ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟ: ಜಸ್ಪ್ರೀತ್ ಬುಮ್ರಾ ನಾಯಕ!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ T20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಈ ತಂಡದ ನಾಯಕತ್ವವನ್ನು ಜಸ್ಪ್ರೀತ್ ಬುಮ್ರಾ ಅವರಿಗೆ ನೀಡಲಾಗಿದೆ.
Published: 31st July 2023 09:21 PM | Last Updated: 31st July 2023 09:21 PM | A+A A-

ಜಸ್ ಪ್ರೀತ್ ಬುಮ್ರಾ
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ T20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಈ ತಂಡದ ನಾಯಕತ್ವವನ್ನು ಜಸ್ಪ್ರೀತ್ ಬುಮ್ರಾ ಅವರಿಗೆ ನೀಡಲಾಗಿದೆ.
ಸುಮಾರು 10 ತಿಂಗಳ ನಂತರ ಬುಮ್ರಾ ಟೀಂ ಇಂಡಿಯಾಗೆ ಮರಳುತ್ತಿದ್ದು, ಅವರು ಬಂದ ತಕ್ಷಣ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಈ ಭಾರತೀಯ ವೇಗದ ಬೌಲರ್ ಸೆಪ್ಟೆಂಬರ್ 2022ರಲ್ಲಿ ಭಾರತಕ್ಕಾಗಿ ತನ್ನ ಕೊನೆಯ ಪಂದ್ಯವನ್ನು ಆಡಿದರು. ನಿರಂತರ ಬೆನ್ನುನೋವಿನಿಂದ ತೊಂದರೆಗೊಳಗಾಗಿರುವ ಬುಮ್ರಾ ಈಗ ಶಸ್ತ್ರಚಿಕಿತ್ಸೆಯ ನಂತರ ಪುನರಾಗಮನ ಮಾಡುತ್ತಿದ್ದಾರೆ. ಐರ್ಲೆಂಡ್ ವಿರುದ್ಧದ ಈ ಸರಣಿಯು ಅವರ ಏಷ್ಯಾ ಕಪ್ ಮತ್ತು ವಿಶ್ವಕಪ್ನ ಭವಿಷ್ಯವನ್ನು ನಿರ್ಧರಿಸುತ್ತದೆ.
ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡದ ನಾಯಕತ್ವ ವಹಿಸಲಿರುವ ಬುಮ್ರಾ ಅವರನ್ನು ಹೊರತುಪಡಿಸಿ, ರಿತುರಾಜ್ ಗಾಯಕ್ವಾಡ್ ಅವರನ್ನು ತಂಡದ ಉಪನಾಯಕರನ್ನಾಗಿ ಮಾಡಲಾಗಿದೆ. ಇದೇ ವೇಳೆ ಯುವ ಆಟಗಾರರಾದ ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ, ಶಿವಂ ದುಬೆ, ಶಹಬಾಜ್ ಅಹ್ಮದ್ ಕೂಡ ಈ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ 2023: ಸಾಂಪ್ರದಾಯಿಕ ಬದ್ದ ವೈರಿಗಳಾದ ಭಾರತ-ಪಾಕಿಸ್ತಾನ ಪಂದ್ಯ ಮರು ನಿಗದಿ; ವರದಿ
ಜಸ್ಪ್ರೀತ್ ಬುಮ್ರಾ ಜೊತೆಗೆ ಗಾಯದ ಸಮಸ್ಯೆಯಿಂದ ಸ್ವಲ್ಪ ಸಮಯದಿಂದ ಹೊರಗುಳಿದಿದ್ದ ಖ್ಯಾತ ವೇಗದ ಬೌಲರ್ ಕೃಷ್ಣ ಕೂಡ ಐರ್ಲೆಂಡ್ ವಿರುದ್ಧ ತಂಡಕ್ಕೆ ಮರಳಲಿದ್ದಾರೆ. ಇತ್ತೀಚೆಗಷ್ಟೇ ಎನ್ಸಿಎಯಲ್ಲಿ ಬುಮ್ರಾ ಮತ್ತು ಕೃಷ್ಣ ಸಾಕಷ್ಟು ಬೆವರಿಳಿಸಿದ್ದಾರೆ.
15 ಆಟಗಾರರ ಈ ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಸೇರಿದಂತೆ 5 ವೇಗದ ಬೌಲರ್ಗಳಿದ್ದು, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್ ಮತ್ತು ರವಿ ಬಿಷ್ಣೋಯ್ ರೂಪದಲ್ಲಿ ಮೂವರು ಸ್ಪಿನ್ನರ್ಗಳು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ಐರ್ಲೆಂಡ್ ಪ್ರವಾಸ ಆಗಸ್ಟ್ 18ರಿಂದ ಆರಂಭವಾಗಲಿದೆ. ಸರಣಿಯ ಎಲ್ಲಾ ಮೂರು ಪಂದ್ಯಗಳು ಡಬ್ಲಿನ್ನ ಮಲಾಹೈಡ್ನಲ್ಲಿ ನಡೆಯಲಿವೆ ಮತ್ತು ಪಂದ್ಯಗಳು 7:30 PM IST ಕ್ಕೆ ಪ್ರಾರಂಭವಾಗುತ್ತವೆ. ಭಾರತ vs ಐರ್ಲೆಂಡ್ 2ನೇ ಮತ್ತು 3ನೇ ಟಿ20 ಕ್ರಮವಾಗಿ ಆಗಸ್ಟ್ 20 ಮತ್ತು 23ರಂದು ನಡೆಯಲಿದೆ.
ಭಾರತ ತಂಡ
ಜಸ್ಪ್ರೀತ್ ಬುಮ್ರಾ(ನಾಯಕ), ರಿತುರಾಜ್ ಗಾಯಕ್ವಾಡ್(ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಖ್ಯಾತ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.