಸಾಮಾನ್ಯವಾಗಿ ಸೌಮ್ಯ ಸ್ಮರಣಶಕ್ತಿಯ ನಷ್ಟ ಮತ್ತು ಗೊಂದಲದಿಂದ ಪ್ರಾರಂಭವಾಗುತ್ತದೆ ಮತ್ತು ಕಾಲಾನಂತರದಲ್ಲಿ ಉಲ್ಬಣಗೊಳ್ಳುತ್ತದೆ. ಇದು ಮುಂದುವರೆದಂತೆ, ವ್ಯಕ್ತಿಗಳು ಭಾಷೆ, ಸಮಸ್ಯೆ-ಪರಿಹರಿಸುವುದು, ನಿರ್ಧಾರ ತೆಗೆದುಕೊಳ್ಳುವುದು ಮತ್ತು ದೈನಂದಿನ ಕಾರ್ಯಗಳನ್ನು ನಿರ್ವಹಿಸುವಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಡವಳಿಕೆಯ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ. ಮೆದುಳಿನ ನರಕೋಶಗಳು ಕ್ರಮೇಣ ನಶಿಸುತ್ತವೆ. ಅಲ್ಲಿರುವ ಅಂಗಾಂಶಗಳು ಕುಗ್ಗತೊಡಗುತ್ತವೆ. ಈ ಬದಲಾವಣೆಗಳಿಂದ ನರಕೋಶಗಳ ನಡುವೆ ಸಾಮಾನ್ಯ ಸಂವಹನಕ್ಕೆ ಅಡ್ಡಿಯಾಗುತ್ತದೆ ಮತ್ತು ಅರಿವಿನ ಕಾರ್ಯ ನಿಧಾನವಾಗಿ ದುರ್ಬಲವಾಗುತ್ತದೆ.

ಆಲ್ಝೈಮರ್ಸ್ ಕಾಯಿಲೆಗೆ ಚಿಕಿತ್ಸೆ
ಈ ಕಾಯಿಲೆಗೆ ಸದ್ಯಕ್ಕೆ ಯಾವುದೇ ನಿಖರವಾದ ಚಿಕಿತ್ಸೆ ಇಲ್ಲ, ಆದರೆ ರೋಗಲಕ್ಷಣಗಳನ್ನು ನಿರ್ವಹಿಸಲು ಮತ್ತು ಅವುಗಳು ಹೆಚ್ಚಾಗದಂತೆ ತಡೆಯಲು ಔಷಧಿ-ಚಿಕಿತ್ಸೆಗಳು ಇವೆ. ಹೆಚ್ಚುವರಿಯಾಗಿ, ಅರಿವಿನ ಪ್ರಚೋದನೆ ಚಿಕಿತ್ಸೆ ಮತ್ತು ದೈನಂದಿನ ಚಟುವಟಿಕೆಗಳೊಂದಿಗೆ ಸಹಾಯವನ್ನು ಒಳಗೊಂಡಂತೆ ಆರೈಕೆಯು ರೋಗಿಗಳು ಮತ್ತು ಅವರ ಆರೈಕೆ ಮಾಡುವವರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ಇನ್ನೂ ನಡೆಯುತ್ತಿವೆ. ಈ ಚಿಕಿತ್ಸೆಗಳ ಪರಿಣಾಮಕಾರಕತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಮತ್ತು ಅವುಗಳು ರೋಗಲಕ್ಷಣಗಳ ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡಬಹುದು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

ಎಲ್ಲಕ್ಕಿಂತ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಆಲ್ಝೈಮರ್ಸ್ ರೋಗಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಈ ಕಾಯಿಲೆಯನ್ನು ನಿಧಾನಗೊಳಿಸುತ್ತದೆ. ನಿಯಮಿತ ದೈಹಿಕ ವ್ಯಾಯಾಮ, ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರ, ಸಾಕಷ್ಟು ನಿದ್ರೆ, ಉತ್ತಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿಕೆ ಮತ್ತು ಮನಸ್ಸನ್ನು ಉಲ್ಲಾಸವಾಗಿ ಇಟ್ಟುಕೊಳ್ಳುವುದರಿಂದ ಸಾಕಷ್ಟು ಪರಿಹಾರ ಸಾಧ್ಯ.

