
ಟೀಂ ಇಂಡಿಯಾ 12 ವರ್ಷ ತಾಯ್ನಾಡಿನಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಸೋತಿರಲೇ ಇಲ್ಲ. ಆದರೆ, 2024ರ ಅಕ್ಟೋಬರ್ನಲ್ಲಿ ಆಡಿದ ಟೆಸ್ಟ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತು. ಕಳೆದ ಕೆಲವು ತಿಂಗಳುಗಳಲ್ಲಿ ಭಾರತವು ಟೆಸ್ಟ್ ಕ್ರಿಕೆಟ್ನಲ್ಲಿ ತೀವ್ರ ಕುಸಿತ ಕಂಡಿದೆ. ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ 0-3 ಮತ್ತು ನಂತರ ಆಸ್ಟ್ರೇಲಿಯಾ ವಿರುದ್ಧ 1-3 ಅಂತರದಿಂದ ಸೋತಿದೆ. ಶ್ರೀಲಂಕಾದ 1996 ರ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗ ಇದೀಗ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಭಾರತ ತಂಡವು ಶ್ರೇಷ್ಠ ಶ್ರೀಲಂಕಾ ತಂಡಕ್ಕೆ ಸುಲಭವಾದ ಆಯ್ಕೆಯಾಗಿದೆ. ಟೀಂ ಇಂಡಿಯಾವನ್ನು ತವರು ನೆಲದಲ್ಲಿಯೇ ಕೇವಲ ಮೂರು ದಿನಗಳಲ್ಲಿ ಸೋಲಿಸಬಹುದು ಎಂದು ಹೇಳಿದ್ದಾರೆ.
'(ಚಮಿಂದಾ) ವಾಸ್ ಮತ್ತು ಮುರಳಿ (ಮುತ್ತಯ್ಯ ಮುರಳೀಧರನ್) ಅವರಂತಹ ಬೌಲರ್ಗಳೊಂದಿಗೆ ನನ್ನ ತಂಡವು ಕೇವಲ ಮೂರು ದಿನಗಳಲ್ಲಿ ಭಾರತದಲ್ಲಿಯೇ ಟೀಂ ಇಂಡಿಯಾವನ್ನು ಸೋಲಿಸುತ್ತಿತ್ತು' ಎಂದು ರಣತುಂಗ ದಿ ಟೆಲಿಗ್ರಾಫ್ನೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನವು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ವಿರುದ್ಧ ಪ್ರಶ್ನೆಗಳಿಗೆ ಕಾರಣವಾಯಿತು. ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎನ್ನುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
'ಸದ್ಯದ ಶ್ರೀಲಂಕಾ ತಂಡವು ತನ್ನ ಪೀಳಿಗೆಯ ತಂಡಗಳಂತೆಯೇ ಉತ್ತಮವಾಗಿದೆ. ಈಗಿನ ಶ್ರೀಲಂಕಾ ತಂಡದಲ್ಲಿಯೂ ಸಹ ಪ್ರತಿಭೆಗಳ ಕೊರತೆಯಿಲ್ಲ. ಒಟ್ಟಾರೆ, ಇದು ಸಾಕಷ್ಟು ಪ್ರತಿಭಾವಂತರು ಇರುವ ತಂಡವಾಗಿದೆ. 1996 ರ ತಂಡವನ್ನು ಹಿಂತಿರುಗಿ ನೋಡಿದಾಗ, ಅರವಿಂದ (ಡಿಸಿಲ್ವಾ) ಮಾತ್ರ ಈಗಿನ ತಂಡದ ಆಟಗಾರರಿಗಿಂತ ಮೇಲಿದ್ದಾರೆ' ಎಂದು ರಣತುಂಗ ಹೇಳಿದರು.
'ನಿಜವಾದ ಸಮಸ್ಯೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಒಳಗೆ ಇದೆ. ಮಂಡಳಿಯ ಆಡಳಿತವು ಭ್ರಷ್ಟವಾಗಿದೆ, ಇದು ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ' ಎಂದು ಅವರು ಹೇಳಿದರು.
ಇತ್ತೀಚಿನ ಎರಡು ಸರಣಿಗಳಲ್ಲಿನ ಸೋಲುಗಳಿಂದಾಗಿ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ನಿಂದ ಹೊರಬಿದ್ದಿದೆ. ಮತ್ತೊಂದೆಡೆ, ಶ್ರೀಲಂಕಾ ತಂಡವು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧಧ ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದು, WTC ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿದೆ.
'ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ಗೆ ಮರಳಬೇಕು. ಸುನೀಲ್ ಗವಾಸ್ಕರ್, ದಿಲೀಪ್ ವೆಂಗ್ಸರ್ಕರ್ ಅಥವಾ ರಾಹುಲ್ ದ್ರಾವಿಡ್ ಅವರಂತಹ ವ್ಯಕ್ತಿಗಳೊಂದಿಗೆ ಕೊಹ್ಲಿ ಮಾತನಾಡಬೇಕು ಎಂದು ನಾನು ಭಾವಿಸುತ್ತೇನೆ. ಅವರು ಖಂಡಿತವಾಗಿಯೂ ಅವರಿಗೆ ಸಹಾಯ ಮಾಡಬಹುದು' ಎಂದು ರಣತುಂಗ ಸಲಹೆ ನೀಡಿದರು.
ಭಾರತವು ಫೆಬ್ರುವರಿ 19 ರಿಂದ 2025ರ ಚಾಂಪಿಯನ್ಸ್ ಟ್ರೋಫಿಯನ್ನು ಆಡಲಿದೆ. ಶ್ರೀಲಂಕಾ 2023ರ ವಿಶ್ವಕಪ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಗಳಿಸಿದ ನಂತರ ಅರ್ಹತೆ ಪಡೆಯಲು ವಿಫಲವಾಗಿದೆ.
Advertisement