ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ ಐದು ವಿಕೆಟ್ ಗಳ ಭರ್ಜರಿ ಜಯಸಾಧಿಸಿತು. ಅಂತೆಯೇ 3-0 ಅಂತರದಲ್ಲಿ ಸರಣಿ ಗೆಲ್ಲುವ ಮೂಲಕ ಲಂಕಾ ವಿರುದ್ಧ ಮತ್ತೊಂದು ಸರಣಿಯನ್ನು ವೈಟ್ ವಾಶ್ ಮಾಡಿತು.
ಟಾಸ್ ಗೆದ್ದು ಲಂಕಾ ತಂಡಕ್ಕೆ ಭಾರತ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಭಾರತೀಯ ಬೌಲರ್ ಗಳ ಶಿಸ್ತಿನ ಬೌಲಿಂಗ್ ನಿಂದಾಗಿ ರನ್ ಗಳಿಸಲು ಪರದಾಡಿತು. ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಶ್ರೀಲಂಕಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 135 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಲಂಕಾ ಪರ ಗುಣರತ್ನೆ ಗಳಿಸಿದ 36 ರನ್ ಗಳೇ ಆ ತಂಡ ಆಟಗಾರನೊಬ್ಬನ ಗರಿಷ್ಠ ರನ್ ಗಳಿಕೆಯಾಗಿತ್ತು. ಭಾರತದ ಪರ ಉನಾದ್ಕತ್ ಮತ್ತು ಪಾಂಡ್ಯಾ ತಲಾ 2 ವಿಕೆಟ್ ಪಡೆದರೆ, ಸುಂದರ್, ಸಿರಾಜ್ ಮತ್ತು ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.
ಲಂಕಾ ನೀಡಿದ 136ರನ್ ಗಳ ಗುರಿ ಬೆನ್ನುಹತ್ತಿದ ಭಾರತಕ್ಕೆ ಕಳೆದ ಪಂದ್ಯದ ಹೀರೋ ರೋಹಿತ್ ಶರ್ಮಾ ಆಸೆಯಾಗುತ್ತಾರೆ ಎನ್ನುವಾಗಲೇ ರೋಹಿತ್ 27 ರನ್ ಗಳಿಸಿ ಔಟ್ ಆದರು. ಬಳಿಕ ಶ್ರೇಯಸ್ ಅಯ್ಯರ್ ಮತ್ತು ಮನೀಷ್ ಪಾಂಡೆ ಜೋಡಿ ಭಾರತದ ಇನ್ನಿಂಗ್ಸ್ ಚುರುಕು ನೀಡಿದರು. ಅಯ್ಯರ್ 30 ರನ್ ಗಳಿಸಿ ಔಟ್ ಆದರೆ, ಪಾಂಡೆ ಕೂಡ 32 ರನ್ ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆ ಗೂಡಿದ ಧೋನಿ ಹಾಗೂ ದಿನೇಶ್ ಕಾರ್ತಿಕ್ ಸಮಯೋಚಿತ ಆಟದ ಪ್ರದರ್ಶನ ನೀಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ ಭಾರತ ತಂಡ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು 139 ರನ್ ಗಳಿಸಿ ಪಂದ್ಯ ಜಯಿಸಿತು.
ಅಂತೆಯೇ 3 ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಲ್ಲಿ ಗೆಲ್ಲುವ ಮೂಲಕ ಲಂಕಾ ವಿರುದ್ಧ ಮತ್ತೊಂದು ವೈಟ್ ವಾಶ್ ಸಾಧನೆ ಮಾಡಿತು.