ನವದೆಹಲಿ: ಟೀಂ ಇಂಡಿಯಾ ನೂತನ ಕೋಚ್ ನೇಮಕ ಕುರಿತಂತೆ ಬಿಸಿಸಿಐನ ಮುಖ್ಯ ವ್ಯವಸ್ಥಾಪಕ ಅಧಿಕಾರಿ ರಾಹುಲ್ ಜೋಹ್ರಿ, ತಂಡದ ಆಟಗಾರರು ಹಾಗೂ ನಾಯಕ ವಿರಾಟ್ ಕೊಹ್ಲಿಯಿಂದ ಅಭಿಪ್ರಾಯ ಪಡೆದುಕೊಳ್ಳುವ ಸಲುವಾಗಿ ವೆಸ್ಟ್ ಇಂಡೀಸ್ ಪ್ರಯಾಣಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಸಿಸಿಐನ ಸಿಇಒ ರಾಹುಲ್ ಜೋಹ್ರಿ ಅವರು ಸಿಒಎ ಅನುಮತಿ ಪಡೆದು ಬುಧವಾರ ವೆಸ್ಟ್ ಇಂಡೀಸ್ ನ ಜಮೈಕಾಗೆ ಪ್ರಯಾಣಿಸಿದ್ದು, ನೂತನ ಕೋಟ್ ಆಯ್ಕೆ ಕುರಿತಂತೆ ಆಟಗಾರರೊಂದಿಗೆ ಚರ್ಚಿಸಲಿದ್ದಾರೆ. ತಂಡದ ಆಟಗಾರರು, ಸಿಬ್ಬಂದಿ ಹಾಗೂ ನಾಯಕನಿಂದ ನೂತನ ಕೋಚ್ ಕುರಿತಂತೆ ಅಭಿಪ್ರಾಯ ಪಡೆದು, ಅದನ್ನು ಕ್ರಿಕೆಟ್ ಸಲಹಾ ಸಮಿತಿಗೆ ನೀಡುವ ಜವಾಬ್ದಾರಿಯನ್ನು ಜೋಹ್ರಿ ಅವರಿಗೆ ವಹಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ ಕೋಚ್ ಆಯ್ಕೆಗೆ ಸಂಬಂಧಿಸಿದಂತೆ ಬಿಸಿಸಿಐ ಸಟಿನ್, ಗಂಗೂಲಿ, ಲಕ್ಷ್ಮಣ್ ನೇತೃತ್ವದ ಸಿಎಸಿ ಸಮಿತಿಗೂ ಜವಾಬ್ದಾರಿ ನೀಡುತ್ತದೆಯೇ ಎಂಬುದೂ ಕೂಡ ಇದೀಗ ಗಮನಾರ್ಹ ವಿಚಾರವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಕೊಹ್ಲಿ, ಬಿಸಿಸಿಐ ಹೊಸ ಕೋಚ್ ನೇಮಕ ಕುರಿತಾಗಿ ಅಭಿಪ್ರಾಯವನ್ನು ಕೇಳಿದಲ್ಲಿ ಮಾತ್ರವೇ ಹೇಳುವುದಾಗಿ ತಿಳಿಸಿದ್ದರು.
ಕೋಚ್ ಹುದ್ದೆಗೆ ವೆಂಕಿ ಅರ್ಜಿ ಸಲ್ಲಿಸಿಲ್ಲ!
ಏತನ್ಮಧ್ಯೆ ಕೋಚ್ ಹುದ್ದೆಗೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡ ಅರ್ಜಿ ಸಲ್ಲಿಸಿದ್ದಾರೆ ಎಂಬ ವಿಚಾರದ ಕುರಿತು ಸ್ಪಷ್ಟನೆ ನೀಡಿರುವ ಬಿಸಿಸಿಐ, ಪ್ರಸಾದ್ ಅವರು ಕೋಚ್ ಹುದ್ದೆಯ ಆಕಾಂಕ್ಷಿಯಲ್ಲ. ಕೋಚ್ ಹುದ್ದೆಗೆ ಅವರು ಅರ್ಜಿ ಸಲ್ಲಿಕೆ ಮಾಡಿಲ್ಲ. ಪ್ರಸ್ತುತ ವೆಂಕಟೇಶ್ ಪ್ರಸಾದ್ ಅವರು ಜೂನಿಯರ್ ಟೀಂನ ಆಯ್ಕೆಸಮಿತಿ ಅಧ್ಯಕ್ಷರಾಗಿದ್ದಾರೆ. ಆದರೆ ಸುಖಾಸುಮ್ಮನೆ ಅದ್ಯಾರು ಈ ರೀತಿಯ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ವೆಂಕಿ ಎಂದಿಗೂ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಕುರಿತ ಮಾಹಿತಿ ನೀಡಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
Advertisement