‘ಮೈದಾನದಲ್ಲಿ ಎದುರಾಳಿಯೇ ಶತ್ರು’: ವಿರಾಟ್ ಕೊಹ್ಲಿಯ ಆಕ್ರಮಣಶೀಲತೆಯ ಮಂತ್ರ ಪಠಿಸಿದ ಮೊಹಮ್ಮದ್ ಸಿರಾಜ್

ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ, ಸಿರಾಜ್ ಅವರು ಜಸ್ಪ್ರೀತ್ ಬುಮ್ರಾ ಅವರ ಸಹಾಯಕರಾಗಿ ಬಂದರು ಮತ್ತು ಐದು ಕಠಿಣ ಟೆಸ್ಟ್ ಪಂದ್ಯಗಳಲ್ಲಿ, ಅವರು ಭಾರತದ ವೇಗದ ದಾಳಿಯ ಮುಂಚೂಣಿಯಾಗಿ ಹೊರಹೊಮ್ಮಿದರು.
Virat kohli and Mohammed Siraj
ವಿರಾಟ್ ಕೊಹ್ಲಿ - ಮೊಹಮ್ಮದ್ ಸಿರಾಜ್
Updated on

ಇಂಗ್ಲೆಂಡ್‌ ವಿರುದ್ಧ ನಡೆದ ಭಾರತದ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನವನ್ನು ನಿರ್ಲಕ್ಷಿಸುವುದು ಅಸಾಧ್ಯ. ಆದರೆ, ಅದು ಕೇವಲ ಭಾವನೆ ಮಾತ್ರ ಆಗಿರಲಿಲ್ಲ. ದಿನವಿಡೀ ಸಿರಾಜ್ ಎನರ್ಜಿಯಿಂದ ಕೂಡಿದ್ದರು ಮತ್ತು ಜವಾಬ್ದಾರಿಯನ್ನು ತಮ್ಮ ಮೇಲೆ ಹೊತ್ತು ಆಡಿದರು. ಇದು ಅವರ ಮಾಜಿ ನಾಯಕ ವಿರಾಟ್ ಕೊಹ್ಲಿಯಿಂದ ಬಂದ ಪರಂಪರೆಯಾಗಿತ್ತು. 'ಮೈನೇ ಯೇ ವಿರಾಟ್ ಭಾಯ್ ಸೆ ಸಿಖಾ ಹೈ' ಎಂದ ಸಿರಾಜ್, ಕೊಹ್ಲಿ ಆಕ್ರಮಣಶೀಲತೆ ಮತ್ತು ಉತ್ಸಾಹದಿಂದ ಆಟವಾಡಲು ಹೇಗೆ ಕಲಿಸಿದರು, ಎದುರಾಳಿಯನ್ನು ಮೈದಾನದಲ್ಲಿ ಹೇಗೆ ನೋಡಬೇಕೆಂದು ಹೇಳಿದರು ಎಂಬುದರ ಕುರಿತು ಮಾತನಾಡಿದ್ದಾರೆ.

ಓವಲ್ ಟೆಸ್ಟ್ ಪಂದ್ಯದಲ್ಲಿ ಆ ತೀವ್ರತೆ ಮತ್ತೆ ಜೀವಂತವಾಯಿತು. ಸಿರಾಜ್ ಅಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಭಾರತದ ಹೋರಾಟಕ್ಕೆ ಜೀವ ತುಂಬುವಂತೆ ಒತ್ತಾಯಿಸಿದರು. ಅದು ಕೆಲಸ ಮಾಡಿತು. ಮೊಮೆಂಟಮ್ ಬದಲಾಯಿತು, ಇಂಗ್ಲೆಂಡ್ ತತ್ತರಿಸಿತು ಮತ್ತು ಸಿರಾಜ್ ಅದನ್ನು ಸದುಪಯೋಗಪಡಿಸಿಕೊಂಡು ಭಾರತವನ್ನು ರೋಮಾಂಚಕ ಸರಣಿ ಸಮಬಲದ ಗೆಲುವಿನತ್ತ ಕೊಂಡೊಯ್ದರು. ಪಂದ್ಯದಲ್ಲಿ ಅದ್ಭುತ ಒಂಬತ್ತು ವಿಕೆಟ್‌ ಕಬಳಿಸಿದ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು. ಅಷ್ಟೇ ಅಲ್ಲ. ಪರಿಸ್ಥಿತಿ ಏನೇ ಇರಲಿ, ಸಿರಾಜ್ ನಿರಂತರವಾಗಿ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳೊಂದಿಗೆ ತೊಡಗಿಸಿಕೊಂಡರು. ಇದು ಅವರ ರೋಲ್ ಮಾಡೆಲ್ ವಿರಾಟ್ ಕೊಹ್ಲಿ ಮಾಡಿದಂತೆಯೇ ಇತ್ತು. ಅತ್ಯುತ್ತಮ ಪ್ರದರ್ಶನ ಮೂಡಿಬಂತು.

