ಇಂಧೋರ್: ವಿವಿಧ ಕಾರಣಗಳಿಂದ ಆಸ್ಚ್ರೇಲಿಯಾ ತಂಡದಿಂದ ದೂರ ಉಳಿಯುತ್ತಿರುವ ಆಟಗಾರರ ಪಟ್ಟಿ ಬೆಳೆಯುತ್ತಿದ್ದು, ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಿಂದ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹೊರಗುಳಿಯಲಿದ್ದಾರೆ.
ಹೌದು.. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಿಂದ ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ಹೊರಗುಳಿಯಲಿದ್ದಾರೆ. 3ನೇ ಪಂದ್ಯವು ಇಂಧೋರ್ ನಲ್ಲಿ ಮಾರ್ಚ್ 1ರಿಂದ ನಡೆಯಲಿದೆ. ಮೊದಲೇ ಗಾಯಾಳುಗಳ ತೊಂದರೆ ಅನುಭವಿಸುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಸ್ವತಃ ನಾಯಕನೇ ಪಂದ್ಯದಿಂದ ದೂರ ಉಳಿಯುತ್ತಿರುವುದು ಆಘಾತ ತಂದಿದೆ.
ಎರಡನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಕಮಿನ್ಸ್ ಅವರು ಕೌಟುಂಬಿಕ ಕಾರಣದಿಂದ ತವರು ಸಿಡ್ನಿಗೆ ಮರಳಿದ್ದರು. ತಾಯಿಯ ಅನಾರೋಗ್ಯದ ಕಾರಣದಿಂದ ಕಮಿನ್ಸ್ ಅವರಿನ್ನೂ ಸಿಡ್ನಿಯಲ್ಲೇ ಇದ್ದಾರೆ. ಹೀಗಾಗಿ ಮೂರನೇ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ಆಸಿಸ್ ತಂಡದ ಮೂಲಗಳು ತಿಳಿಸಿವೆ. ಈ ಬಗ್ಗೆ ಕಮಿನ್ಸ್ ಕೂಡ ಪ್ರತಿಕ್ರಿಯೆ ನೀಡಿದ್ದು, “ಈ ಸಮಯದಲ್ಲಿ ಭಾರತಕ್ಕೆ ಮರಳದಿರಲು ನಾನು ನಿರ್ಧರಿಸಿದ್ದೇನೆ. ನನ್ನ ಕುಟುಂಬದೊಂದಿಗೆ ನಾನು ಇಲ್ಲಿರಬೇಕಿದೆ” ಎಂದು ಕಮಿನ್ಸ್ ಹೇಳಿದ್ದಾರೆ.
ಪ್ಯಾಟ್ ಕಮಿನ್ಸ್ ಅವರ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಎರಡನೇ ಪಂದ್ಯದ ಬಳಿಕ ಸ್ಮಿತ್ ತನ್ನ ಪತ್ನಿ ಡ್ಯಾನಿಯೊಂದಿಗೆ ದುಬೈನಲ್ಲಿ ನಾಲ್ಕು ದಿನಗಳನ್ನು ಕಳೆದಿದ್ದು, ಗುರುವಾರ ಸಂಜೆ ದೆಹಲಿಯಲ್ಲಿ ಆಸ್ಟ್ರೇಲಿಯಾ ತಂಡದ ಜತೆ ಸೇರಿಕೊಂಡಿದ್ದಾರೆ.
ಜೋಶ್ ಹೇಜಲ್ವುಡ್, ಡೇವಿಡ್ ವಾರ್ನರ್ ಮತ್ತು ಆಷ್ಟನ್ ಅಗರ್ ಅವರು ಈ ವಾರ ವಿವಿಧ ಕಾರಣಗಳಿಗಾಗಿ ತಂಡದಿಂದ ಹೊರಗುಳಿದಿದ್ದು, ಹೇಜಲ್ ವುಡ್ ಮತ್ತು ವಾರ್ನರ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ ಈ ಮೂರು ಆಟಗಾರರ ಬದಲಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಯಾವುದೇ ಆಟಗಾರರನ್ನು ಆಯ್ಕೆ ಮಾಡಿಕೊಂಡಿಲ್ಲ, ಬದಲಿಗೆ ತಂಡದ ಬೆಂಚ್ ಸ್ಟ್ರೆಂತ್ ಉತ್ತಮವಾಗಿದೆ ಎಂದು ಹೇಳಿದೆ.
ಇನ್ನು ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದ ಮುನ್ನಡೆ ಸಾಧಿಸಿದ್ದು, ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದಿದ್ದ ಮೊದಲೆರಡು ಪಂದ್ಯಗಳನ್ನು ಭಾರತ ತಂಡ ಸುಲಭದಲ್ಲಿ ಗೆದ್ದುಕೊಂಡಿತ್ತು.
Advertisement