ಕೋಚ್ ರವಿ ಶಾಸ್ತ್ರಿ ಹೇಳಿದ್ದ ಆ ಮಾತು ನನಗೆ ಅತೀವ ನೋವನ್ನುಂಟು ಮಾಡಿತ್ತು: ಆರ್ ಅಶ್ವಿನ್ ಹೇಳಿದ್ದೇನು?

ಆಸ್ಟ್ರೇಲಿಯಾ ಪ್ರವಾಸದ ವೇಳೆ ಕೋಚ್ ರವಿಶಾಸ್ತ್ರಿ ಹೇಳಿದ್ದ ಆ ಒಂದು ಮಾತು ತಮಗೆ ಅತೀವ ಆಘಾತವನ್ನುಂಟು ಮಾಡಿತ್ತು. ಬಸ್ ನಿಂದ ನನ್ನನ್ನು ಕೆಳಗೆ ಎಸೆದು ಅದರಡಿಯಲ್ಲಿ ನಾನು ಛಿದ್ರವಾದ ಅನುಭವಾಗಿತ್ತು ಎಂದು ಟೀಂ ಇಂಡಿಯಾದ ಪ್ರಮುಖ ಬೌಲರ್ ಆರ್ ಅಶ್ವಿನ್ ಹೇಳಿದ್ದಾರೆ.
ಆರ್ ಅಶ್ವಿನ್
ಆರ್ ಅಶ್ವಿನ್

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದ ವೇಳೆ ಕೋಚ್ ರವಿಶಾಸ್ತ್ರಿ ಹೇಳಿದ್ದ ಆ ಒಂದು ಮಾತು ತಮಗೆ ಅತೀವ ಆಘಾತವನ್ನುಂಟು ಮಾಡಿತ್ತು. ಬಸ್ ನಿಂದ ನನ್ನನ್ನು ಕೆಳಗೆ ಎಸೆದು ಅದರಡಿಯಲ್ಲಿ ನಾನು ಛಿದ್ರವಾದ ಅನುಭವಾಗಿತ್ತು ಎಂದು ಟೀಂ ಇಂಡಿಯಾದ ಪ್ರಮುಖ ಬೌಲರ್ ಆರ್ ಅಶ್ವಿನ್ ಹೇಳಿದ್ದಾರೆ.

ಇತ್ತೀಚೆಗೆ ದಿ ಕ್ರಿಕೆಟ್‌ ಮಂಥ್ಲೀಗೆ ಸಂದರ್ಶನ ನೀಡಿದ್ದ ಆರ್‌ ಅಶ್ವಿನ್‌ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ನಿರಂತರ ಗಾಯದ ಸಮಸ್ಯೆ, ತಂಡದಲ್ಲಿನ ಕಠಿಣ ಸ್ಪರ್ಧೆ ಸೇರಿದಂತೆ ಹಲವು ಕಾರಣಗಳಿಂದ 2018ರಲ್ಲಿ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಲು ಚಿಂತನೆ ನಡೆಸಿದ್ದೆ ಎಂದು ಹೇಳಿದ್ದಾರೆ. 