'ಅವರ (ವಿರಾಟ್ ಕೊಹ್ಲಿ) ವೃತ್ತಿಜೀವನದುದ್ದಕ್ಕೂ, ಅವರು ಅದೇ ತೀವ್ರತೆಯಿಂದ ಕ್ರಿಕೆಟ್ ಆಡಿದರು. ಮತ್ತು ನಾನು ಅವರಿಂದ ಕಲಿಯಲು ಪ್ರಯತ್ನಿಸಿದ್ದು ಅದನ್ನೇ. ನೀವು ಓವಲ್‌ನಲ್ಲಿ ನಾಲ್ಕನೇ ದಿನವನ್ನು ನೋಡಿದರೆ, ಇಂಗ್ಲೆಂಡ್ ಆಟವನ್ನು ನಿಯಂತ್ರಿಸುತ್ತಿದ್ದ ಸಮಯವಿತ್ತು. ರೂಟ್ ಮತ್ತು ಬ್ರೂಕ್ ನಡುವೆ ಬಹಳ ಬಲವಾದ ಪಾಲುದಾರಿಕೆ ಇತ್ತು. ಅಲ್ಲಿ ನಿಮಗೆ ತೀವ್ರತೆ ಬೇಕು. ಆಗ ಎಲ್ಲ ಮುಗಿಯಿತು ಎಂದು ನೀವು ಬಿಡಬಾರದು ಮತ್ತು ಯಾವುದೇ ವಿಷಯ ನಮ್ಮ ನಿಯಂತ್ರಣದಿಂದ ಹೊರಗುಳಿಯಲು ಬಿಡಬಾರದು' ಎಂದು ಸಿರಾಜ್ ರೆವ್‌ಸ್ಪೋರ್ಟ್ಜ್‌ ಜೊತೆ ಮಾತನಾಡುತ್ತಾ ಹೇಳಿದರು.

Virat kohli and Mohammed Siraj
'Oval Test ಹೀರೋ' ಮೊಹಮ್ಮದ್ ಸಿರಾಜ್ ಹಾಡಿ ಹೊಗಳಿದ ವಾಸಿಂ ಅಕ್ರಮ್!

ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ, ಸಿರಾಜ್ ಅವರು ಜಸ್ಪ್ರೀತ್ ಬುಮ್ರಾ ಅವರ ಸಹಾಯಕರಾಗಿ ಬಂದರು ಮತ್ತು ಐದು ಕಠಿಣ ಟೆಸ್ಟ್ ಪಂದ್ಯಗಳಲ್ಲಿ, ಅವರು ಭಾರತದ ವೇಗದ ದಾಳಿಯ ಮುಂಚೂಣಿಯಾಗಿ ಹೊರಹೊಮ್ಮಿದರು. ಶಮಿ ಲಭ್ಯವಿಲ್ಲದಿದ್ದಾಗ ಮತ್ತು ಬುಮ್ರಾ ಪಂದ್ಯದಿಂದ ಹೊರಗುಳಿದಾಗ, ಸಿರಾಜ್ ಆಯಾಸ ಮತ್ತು ನಿರೀಕ್ಷೆಗಳನ್ನು ಮೀರಿ ಬೌಲಿಂಗ್ ಮಾಡಿದರು. ಸರಣಿಯಲ್ಲಿ ಅತಿ ಹೆಚ್ಚು 23 ವಿಕೆಟ್‌ಗಳನ್ನು ಗಳಿಸಿದರು.

'ನಾವು ಕ್ರಿಕೆಟ್ ಅನ್ನು ಆಕ್ರಮಣಶೀಲತೆ ಮತ್ತು ಉತ್ಸಾಹದಿಂದ ಆಡಬೇಕು ಎಂದು ವಿರಾಟ್ ಭಾಯ್ ಯಾವಾಗಲೂ ನಮಗೆ ಹೇಳುತ್ತಿದ್ದರು. ನಾವು ಮೈದಾನದಲ್ಲಿರುವಾಗ, ಎದುರಾಳಿ ಸ್ನೇಹಿತನಲ್ಲ. ಎದುರಾಳಿ ನಮ್ಮ ಶತ್ರು. ಪಂದ್ಯ ಮುಗಿದ ನಂತರ, ನಾವೆಲ್ಲರೂ ಸ್ನೇಹಿತರು' ಎನ್ನುತ್ತಿದ್ದರು ಎಂಬುದನ್ನು ನೆನಪಿಸಿಕೊಂಡರು.

ಇಂಗ್ಲೆಂಡ್‌ನ ಕೋಚ್ ಬ್ರೆಂಡನ್ ಮೆಕಲಮ್ ಕೂಡ ಸಿರಾಜ್‌ನ ಆಕ್ರಮಣಶೀಲತೆಗೆ ಗೌರವ ಸಲ್ಲಿಸಿದರು ಮತ್ತು ಜೋ ರೂಟ್ ಕೂಡ ಅವರನ್ನು ನಿಜವಾದ ಯೋಧ ಎಂದು ಕರೆದರು. ಹೆಚ್ಚುತ್ತಿರುವ ಒತ್ತಡದ ನಡುವೆಯೂ, ಸಿರಾಜ್ ಪಟ್ಟುಬಿಡದೆ ಆಡಿದರು. ಪ್ರತಿಯೊಂದು ಚೆಂಡು, ಪ್ರತಿಯೊಂದು ಸ್ಪೆಲ್, ವೈಯಕ್ತಿಕ ಸಾಧನೆಗಾಗಿ ಅಲ್ಲ, ದೇಶಕ್ಕಾಗಿ ಆಡುತ್ತಿರುವಂತೆ ತೋರಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com