ಸಿಡ್ನಿ: ಮಗುವಿನ ನಿರೀಕ್ಷೆಯಲ್ಲಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ವಾಪಸ್ ಆಗುತ್ತಿದ್ದು, ಆಸ್ಟ್ರೇಲಿಯಾ ವಿರುದ್ಧ ಬಾಕಿ ಇರುವ ಮೂರು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಸಹ ಆಟಗಾರರಿಗೆ ಸಲಹೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಮಂಗಳವಾರ ಬೆಳಿಗ್ಗೆ ಆಸ್ಟ್ರೇಲಿಯಾದ ಭಾರತಕ್ಕೆ ಪ್ರಯಾಣಿಸುತ್ತಿದ್ದು, ಉಳಿದ ಮೂರು ಪಂದ್ಯಗಳಲ್ಲಿ ಟೆಸ್ಟ್ ತಂಡದ ನಾಯಕನಾಗಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದರಿಂದಕೊಹ್ಲಿ ಪಿತೃತ್ವ ರಜೆಗಾಗಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಮಾಡಿಕೊಂಡಿದ್ದರು. ಬಿಸಿಸಿಐ ಕೂಡ ಇದಕ್ಕೆ ಅನುಮತಿ ನೀಡಿತ್ತು. ಇದೇ ಕಾರಣಕ್ಕೆ ಆಸಿಸ್ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಮಾತ್ರ ಕೊಹ್ಲಿ ಕಾಣಿಸಿಕೊಂಡಿದ್ದರು.
ಇದೀಗ ಕೊಹ್ಲಿ ಭಾರತಕ್ಕೆ ಮರಳುತ್ತಿದ್ದು, ಈ ವೇಳೆ ಎಎನ್ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ತಂಡದ ಆಡಳಿತ ಸಿಬ್ಬಂದಿ ಕೊಹ್ಲಿ ಆಸ್ಟ್ರೇಲಿಯಾ ತೊರೆಯುವ ಮುನ್ನ ತಂಡದ ಸಹ ಆಟಗಾರರೊಂದಿಗೆ ಸಭೆ ನಡೆಸಿದರು ಎಂದು ಹೇಳಿದ್ದಾರೆ. ಈ ವೇಳೆ ಕೊಹ್ಲಿ ಸಹ ಆಟಗಾರರಿಗೆ ಉತ್ಸಾಹ ತುಂಬಿದರು. ಆಸಿಸ್ ವಿರುದ್ಧ ಎದೆಗುಂದದೇ ಆಡುವಂತೆ ಹೇಳಿದರು ಎನ್ನಲಾಗಿದೆ.
ಇನ್ನು ಅಡಿಲೇಡ್ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ತಂಡ ಕೇವಲ 36 ರನ್ಗಳಿಗೆ ಆಲೌಟ್ ಆಗಿದ್ದರಿಂದ ಕ್ರಿಕೆಟ್ ಪ್ರೇಮಿಗಳು ಮತ್ತು ಅಭಿಮಾನಿಗಳು ನಿರಾಶರಾಗಿದ್ದರು. ಅಲ್ಲದೆ ಭಾರತ ತಂಡದ ಪ್ರದರ್ಶನ ವಿರುದ್ಧ ಟೀಕಾ ಪ್ರಹಾರಗಳೇ ಹರಿದಿದ್ದವು. ಆದರೆ ಸಭೆಯಲ್ಲಿ ನಾಯಕ ಕೊಹ್ಲಿ, ತಂಡ ಮುಂದೆ ಸಾಗಬೇಕು. ಮುಂದೆ ಏನಿದೆ ಎಂಬುದನ್ನು ನೋಡಬೇಕು. ಭೂತಕಾಲದಲ್ಲಿ ಆಗಿರುವ ತಪ್ಪುಗಳನ್ನು ವರ್ತಮಾನದಲ್ಲಿ ಸರಿಪಡಿಸಿಕೊಂಡು ನಾವು ಉತ್ತಮ ಭವಿಷ್ಯದತ್ತ ಸಾಗಬೇಕು ಎಂದು ಆಟಗಾರರನ್ನು ಹುರಿದುಂಬಿಸಿದ್ದಾರೆ.
ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಮತ್ತು ಅವರನ್ನು ಸಕಾರಾತ್ಮಕವಾಗಿರಿಸುವುದು ಕೊಹ್ಲಿ ಅವರ ಈ ಸಭೆಯ ಉದ್ದೇಶವಾಗಿತ್ತು. ಅಂತೆಯೇ ಕೊಹ್ಲಿ ನಾಯಕತ್ವವನ್ನು ಅಧಿಕೃತವಾಗಿ ಉಪ ನಾಯಕ ಅಜಿಂಕ್ಯ ರಹಾನೆಗೆ ಹಸ್ತಾಂತರಿಸಿದರು. ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ ಮೇಲೆ ಸಾಕಷ್ಟು ಜವಾಬ್ದಾರಿ ಮತ್ತು ನಿರೀಕ್ಷೆ ಇದೆ. ಈಗಾಗಲೇ ಆಸ್ಟ್ರೇಲಿಯಾಗೆ ಭಾರತ ತಂಡದ ಸ್ಫೋಟಕ ಆಟಗಾರ ರೋಹಿತ್ ಶರ್ಮಾ ಪ್ರಯಾಣಿಸಿದ್ದು, ಪ್ರಸ್ತುತ ಅವರು ಕ್ವಾರಂಟೈನ್ ನಲ್ಲಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ 2ನೇ ಪಂದ್ಯಕ್ಕೆ ಅಲಭ್ಯರಾಗಲಿದ್ದು, ಮೂರನೇ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.
ಸಿಡ್ನಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಅದಾಗ್ಯೂ ರೋಹಿತ್ ಶರ್ಮಾರನ್ನು ಮುಂಜಾಗ್ರತಾ ಕ್ರಮವಾಗಿ ಬೇರೆ ನಗರಕ್ಕೆ ಸ್ಥಳಾಂತರಿಸುವ ಕುರಿತು ಯಾವುದೇ ರೀತಿಯ ಚರ್ಚೆಯಾಗಿಲ್ಲ ಎನ್ನಲಾಗಿದೆ. ರೋಹಿತ್ ಶರ್ಮಾರೊಂದಿಗೆ ತಂಡದ ಮ್ಯಾನೇಜ್ ಮೆಂಟ್ ನಿರಂತರ ಸಂಪರ್ಕದಲ್ಲಿದ್ದು, ಅವರನ್ನು ಸುರಕ್ಷಿತವಾಗಿ ಹೊಟೆಲ್ ನಲ್ಲಿ ಸಂಪರ್ಕರಹಿತರನ್ನಾಗಿರಿಸಲಾಗಿದೆ. ಜೈವಿಕ ಸುರಕ್ಷಿತ ವಾತಾವರಣದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಜನವರಿ 7ರಿಂದ ಸಿಡ್ನಿಯಲ್ಲಿ ನಡೆಯಲಿದ್ದು, ಸರಣಿಯ ಕೊನೆಯ ಟೆಸ್ಟ್ ಜನವರಿ 15 ರಿಂದ ಬ್ರಿಸ್ಬೇನ್ನಲ್ಲಿ ನಡೆಯಲಿದೆ.
Advertisement