ಇದನ್ನೂ ಓದಿ: ಮೂತ್ರಪಿಂಡ ವೈಫಲ್ಯ ಅಥವಾ Kidney failure

ಈ ಕಾಯಿಲೆಯ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು, ಆದರೆ ಕೆಲವು ಸಾಮಾನ್ಯ ರೋಗಲಕ್ಷಣಗಳು ಹೀಗಿವೆ:

  • ಜ್ಞಾಪಕ ಶಕ್ತಿ ಕಳೆದುಕೊಳ್ಳುವುದು: ಇತ್ತೀಚಿಗೆ ತಿಳಿದುಕೊಂಡ ಮಾಹಿತಿ, ಪ್ರಮುಖ ದಿನಾಂಕಗಳು ಅಥವಾ ಘಟನೆಗಳನ್ನು ಮರೆತುಬಿಡುವುದು ಮತ್ತು ಅದೇ ಮಾಹಿತಿಯನ್ನು ಪದೇ ಪದೇ ಕೇಳುವುದು ಸಾಮಾನ್ಯ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ.
  • ಸಮಸ್ಯೆ-ಪರಿಹರಿಸುವ ಅಥವಾ ಯೋಜನೆ ಮಾಡುವಲ್ಲಿ (ಪ್ಲಾನಿಂಗ್) ತೊಂದರೆ: ವ್ಯಕ್ತಿಗಳು ಏನಾದರೂ ಪ್ಲಾನ್ ಮಾಡಲು ಮತ್ತು ಅದನ್ನು ಅನುಸರಿಸುವಲ್ಲಿ, ಸಂಖ್ಯೆಗಳೊಂದಿಗೆ ಕೆಲಸ ಮಾಡುವಾಗ ಅಥವಾ ಗೊತ್ತಿರುವ ಕೆಲಸಗಳನ್ನು ಮಾಡುವಾಗ ಸವಾಲುಗಳನ್ನು ಎದುರಿಸಬಹುದು.
  • ಸಮಯ ಅಥವಾ ಸ್ಥಳದೊಂದಿಗೆ ಗೊಂದಲ: ಪರಿಚಿತ ಜನರು, ಅವರಿಗೆ ಸಂಬಂಧಪಟ್ಟ ಹುಟ್ಟಿದ ದಿನ, ಮದುವೆ ದಿನಾಂಕಗಳು, ಋತುಗಳು, ತಾವು ಎಲ್ಲಿದ್ದೇವೆ ಅಥವಾ ಅಲ್ಲಿಗೆ ಹೇಗೆ ಬಂದರು ಎಂಬುದನ್ನು ಅವರು ಮರೆತುಬಿಡಬಹುದು.
  • ಚೆನ್ನಾಗಿ ಗೊತ್ತಿರುವ ಮತ್ತು ಜೀವನವಿಡೀ ಮಾಡಿದ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ತೊಂದರೆ: ತಮ್ಮ ಇಡೀ ಜೀವನದಲ್ಲಿ ಮಾಡಿದ ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸಲು ಹೆಣಗಾಡಬಹುದು, ಉದಾಹರಣೆಗೆ ಪರಿಚಿತ ಸ್ಥಳಕ್ಕೆ ಚಾಲನೆ ಮಾಡುವುದು ಅಥವಾ ಹಣಕಾಸು ನಿರ್ವಹಣೆ.
  • ಭಾಷಾ ಸಮಸ್ಯೆಗಳು: ತಮ್ಮ ಆಭಿಪ್ರಾಯಗಳನ್ನು ಸರಿಯಾಗಿ ವ್ಯಕ್ತಪಡಿಸಲು ಅಥವಾ ಸಂಭಾಷಣೆಗಳನ್ನು ಅನುಸರಿಸಲು ಸರಿಯಾದ ಪದಗಳನ್ನು ಕಂಡುಹಿಡಿಯುವಲ್ಲಿ ತೊಂದರೆ ಹೊಂದಿರಬಹುದು. ಅವರು ಓದಲು ಅಥವಾ ಬರೆಯಲು ಸಹ ಬಹಳ ತೊಂದರೆ ಅನುಭವಿಸುತ್ತಾರೆ.
  • ಕೆಲಸ ಅಥವಾ ಸಾಮಾಜಿಕ ಚಟುವಟಿಕೆಗಳಿಂದ ದೂರ ಉಳಿಯುವುದು: ಕ್ರಮೇಣ ಹವ್ಯಾಸಗಳು, ಸಾಮಾಜಿಕ ಚಟುವಟಿಕೆಗಳು, ಕೆಲಸದ ಯೋಜನೆಗಳು ಅಥವಾ ಕ್ರೀಡೆಗಳಿಂದ ತಾವು ಅನುಭವಿಸುತ್ತಿರುವ ತೊಂದರೆಗಳ ಕಾರಣದಿಂದ ದೂರವಾಗುತ್ತಾರೆ.
  • ಮನಸ್ಥಿತಿ ಅಥವಾ ವ್ಯಕ್ತಿತ್ವದಲ್ಲಿನ ಬದಲಾವಣೆಗಳು: ಮನಸ್ಥಿತಿ ಬದಲಾವಣೆಗಳು, ಖಿನ್ನತೆ, ಆತಂಕ, ಗೊಂದಲ ಮತ್ತು ಕಿರಿಕಿರಿ ಅನುಭವಿಸಬಹುದು. ಕೆಲವೊಮ್ಮೆ ಮೊಂಡುತನ ತೋರಬಹುದು.

