
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾಗಿದ್ದು, ಪಾಕಿಸ್ತಾನದ ವಿರುದ್ಧ ಭಾರತ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಆಡುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.
2012-13ರಲ್ಲಿ ಪಾಕಿಸ್ತಾನ ಸೀಮಿತ ಓವರ್ಗಳ ಸರಣಿಗಾಗಿ ಭಾರತಕ್ಕೆ ಪ್ರಯಾಣ ಬೆಳೆಸಿದ ನಂತರ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿಯನ್ನು ಆಡಿಯೇ ಇಲ್ಲ. ಭಾರತ ಕೊನೆಯ ಬಾರಿಗೆ 2008ರಲ್ಲಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿತ್ತು. ಭಾರತ ಮತ್ತು ಪಾಕಿಸ್ತಾನ ತಂಡಗಳು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ. 2025ರ ಚಾಂಪಿಯನ್ಸ್ ಟ್ರೋಫಿಗಾಗಿ, ಭಾರತವು ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿತು. ಆದ್ದರಿಂದ ಪಾಕಿಸ್ತಾನ ವಿರುದ್ಧ ಮತ್ತು ಫೈನಲ್ ಸೇರಿದಂತೆ ತಮ್ಮ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ನಡೆಸಲಾಯಿತು.
'ನಾವು ಸಂತ್ರಸ್ತರ ಜೊತೆಗಿದ್ದೇವೆ ಮತ್ತು ದಾಳಿಯನ್ನು ಖಂಡಿಸುತ್ತೇವೆ. ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧವಾಗಿರುತ್ತೇವೆ. ಸರ್ಕಾರದ ನಿಲುವಿನಿಂದಾಗಿ ಮುಂದೆ ನಾವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿಗಳಲ್ಲಿ ಆಡುವುದಿಲ್ಲ. ಆದರೆ, ಐಸಿಸಿ ಕಾರ್ಯಕ್ರಮದ ವಿಷಯಕ್ಕೆ ಬಂದಾಗ, ನಾವು ಆಡುತ್ತೇವೆ. ಐಸಿಸಿಗೆ ಏನು ನಡೆಯುತ್ತಿದೆ ಎಂಬುದರ ಬಗ್ಗೆಯೂ ತಿಳಿದಿದೆ' ಎಂದು ಅವರು ಸ್ಪೋರ್ಟ್ಸ್ ತಕ್ಗೆ ತಿಳಿಸಿದರು.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕೂಡ ದಾಳಿಯ ಬಗ್ಗೆ ಸಂತಾಪ ಸೂಚಿಸಿದ್ದಾರೆ.
'ನಿನ್ನೆ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಅಮಾಯಕರ ಜೀವಹಾನಿಯಿಂದ ಕ್ರಿಕೆಟ್ ಸಮುದಾಯ ತೀವ್ರ ಆಘಾತ ಮತ್ತು ದುಃಖಿತವಾಗಿದೆ. ಬಿಸಿಸಿಐ ಪರವಾಗಿ, ಈ ಘೋರ ಮತ್ತು ಹೇಡಿತನದ ಕೃತ್ಯವನ್ನು ಸಾಧ್ಯವಾದಷ್ಟು ಬಲವಾದ ಮಾತುಗಳಿಂದ ಖಂಡಿಸುತ್ತಾ, ನಾನು ದುಃಖಿತ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಅಗಲಿದ ಆತ್ಮಗಳಿಗಾಗಿ ಪ್ರಾರ್ಥಿಸುತ್ತೇನೆ. ಅವರ ನೋವು ಮತ್ತು ದುಃಖವನ್ನು ಹಂಚಿಕೊಳ್ಳುತ್ತಾ, ಈ ದುರಂತದ ಸಮಯದಲ್ಲಿ ನಾವು ಕೈಜೋಡಿಸುತ್ತೇವೆ' ಎಂದು ಸೈಕಿಯಾ ಹೇಳಿದರು.
ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಪಂದ್ಯದ ವೇಳೆ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗೌರವ ಸಲ್ಲಿಸಿತು. ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸಲು, ಪಂದ್ಯ ಪ್ರಾರಂಭವಾಗುವ ಮೊದಲು 60 ಸೆಕೆಂಡುಗಳ ಮೌನಾಚರಣೆ ಮಾಡಲಾಯಿತು.
ಟಾಸ್ ಸಮಯದಲ್ಲಿ, ಎರಡೂ ತಂಡಗಳ ನಾಯಕರು ತಮ್ಮ ಸಂತಾಪ ಸೂಚಿಸಿದರು ಮತ್ತು ಈ ಹೇಯ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಪಂದ್ಯದ ಉದ್ದಕ್ಕೂ, ಆಟಗಾರರು, ಪಂದ್ಯದ ಅಧಿಕಾರಿಗಳು, ಕಮೆಂಟೇಟರ್ಸ್ ಮತ್ತು ಸಹಾಯಕ ಸಿಬ್ಬಂದಿ ತೋಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿದ್ದರು.
Advertisement