ನೀನು ಧೋನಿ ಅಲ್ಲ, 'ಸ್ವಾರ್ಥಿ': ಸಿಕ್ಸರ್ ಸಿಡಿಸಿ ಪಂದ್ಯ ಗೆಲ್ಲಿಸಿದ್ದ ಪಾಂಡ್ಯ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದೇಕೆ?

ಮೂರನೇ ಟಿ20ಯಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತವು ಐದು ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.
ಹಾರ್ದಿಕ್ ಪಾಂಡ್ಯ-ಎಂಎಸ್ ಧೋನಿ
ಹಾರ್ದಿಕ್ ಪಾಂಡ್ಯ-ಎಂಎಸ್ ಧೋನಿ

ಮೂರನೇ ಟಿ20ಯಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತವು ಐದು ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ. 

ಮೊದಲೆರಡು ಪಂದ್ಯಗಳನ್ನು ಸೋತ ಟೀಂ ಇಂಡಿಯಾ ಈ ಪಂದ್ಯದಲ್ಲಿ ಸೋತಿದ್ದರೆ ಸರಣಿ ಕೈ ತಪ್ಪುತ್ತಿತ್ತು. ಆದರೆ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳ ಸಮರ್ಪಕ ನಿರ್ವಹಣೆಯಿಂದ ಸರಣಿಯು ಈಗ 2-1ಕ್ಕೆ ಬಂದು ನಿಂತಿದೆ. ಟೀಂ ಇಂಡಿಯಾದ ಗೆಲುವಿನ ನಂತರ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಮಾಡಲಾಗುತ್ತಿದೆ.

ಹಾರ್ದಿಕ್ ಪಾಂಡ್ಯ ಮಾಡಿದ್ದೇನು?
ವಾಸ್ತವವಾಗಿ, ಭಾರತೀಯ ನಾಯಕ ಹಾರ್ದಿಕ್ ಪಾಂಡ್ಯ ಅವರ ಒಂದು ಕಾರ್ಯ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಇದಕ್ಕಾಗಿ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ನಿಂದಿಸಲಾಗುತ್ತಿದೆ. ಇದಕ್ಕೆ ಕಾರಣ ಮೂರನೇ ಟಿ20ಯಲ್ಲಿ ಹಾರ್ದಿಕ್ ಗೆಲುವಿನ ಸಿಕ್ಸರ್ ಬಾರಿಸಿದಾಗ, ಇನ್ನೊಂದು ತುದಿಯಲ್ಲಿ ತಿಲಕ್ ವರ್ಮಾ ಅಜೇಯ 49 ರನ್ ಗಳಿಸಿದ್ದರು ಮತ್ತು ಭಾರತದ ಗೆಲುವಿಗೆ 14 ಎಸೆತಗಳಲ್ಲಿ 2 ರನ್ ಬೇಕಾಗಿತ್ತು.

ಹಾರ್ದಿಕ್ ನನ್ನು ಸ್ವಾರ್ಥಿ ನಾಯಕ ಎಂದು ಕರೆದ ಅಭಿಮಾನಿಗಳು!
ಹಾರ್ದಿಕ್ ಪಾಂಡ್ಯ ಬೇಕಿದ್ದರೆ ಸಿಂಗಲ್ ಹೊಡೆದು ತಿಲಕ್ ವರ್ಮಾಗೆ ಸ್ಟ್ರೈಕ್ ನೀಡಬಹುದಿತ್ತು. ತಿಲಕ್ ವರ್ಮಾ ಅರ್ಧಶತಕ ಪೂರೈಸುವುದರೊಂದಿಗೆ ತಂಡವನ್ನು ಗೆಲ್ಲಬಹುದಿತ್ತು. ಆದರೆ ಹಾರ್ದಿಕ್ ಪಾಂಡ್ಯ ಅದನ್ನು ಮಾಡಲಿಲ್ಲ. ಹಾರ್ದಿಕ್ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಆದರೆ ತಿಲಕ್ ವರ್ಮಾ ಅರ್ಧಶತಕ ಪೂರೈಸುವಲ್ಲಿ ವಂಚಿತರಾದರು. ಅಭಿಮಾನಿಗಳಿಗೆ ಹಾರ್ದಿಕ್ ಅವರ ಈ ಕೆಲಸ ಇಷ್ಟವಾಗಲಿಲ್ಲ. ಈ ರೀತಿ ಆಟ ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿದೆ ಎಂದು ಬಣ್ಣಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಸ್ವಾರ್ಥಿ ಕ್ಯಾಪ್ಟನ್ ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ.

ಧೋನಿ ಅನ್ನು ನೆನಪಿಸಿಕೊಂಡ ಅಭಿಮಾನಿಗಳು 
ಹಾರ್ದಿಕ್ ಪಾಂಡ್ಯ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇದರೊಂದಿಗೆ, ಮಾಜಿ ನಾಯಕ ಎಂಎಸ್ ಧೋನಿ ಅವರ ಹಳೆಯ ವೀಡಿಯೊ ಕೂಡ ಈ ಸಮಯದಲ್ಲಿ ವೈರಲ್ ಆಗುತ್ತಿದೆ. ಅದು ಹಳೆಯ ಪಂದ್ಯದದ್ದಾಗಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ವಿಡಿಯೋ. ವಿಡಿಯೋದಲ್ಲಿ ಧೋನಿ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 7 ಎಸೆತಗಳಲ್ಲಿ 1 ರನ್ ಅಗತ್ಯವಿದ್ದು, ಧೋನಿ ಸ್ಟ್ರೈಕ್‌ನಲ್ಲಿದ್ದರು. 49ನೇ ಓವರ್‌ನ ಕೊನೆಯ ಬಾಲ್ ಡಾಟ್ ಅನ್ನು ಆಡಿದ ಧೋನಿ 68 ರನ್‌ಗಳೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿಗೆ ಸ್ಟ್ರೈಕ್ ನೀಡಿದರು. ಧೋನಿಯ ಈ ಕ್ರೀಡಾ ಮನೋಭಾವ ಅಭಿಮಾನಿಗಳ ಮನ ಗೆದ್ದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com