ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 280ರನ್ ಗಳ ಸವಾಲಿನ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಶತಕ ಮತ್ತು ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿದೆ. ಆ ಮೂಲಕ ವೆಸ್ಟ್ ಇಂಡೀಸ್ ಗೆ ಗೆಲ್ಲಲು 280 ರನ್ ಗಳ ಸವಾಲಿನ ಗುರಿ ನೀಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಕಾಟ್ರೆಲ್ ಆರಂಭಿಕ ಆಘಾತ ನೀಡಿದರು. 2 ರನ್ ಗಳಿಸಿದ್ದ ಶಿಖರ್ ಧವನ್ ಎಲ್ ಬಿ ಬಲೆಗೆ ಬಿದ್ದರು. ಬಳಿಕ ರೋಹಿತ್ ಶರ್ಮಾ ಜೊತೆಗೂಡಿದ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಕೊಹ್ಲಿ 125 ಎಸೆತಗಳಲ್ಲಿ 120 ರನ್ ಗಳಿಸಿದರು. ಇದಕ್ಕೂ ಮೊದಲು 18 ರನ್ ಗಳಿಸಿದ್ದ ರೋಹಿತ್ ಶರ್ಮಾ ಚೇಸ್ ಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ ಬಳಿಕ ಕ್ರೀಸ್ ಗೆ ಆಗಮಿಸಿದ ರಿಷಬ್ ಪಂತ್ ಕೂಡ 20 ರನ್ ಗಳಿಸಿ ಔಟ್ ಆದರು.
ಈ ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಆಸರೆಯಾದರು. ಅಯ್ಯರ್ 68 ಎಸೆತಗಳಲ್ಲಿ 71 ರನ್ ಗಳಿಸಿದರು. ಆದರೆ ಕೊಹ್ಲಿ ಮತ್ತು ಅಯ್ಯರ್ ಔಟಾದ ಬಳಿಕ ಕೆಳ ಕ್ರಮಾಂಕದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಕೇದಾರ್ ಜಾದವ್ 16 ರನ್ ಗಳಿಸಿ ಔಟಾದರೆ, ಭುವನೇಶ್ವರ್ ಕುಮಾರ್ 1 ರನ್ ಗಳಿಸಿ ಔಟಾದರು. ಆ ಮೂಲಕ ಭಾರತದ ಬೃಹತ್ ರನ್ ಆಸೆಗೆ ಹಿನ್ನಡೆಯಾಯಿತು. ಅಂತಿಮವಾಗಿ ಭಾರತ ತಂಡ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತು.
Advertisement