ಕೋಲ್ಕತಾ: ಈಡನ್ ಗಾರ್ಡನ್ಸ್ ನಲ್ಲಿ ರಾಷ್ಟ್ರಗೀತೆ ಹಾಡಿ ಎಲ್ಲರಲ್ಲೂ ರೋಮಾಂಚನ ಹುಟ್ಟಿಸಿದ್ದ ಅಮಿತಾಭ್ ಬಚ್ಚನ್ ಅವರು ರಾಷ್ಟ್ರಗೀತೆ ಹಾಡುವುದಕ್ಕೆ ಸಂಭಾವನೆ ಪಡೆದಿದ್ದಾರೆಂಬ ಹಲವು ಆರೋಪಗಳು ಕೇಳಿಬಂದಿದ್ದವು. ಇದೀಗ ಈ ಆರೋಪಗಳಿಗೆ ತೆರೆ ಎಳೆದಿರುವ ಅಧಿಕಾರಿಗಳು ರಾಷ್ಟ್ರಗೀತೆ ಹಾಡಲು ಬಿಗ್ ಬಿ ಅವರು ಒಂದು ಪೈಸೆಯನ್ನು ತೆಗೆದುಕೊಂಡಿರಲಿಲ್ಲ ಸ್ಪಷ್ಟಪಡಿಸಿದ್ದಾರೆ.
ಯಾವುದೇ ಕಾರ್ಯಕ್ರಮದಲ್ಲಿ ಹಾಜರಾಗುವುದಕ್ಕೂ ಮೊದಲು ಸೆಲೆಬ್ರಿಟಿಗಳು ಸಂಭಾವನೆ ಪಡೆಯುವುದು ಸಾಮಾನ್ಯ. ಅದರಲ್ಲೂ ಅಮಿತಾಭ್ ಬಚ್ಚನ್ ರಂತಹ ದೊಡ್ಡ ನಟರು ಸಂಭಾವನೆ ಪಡೆಯುವುದು ದೊಡ್ಡ ಮಟ್ಟದಲ್ಲೇ ಇರುತ್ತದೆ. ಇದರಂತೆ ಅಮಿತಾಭ್ ಬಚ್ಚನ್ ಅವರೂ ಕೂಡ ಭಾರತ-ಪಾಕಿಸ್ತಾನ ಟಿ-20 ವಿಶ್ವಕಪ್ ನಲ್ಲಿ ರಾಷ್ಟ್ರಗೀತೆ ಹಾಡಲು ಬರೋಬ್ಬರಿ ರು.4 ಕೋಟಿ ಸಂಭಾವನೆಯನ್ನು ಪಡೆದಿದ್ದಾರೆಂಬ ಆರೋಪಗಳು ಕೇಳಿಬಂದಿದ್ದವು.
ಅಲ್ಲದೆ, ರಾಷ್ಟ್ರಗೀತೆ ಹಾಡುವುದಕ್ಕೂ ಸಂಭಾವನೆ ಪಡೆದಿರುವುದು ಸರಿಯಲ್ಲ ಎಂದು ಹೇಳಿ ಅಮಿತಾಭ್ ಬಚ್ಚನ್ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗಿದ್ದವು.
ಇದೀಗ ಆರೋಪಗಳಿಗೆ ತೆರೆ ಎಳೆದಿರುವ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ)ಯ ಅಧಿಕಾರಿಗಳು, ಅಮಿತಾಭ್ ಬಚ್ಚನ್ ಅವರು ರಾಷ್ಟ್ರಗೀತೆ ಹಾಡಲು ಒಂದು ಪೈಸೆ ಹಣವನ್ನು ಪಡೆದುಕೊಂಡಿಲ್ಲ. ಅಲ್ಲದೆ, ವಿಮಾನದ ಟಿಕೆಟ್ ಕೂಡ ಅವರದ್ದೇ ಹಣದಿಂದ ಬುಕ್ ಮಾಡಿಕೊಂಡರು. ಹೋಟೆಲ್ ಖರ್ಚನ್ನೂ ಅವರೇ ಭರಿಸಿದರು ಎಂದು ಹೇಳಿದ್ದಾರೆ.
Advertisement