ಇದನ್ನೂ ಓದಿ: ಲ್ಯುಕೇಮಿಯಾ ಅಥವಾ ಬ್ಲಡ್ ಕ್ಯಾನ್ಸರ್

ಅರವತ್ತು ವರ್ಷದ ನಂತರ ದೈಹಿಕ ಮತ್ತು ಮಾನಸಿಕವಾಗಿ ಸಕ್ರಿಯವಾಗಿರಬೇಕು. ನಮೆಗೇನು ನಮ್ಮ ಕಾಲ ಮುಗಿಯಿತು ಎಂದು ಕೈ ಚೆಲ್ಲಿ ಕೂರಬಾರದು. ಪ್ರತಿದಿನ ಕಾಲಕಾಲಕ್ಕೆ ಆಹಾರ, ವಿಹಾರ, ವಿಶ್ರಾಂತಿ ಮತ್ತು ಓದು, ಬರಹ, ಕಲೆ, ಸಾಹಿತ್ಯದಂತಹ ಸೃಜನಶೀಲ ಚಟುವಟಿಕೆಗಳಲಿ ತೊಡಗಿಕೊಂಡು ಚುರುಕಾಗಿರಬೇಕು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಮತ್ತು ಸಾಹಿತಿ ಎ ಎನ್ ಮೂರ್ತಿರಾವ್ ಕೊನೆಗಾಲದವರೆಗೂ ತುಂಬು ಚಟುವಟಿಕೆಯಿಂದ ಇದ್ದರು. ಬದುಕು ಹೆಚ್ಚು ಸಕ್ರಿಯವಾಗಿದ್ದಷ್ಟು ಒಳ್ಳೆಯದು. ಮೇಲೆ ಹೇಳಿದ ಸಮಸ್ಯೆಗಳು ಕಾಣಿಸಿಕೊಂಡು ದಿನೇ ದಿನೇ ಹೆಚ್ಚಾಗುತ್ತಿದ್ದರೆ ವೈದ್ಯರಿಗೆ ತೋರಿಸಬೇಕು ಮತ್ತು ರೋಗಿಗಳ ಪರಿಸ್ಥಿತಿಯನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com


Stay up to date on all the latest ಅಂಕಣಗಳು news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp