ನವದೆಹಲಿ: ಪ್ರೇಕ್ಷಕರೇ ಇಲ್ಲದ ಖಾಲಿ ಮೈದಾನದಲ್ಲಿ ಕ್ರಿಕೆಟ್ ಆಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗಂಭೀರ ಚಿಂತನೆಯಲ್ಲಿದೆ ಎನ್ನಲಾಗಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ಭಾರತದಲ್ಲಿ ಮಾರಕ ಕೊರೋನಾ ಸೋಂಕು ಹೆಚ್ಚಾಗುವ ಭೀತಿ ಹಿನ್ನಲೆಯಲ್ಲಿ ಜನರೇ ಇಲ್ಲದ ಖಾಲಿ ಮೈದಾನದಲ್ಲಿ ಕ್ರಿಕೆಟ್ ಆಯೋಜಿಸುವಂತೆ ಕೇಂದ್ರ ಕ್ರೀಡಾ ಸಚಿವಾಲಯ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿದ್ದು, ಇದೇ ಕಾರಣಕ್ಕೆ ಬಿಸಿಸಿಐ ಪ್ರೇಕ್ಷಕರೇ ಇಲ್ಲದ ಖಾಲಿ ಮೈದಾನದಲ್ಲಿ ಕ್ರಿಕೆಟ್ ಆಡಿಸುವ ಕುರಿತು ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.
ಕ್ರಿಕೆಟ್ ಮೈದಾನದಲ್ಲಿ ಪ್ರೇಕ್ಷಕರು ತುಂಬಿದ್ದರೆ ಅದರಿಂದ ಸೋಂಕು ಪೀಡಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಭೀತಿ ಇದೆ. ಇದೇ ಕಾರಣಕ್ಕೆ ಖಾಲಿ ಮೈದಾನದಲ್ಲಿ ಕ್ರಿಕೆಟ್ ಆಡುವಂತೆ ಕೇಂದ್ರ ಸರ್ಕಾರ ಭಾರತ ಕ್ರಿಕೆಟ್ ತಂಡಕ್ಕೆ ಆದೇಶಿಸಿದೆ ಎನ್ನಲಾಗಿದೆ.
ಇನ್ನು ಈಗಾಗಲೇ ಕೇಂದ್ರ ಸರ್ಕಾರ ಮುಂಬರುವ ಏಪ್ರಿಲ್ 15ರವರೆಗೂ ವಿದೇಶಿಗರಿಗೆ ವಿಸಾ ನಿರ್ಬಂಧ ಹೇರಿದ್ದು, ಈಗಾಗಲೇ ವಿತರಿಸಿರುವ ಎಲ್ಲ ವೀಸಾಗಳನ್ನು ಕೂಡ ರದ್ದು ಮಾಡಿದೆ. ಹೀಗಾಗಿ ಯಾವುದೇ ವಿದೇಶಿಗರ ಭಾರತ ಪ್ರವೇಶ ಅಸಾಧ್ಯ. ಅಲ್ಲದೆ ಕ್ರೀಡಾ ಸಚಿವಾಲಯದ ಕಾರ್ಯದರ್ಶಿಗಳು ಖಾಲಿ ಮೈದಾನದಲ್ಲಿ ಕ್ರಿಕೆಟ್ ಆಡುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಭಾರತ ತಂಡ ಮುಂದಿನ ಪಂದ್ಯಗಳನ್ನಾಡಲಿರುವ ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳೂ ಕೂಡ ಸಾಧ್ಯವಾದಷ್ಟೂ ಜನಜಂಗುಳಿಯಿಲ್ಲದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಇದೇ ಮಾರ್ಚ್ 12 ಮತ್ತು 18ರಂದು ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 2 ಏಕದಿನ ಪಂದ್ಯಗಳನ್ನಾಡುತ್ತಿದೆ. ಕೊರೋನಾ ಭೀತಿ ಹಿನ್ನಲೆಯಲ್ಲಿ ಈ ಎರಡೂ ಪಂದ್ಯಗಳಿಗೆ ಪ್ರೇಕ್ಷಕರ ಕೊರತೆ ಎದುರಾಗುವ ಸಾಧ್ಯತೆ ಇದೆ.
ಇನ್ನು ಇದೇ ಮಾರ್ಚ್ 14ರಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ನೇತೃತ್ವದ ಐಪಿಎಲ್ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಟೂರ್ನಿ ಆಯೋಜನೆಯ ಎಲ್ಲ ಸಾಧ್ಯಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತದೆ ಎಂದು ತಿಳಿದುಬಂದಿದೆ. ಆದರೆ ಪ್ರೇಕ್ಷಕರ ಅನುಪಸ್ಛಿತಿಯಲ್ಲಿ ಐಪಿಎಲ್ ನೇರ ಪ್ರಸಾರಕ್ಕೆ ಬಿಸಿಸಿಐ ಮುಂದಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Advertisement