'ಸತತ ಗಾಯದ ಸಮಸ್ಯೆ, ತಂಡದಲ್ಲಿನ ಇತರೆ ಆಟಗಾರರಿಂದ ಎದುರಾಗುತ್ತಿದ್ದ ಸ್ಪರ್ಧೆ ಸೇರಿದಂತೆ ಹಲವು ಸಂಗತಿಗಳಿಂದಾಗಿ ನನ್ನ ಕ್ರಿಕೆಟ್‌ ವೃತ್ತಿ ಜೀವನ ಅಪಾಯದಲ್ಲಿದೆ ಎಂಬಂತೆ ಹಲವು ಆಲೋಚನೆಗಳು ತಲೆಯಲ್ಲಿ ಮೂಡುತ್ತಿದ್ದವು. 2018 ಮತ್ತು 2020ರ ನಡುವೆ ನಾನು ವಿವಿಧ ಹಂತಗಳಲ್ಲಿ ಕ್ರೀಡೆಯನ್ನು ತ್ಯಜಿಸಲು ಆಲೋಚಿಸಿದ್ದೆ. ನಾನು ಸಾಕಷ್ಟು ಪ್ರಯತ್ನ ನಡೆಸಿದ್ದೆ, ಆದರೂ ಉತ್ತಮ ಪ್ರದರ್ಶನ ಮೂಡಿ ಬಂದಿರಲಿಲ್ಲ. ಎಷ್ಟೇ ಕಷ್ಟಪಟ್ಟು ಪ್ರಯತ್ನಿಸಿದರೂ ನನ್ನಿಂದ ಏನು ಮಾಡಲು ಸಾಧ್ಯವಾಗಿರಲಿಲ್ಲ. ದೇಹದ ಎಲ್ಲಾ ಭಾಗದಲ್ಲಿಯೂ ನೋವು ಇದ್ದಿದ್ದರಿಂದ ಆರು ಎಸೆತಗಳು ಹಾಕಿದ ಬಳಿಕ ನನಗೆ ಉಸಿರುಗಟ್ಟಿದ ರೀತಿ ಭಾಸವಾಗುತ್ತಿತ್ತು, ಈ ವೇಳೆ ನಾನು ಕೆಲ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಅಗತ್ಯವಿತ್ತು. ಒಮ್ಮೆ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡರೆ, ಮುಂದಿನ ಎಸೆತದಲ್ಲಿ ಸ್ವಲ್ಪ ಜಂಪ್‌ ಕಡಿಮೆ ಮಾಡಬೇಕಾಗಿತ್ತು. ಜಂಪ್‌ ಮಿತಿಗೊಳಿಸಿದಾಗ ಬೆನ್ನು ಹಾಗೂ ಭುಜದ ಮೇಲೆ ಹೆಚ್ಚಿನ ಬಲ ಪ್ರಯೋಗ ಮಾಡಬೇಕಾಗಿತ್ತು. ಇದರಿಂದ ನೋವು ಜಾಸ್ತಿಯಾಗುತ್ತಿತ್ತು. ನಂತರ ಮೂರನೇ ಎಸೆತದಲ್ಲಿ ಸೊಂಟವನ್ನು ಬಳಸಿಕೊಳ್ಳಲು ಪ್ರಯತ್ನಿಸಿದೆ. ಕೇವಲ 6 ಎಸೆತಗಳನ್ನು ಮುಗಿಸಿದ ಬಳಿಕ ನನಗೆ ವಿಶ್ರಾಂತಿ ಬೇಕೆಂದು ಅನಿಸುತ್ತಿತ್ತು ಎಂದು ಅಶ್ವಿನ್‌ ಹೇಳಿಕೊಂಡಿದ್ದಾರೆ.

ಯಾರ ಬೆಂಬಲವೂ ಸಿಗುತ್ತಿರಲಿಲ್ಲ
ಇನ್ನು ಕ್ರಿಕೆಟ್‌ ತ್ಯಜಿಸುವುದನ್ನು ಆರ್‌ ಅಶ್ವಿನ್ ಗಂಭೀರವಾಗಿ ಪರಿಗಣಿಸಲು ಗಾಯವೊಂದೇ ಕಾರಣವಾಗಿರಲಿಲ್ಲ. ಗಾಯದ ಸ್ಥಿತಿಗೆ ಜನರ ಪ್ರತಿಕ್ರಿಯೆಗಳು ಕೂಡ ತಮಿಳುನಾಡು ಮೂಲದ ಸ್ಪಿನ್ನರ್‌ ಬೇಸರಕ್ಕೆ ಕಾರಣವಾಗಿತ್ತು. ಇಂಥಾ ಕಠಿಣ ಸನ್ನಿವೇಶದಲ್ಲಿ ಯಾರಾದರೂ ಒಬ್ಬರ ಬೆಂಬಲ ತಮಗೆ ಅಗತ್ಯವಿತ್ತು ಎಂದು ಭಾವಿಸಿದ್ದನ್ನು ಹಿರಿಯ ಸ್ಪಿನ್ನರ್‌ ಹೇಳಿಕೊಂಡಿದ್ದಾರೆ. 

