'2 ಓವರ್ಗಳಲ್ಲಿ 40 ರನ್ ಗಳಿಸುವುದು ಕಷ್ಟದ ಕೆಲಸ': CSK, ಎಂಎಸ್ ಧೋನಿ ಫಾರ್ಮ್ ಬಗ್ಗೆ ವಿರೇಂದ್ರ ಸೆಹ್ವಾಗ್
ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ರನ್ಗಳ ಅಂತರದಿಂದ ಸೋಲು ಕಂಡಿದೆ. ಈ ಮೂಲಕ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲು ಕಂಡಂತಾಗಿದೆ. ಅಂತಿಮ ಓವರ್ನಲ್ಲಿ 20 ರನ್ಗಳು ಬೇಕಾಗಿದ್ದಾಗ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಕ್ರೀಸ್ನಲ್ಲಿದ್ದರು. 11 ಎಸೆತಗಳಲ್ಲಿ 16 ರನ್ ಗಳಿಸಿದ್ದ ಧೋನಿ ಜೋರಾಗಿ ಬ್ಯಾಟ್ ಬೀಸಿದ ವೇಳೆ ಶಿಮ್ರಾನ್ ಹೆಟ್ಮೇಯರ್ ಕ್ಯಾಚ್ ಹಿಡಿಯುವ ಮೂಲಕ ಔಟ್ ಮಾಡಿದರು. ಗೆಲುವಿನ ಅಂತರ ಕಡಿಮೆಯಿದ್ದರೂ, ಕಳೆದ ಐದು ವರ್ಷಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 180 ರನ್ಗಳಿಗಿಂತ ಹೆಚ್ಚಿನ ರನ್ ಚೇಸ್ ಮಾಡುವಾಗ ಗೆದ್ದಿರುವ ಇತಿಹಾಸವಿಲ್ಲ.
ಐಪಿಎಲ್ನಲ್ಲಿ ಆಟಗಾರ ಮತ್ತು ತರಬೇತುದಾರನಾಗಿ ಕೆಲಸ ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, 'ಯಾವುದೇ ಒಂದು ತಂಡವು ಕೊನೆಯಲ್ಲಿ ಪ್ರತಿ ಓವರ್ಗೆ 20 ರನ್ಗಳ ದರದಲ್ಲಿ ಸ್ಕೋರ್ ಮಾಡುವಲ್ಲಿ ಯಶಸ್ವಿಯಾದ ಸಂದರ್ಭಗಳು ಬಹಳ ಕಡಿಮೆ. ಐಪಿಎಲ್ನಲ್ಲಿ ಹಾಗೆ ಮಾಡಿದ ಕೆಲವೇ ಆಟಗಾರರಲ್ಲಿ ಧೋನಿ ಕೂಡ ಒಬ್ಬರಾಗಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅದು ಸಂಭವಿಸಿಲ್ಲ' ಎಂದಿದ್ದಾರೆ.
'2 ಓವರ್ಗಳಲ್ಲಿ 40 ರನ್ ಗಳಿಸುವುದು ಕಷ್ಟದ ಕೆಲಸ. ಮಧ್ಯಮ ಕ್ರಮಾಂಕದಲ್ಲಿ ಎಷ್ಟೇ ದೊಡ್ಡ ಆಟಗಾರನಾಗಿದ್ದರೂ, ಅದು ಕಷ್ಟದ ಕೆಲಸ. ನೀವು ಒಂದು ಅಥವಾ ಎರಡು ಸಂದರ್ಭಗಳಲ್ಲಿ ಗೆಲ್ಲುತ್ತೀರಿ ಅಷ್ಟೇ. ನಿರ್ಣಾಯಕ ಕ್ಷಣದಲ್ಲಿ ಅಕ್ಷರ್ ಪಟೇಲ್ ಅವರ ಬೌಲಿಂಗ್ನಲ್ಲಿ ಧೋನಿ 24 ಅಥವಾ 25 ರನ್ ಗಳಿಸಿದ್ದರು. ಮತ್ತೊಂದು ಸಂದರ್ಭದಲ್ಲಿ ಧರ್ಮಶಾಲಾದಲ್ಲಿ ಧೋನಿ ಇರ್ಫಾನ್ ಪಠಾಣ್ ಅವರ ಎಸೆತದಲ್ಲಿ 19 ಅಥವಾ 20 ರನ್ ಗಳಿಸಿದ್ದರು' ಎಂದು ಸೆಹ್ವಾಗ್ ಕ್ರಿಕ್ಬಜ್ಗೆ ತಿಳಿಸಿದರು.
ಐಪಿಎಲ್ನಲ್ಲಿ ದೊಡ್ಡ ಗುರಿಗಳನ್ನು ಬೆನ್ನಟ್ಟುವಲ್ಲಿ ಸಿಎಸ್ಕೆ ದೀರ್ಘಕಾಲದ ಹೋರಾಟಗಳನ್ನು ಎತ್ತಿ ತೋರಿಸಿದ ಅವರು, 'ನೀವು ಒಂದು ಅಥವಾ ಎರಡು ಪಂದ್ಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬಹುದು. ಇತ್ತೀಚಿನ ಯಾವುದೇ ಪಂದ್ಯಗಳು ನಿಮ್ಮ ನೆನಪಿಗೆ ಬರುವುದಿಲ್ಲ. ಐದು ವರ್ಷಗಳಿಂದ, ಸಿಎಸ್ಕೆ 180ಕ್ಕಿಂತ ಹೆಚ್ಚಿನ ಮೊತ್ತವನ್ನು ಬೆನ್ನಟ್ಟಲು ಸಾಧ್ಯವಾಗಿಲ್ಲ' ