ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭಿಕರಾಗಿ ಕಣಕ್ಕಿಳಿದಿರುವ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ನೀಡಿದ್ದಾರೆ.
ಶ್ರೀಲಂಕಾ ಎದುರಿನ ಸರಣಿ ಜಯದ ಸಂಭ್ರಮದ ಬೆನ್ನಲ್ಲೇ ಹೈದರಾಬಾದ್ ನಲ್ಲಿ ಆರಂಭವಾಗಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಬೆನ್ನುನೋವಿನಿಂದಾಗಿ ಮಧ್ಯಮಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಇಲ್ಲದೇ ತಂಡವು ಕಣಕ್ಕಿಳಿದಿದೆ. ಏಕದಿನ ಕ್ರಿಕೆಟ್ ಸರಣಿಯ ಮೂರು ಪಂದ್ಯಗಳಿಗೂ ಶ್ರೇಯಸ್ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ರಜತ್ ಪಾಟೀದಾರ್ ತಂಡ ಸೇರ್ಪಡೆಗೊಂಡಿದ್ದಾರೆ.
ಕಳೆದ ಸರಣಿಯಲ್ಲಿ ಮಧ್ಯಮಕ್ರಮಾಂಕದಲ್ಲಿ ಆಡಿದ್ದ ಕೆ.ಎಲ್. ರಾಹುಲ್ ಕೂಡ ವಿಶ್ರಾಂತಿ ಪಡೆದಿದ್ದು, ವಿಕೆಟ್ಕೀಪರ್ ಆಗಿ ಇಶಾನ್ ಕಿಶನ್ ಆಡಲಿದ್ದಾರೆ. ನಾಯಕ ರೋಹಿತ್ ಮತ್ತು ಸ್ಥಿರತೆ ಕಾಪಾಡಿಕೊಂಡಿರುವ ಶುಭಮನ್ ಗಿಲ್ ಜೋಡಿ ಇನಿಂಗ್ಸ್ ಆರಂಭಿಸಿದ್ದು, ಉತ್ತಮ ಆರಂಭ ಪಡೆದಿದೆ. ಈ ಜೋಡಿ ಅರ್ಧಶತಕದ ಜೊತೆಯಾಟವಾಡಿದ್ದು, ಈ ವೇಳೆ 34 ರನ್ ಗಳಿಸಿದ್ದ ರೋಹಿತ್ ಶರ್ಮಾ ಟಿಕ್ನರ್ ಬೌಲಿಂಗ್ ನಲ್ಲಿ ಔಟ್ ಆಗಿದ್ದಾರೆ. ಇದೀಗ ಕ್ರೀಸ್ ಗೆ ವಿರಾಟ್ ಕೊಹ್ಲಿ ಆಗಮಿಸಿದ್ದು, ಶುಭಮನ್ ಗಿಲ್ ಜೊತೆ ಇನ್ನಿಂಗ್ಸ್ ಹಂಚಿಕೊಂಡಿದ್ದಾರೆ.
ಶ್ರೀಲಂಕಾ ಎದುರು ಒಂದು ಅರ್ಧಶತಕ ಹಾಗೂ ಶತಕ ಗಳಿಸಿರುವ ಗಿಲ್ ಆಯ್ಕೆಗಾರರ ವಿಶ್ವಾಸ ಉಳಿಸಿಕೊಂಡಿದ್ದು, ‘ರನ್ ಮೆಷಿನ್’ ವಿರಾಟ್ ಕೊಹ್ಲಿ ಮತ್ತೆ ತಮ್ಮ ಲಯಕ್ಕೆ ಮರಳಿರುವುದು ತಂಡಕ್ಕೆ ಮತ್ತಷ್ಟು ಬಲ ತಂದಿದೆ. ಅವರಲ್ಲದೇ ಸೂರ್ಯ ಕುಮಾರ್ ಯಾದವ್, ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಇರುವುದರಿಂದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಬೌಲಿಂಗ್ ವಿಭಾಗದಲ್ಲಿ ಸಿರಾಜ್, ಶಮಿ, ಸ್ಪಿನ್ನರ್ ಕುಲದೀಪ್ ಮತ್ತು ಚಾಹಲ್ ಉತ್ತಮ ಲಯದಲ್ಲಿರುವುದು ತಂಡದಲ್ಲಿ ಹುಮ್ಮಸ್ಸು ಹೆಚ್ಚಿಸಿದೆ.
ಕಿವೀಸ್ ಬಳಗದಲ್ಲಿ ಅನುಭವಿಗಳಾದ ಕೇನ್ ವಿಲಿಯಮ್ಸನ್ ಮತ್ತು ಟಿಮ್ ಸೌಥಿ ಅವರು ಈ ಸರಣಿಯಲ್ಲಿ ಆಡುತ್ತಿಲ್ಲ. ಅದರಿಂದಾಗಿ ಟಾಮ್ ಲಥಾಮ್ ನಾಯಕತ್ವ ವಹಿಸಿದ್ದಾರೆ. ನ್ಯೂಜಿಲೆಂಡ್ ತಂಡವು ಪಾಕಿಸ್ತಾನದಲ್ಲಿ ನಡೆದ ಸರಣಿಯಲ್ಲಿ ಆಡಿದ ನಂತರ ಭಾರತಕ್ಕೆ ಬಂದಿಳಿದಿದೆ.
ತಂಡಗಳು ಇಂತಿವೆ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ನ್ಯೂಜಿಲೆಂಡ್: ಟಾಮ್ ಲಥಾಮ್ (ನಾಯಕ), ಫಿನ್ ಅಲೆನ್, ಡೆವೊನ್ ಕಾನ್ವೆ, ಹೆನ್ರಿ ನಿಕೊಲ್ಸ್, ಡೆರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಬ್ರೆಸ್ವೆಲ್, ಮಿಚೆಲ್ ಸ್ಯಾಂಟನರ್, ಹೆನ್ರಿ ಶಿಪ್ಲಿ, ಲಾಕಿ ಫರ್ಗ್ಯುಸನ್, ಬ್ಲೇರ್ ಟಿಕ್ನರ್
Advertisement