ಲೀಡ್ಸ್: ಲೀಡ್ಸ್ ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ಸೋಲಿನ ಆಘಾತದಲ್ಲಿರುವ ಟೀಂ ಇಂಡಿಯಾಗೆ ಮತ್ತೊಂದು ಮರ್ಮಾಘಾತ ಎದುರಾಗಿದ್ದು, ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದಾಗಿ ಆಸ್ರತ್ರೆಗೆ ದೌಡಾಯಿಸಿದ್ದಾರೆ.
ಲೀಡ್ಸ್ ನಲ್ಲಿ ನಡೆದ ಸರಣಿಯ ಮೂರನೇ ಪಂದ್ಯದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮೊಣಕಾಲು ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಜಡೇಜಾರನ್ನು ಆಸ್ಪತ್ರೆಗೆ ದಾಖಲಿಸಿ ಮೊಣಕಾಲು ಸ್ಕ್ಯಾನ್ ಮಾಡಲಾಗಿದೆ.
ಈ ಬಗ್ಗೆ ಸ್ವತಃ ಜಡೇಜಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದು. 'ಈ ಸ್ಥಳದಲ್ಲಿರುವುದು ಒಳ್ಳೆಯದಲ್ಲ' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ.
ಮೂರನೇ ಪಂದ್ಯದ ಎರಡನೇ ದಿನ ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುವಾಗ ಜಡೇಜಾ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಬಳಿಕ ಅವರು ಸ್ವಲ್ಪ ಸಮಯದವರೆಗೆ ಮೈದಾನದಿಂದ ಹೊರಗುಳಿದಿದ್ದರು. ಅವರು ಮೈದಾನಕ್ಕೆ ಹಿಂತಿರುಗುವಾಗ, ಅವರು ಒಂದು ಕೈಯಿಂದ ಬಲಗಾಲನ್ನು ಹಿಡಿದುಕೊಂಡು ನಡೆಯುತ್ತಿದ್ದರು. ಆದಾಗ್ಯೂ ಬೌಲಿಂಗ್ ಮಾಡಿದ್ದರು.
ಇನ್ನು ಇಂಗ್ಲೆಂಡ್ ನ ಹೆಡಿಂಗ್ಲೆಯಲ್ಲಿರುವ ಲೀಡ್ಸ್ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಪಡೆ ಭಾರತದ ವಿರುದ್ಧ ಇನ್ನಿಂಗ್ಸ್ ಮತ್ತು 76 ರನ್ ಗಳ ಭರ್ಜರಿ ಜಯ ಸಾಧಿಸಿ ಐದು ಪಂದ್ಯಗಳ ಸರಣಿಯಲ್ಲಿ 1-1 ಅಂತರದಲ್ಲಿ ಸರಣಿಯಲ್ಲಿ ಸಮಬಲ ಸಾಧಿಸಿದೆ.
Advertisement