'ನನ್ನ ಗಾಯದ ಬಗ್ಗೆ ಜನರು ಸೂಕ್ಷ್ಮವಾಗಿ ಭಾವಿಸಿದ್ದಾರೆಂದು ನನಗೆ ಅನಿಸಿರಲಿಲ್ಲ. ಸಾಕಷ್ಟು ಮಂದಿಗೆ ಜನರು ಬೆಂಬಲ ಸೂಚಿಸಿದ್ದಾರೆ. ನನಗೆ ಏಕೆ ಮಾಡುತ್ತಿಲ್ಲ ಎಂದು ನನಗೆ ಅನಿಸಿತು. ತಂಡಕ್ಕಾಗಿ ಸಾಕಷ್ಟು ಪಂದ್ಯಗಳನ್ನು ಗೆದ್ದಿದ್ದೇನೆ. ಆದರೂ ನನಗೆ ಯಾರು ಬೆಂಬಲಿಸಲಿಲ್ಲ. ಸಾಮಾನ್ಯವಾಗಿ ನಾನು ಯಾರಿಂದಲೂ ಸಹಾಯ, ಬೆಂಬಲ ಬಯಸುವುದಿಲ್ಲ. ನನ್ನ ಮೇಲೆ ಯರಾದರೂ ಸಹಾನುಭೂತಿ ತೋರಿಸಬೇಕೆಂದೂ ನಾನು ಭಾವಿಸುವುದಿಲ್ಲ. ಆದರೆ, ನನ್ನ ಪ್ರದರ್ಶನ ಉತ್ತಮವಾಗಿಲ್ಲ ಎಂದು ಅರಿತುಕೊಂಡೆ. ಇನ್ನಷ್ಟು ಹೆಚ್ಚಿನ ಪರಿಶ್ರಮ ಪಟ್ಟು ತಮ್ಮ ಬೌಲಿಂಗ್‌ನಲ್ಲಿ ಸುಧಾರಣೆ ಕಂಡುಕೊಳ್ಳಬೇಕೆಂದು ಅಂದು ನಿರ್ಧರಿಸಿದ್ದೆ ಎಂದು ಆರ್‌ ಅಶ್ವಿನ್‌ ತಮ್ಮ ವೃತ್ತಿ ಜೀವನ ಕಠಿಣ ದಿನಗಳನ್ನು ಗೆದ್ದಿದ್ದೇಗೆಂದು ವಿವರಿಸಿದ್ದಾರೆ,

ಕೋಚ್ ರವಿ ಶಾಸ್ತ್ರಿ ಹೇಳಿಕೆಯಿಂದ ಘಾಸಿಗೊಂಡಿದ್ದೆ
2019 ರ ಸಿಡ್ನಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ವಿಕೆಟ್ ಪಡೆದ ನಂತರ ಕೋಚ್ ಶಾಸ್ತ್ರಿ ಕುಲದೀಪ್ ಯಾದವ್ ಅವರನ್ನು ವಿದೇಶದಲ್ಲಿ ಭಾರತದ ನಂ.1 ಸ್ಪಿನ್ನರ್ ಎಂಬಂತೆ ಮಾತನಾಡಿದ್ದಾಗ ಅಂದು ನಾನು ತೀವ್ರ ಆಘಾತಕ್ಕೊಳಗಾಗಿದ್ದೆ. ಟೂರ್ನಿಯಲ್ಲಿ ನಾನೂ ಕೂಡ ಉತ್ತಮವಾಗಿ ಬೌಲ್ ಮಾಡಿದ್ದೆ, ಆದರೆ ಐದು ವಿಕೆಟ್ ದೊರೆತಿರಲಿಲ್ಲ. ಆಸಿಸ್ ಪಿಚ್ ನಲ್ಲಿ ಐದು ವಿಕೆಟ್ ಪಡೆಯುವುದು ಎಷ್ಟು ಕಷ್ಟ ಎಂದು ನನಗೆ ಗೊತ್ತಿತ್ತು. ಹೀಗಾಗಿ ಕುಲದೀಪ್ ಸಾಧನೆ ಬಗ್ಗೆ ನನಗೆ ನಿಜಕ್ಕೂ ಸಂತೋಷವಿತ್ತು. ಆದರೆ ಕೋಚ್ ಶಾಸ್ತ್ರಿ ಅವರ ಹೇಳಿಕೆ "ಸಂಪೂರ್ಣವಾಗಿ ಘಾಸಿ ಮಾಡಿತು. ನಾನು ರವಿ ಭಾಯ್ ಅವರನ್ನು ಹೆಚ್ಚು ಗೌರವಿಸುತ್ತೇನೆ. ನಾವೆಲ್ಲರೂ ಯಾವುದೇ ವಿಚಾರ ಮಾತನಾಡಬಹುದು. ಬಳಿಕ ಅದನ್ನು ವಾಪಸ್ ಪಡೆಯಲೂ ಬಹುದು. ಆದರೆ ಆ ಕ್ಷಣದಲ್ಲಿ ಅವರ ಆ ಹೇಳಿಕೆಯಿಂದ ಆಘಾತಗೊಂಡಿದ್ದೆ. 

ನಿಮ್ಮ ತಂಡದ ಆಟಗಾರರ ಯಶಸ್ಸನ್ನು ಆನಂದಿಸುವುದು ಎಷ್ಟು ಮುಖ್ಯ ಎಂಬುದನ್ನು ನಾವೆಲ್ಲರೂ ಮಾತನಾಡುತ್ತೇವೆ. ನಾನು ಕುಲದೀಪ್‌ ಪ್ರದರ್ಶನದ ಬಗ್ಗೆ ಸಂತೋಷಪಟ್ಟಿದ್ದೇನೆ. ನನಗೆ ಐದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.  ನಾನು ಚೆನ್ನಾಗಿ ಬೌಲಿಂಗ್ ಮಾಡಿದರೂ (ಇತರ ಸಮಯಗಳಲ್ಲಿ), ನಾನು ಐದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನಾನು ಅವನ ಪ್ರದರ್ಶನದ ಕುರಿತು ನಿಜವಾಗಿಯೂ ಸಂತೋಷವಾಗಿದ್ದೇನೆ ಮತ್ತು ಆಸ್ಟ್ರೇಲಿಯಾದಲ್ಲಿ ಗೆಲ್ಲಲು ಇದು ಅತ್ಯಂತ ಸಂತೋಷದ ಸಂದರ್ಭವಾಗಿದೆ ಎಂದು ಅವರು ಹೇಳಿದರು. 

ಅಂದು ನಡೆದ ಸಂತೋಷ ಕೂಡದಲ್ಲಿ ನಾನೂ ಇದ್ದೆ. ಆದರೆ ರವಿ ಅವರ ಹೇಳಿಕೆಯಿಂದ ನಾನು ಕುಗ್ಗಿ ಹೋಗಿದ್ದೆ. ಅಕ್ಷರಶಃ ನನ್ನನ್ನು ಬಸ್ ನ ಕೆಳೆಗೆ ಎಸೆಯಲಾಗಿತ್ತೇನೋ ಎಂಬ ಅನುಭವವಾಗಿತ್ತು.  ನಾನು ನನ್ನ ಕೋಣೆಗೆ ಹಿಂತಿರುಗಿದೆ ಮತ್ತು ನಂತರ ನಾನು ನನ್ನ ಹೆಂಡತಿಯೊಂದಿಗೆ ಮಾತನಾಡಿದೆ. ಮತ್ತು ನನ್ನ ಮಕ್ಕಳು ಅಲ್ಲಿದ್ದರು. ಆದ್ದರಿಂದ ನಾನು ಆ ಆಘಾತದಿಂದ ಹೊರಬರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com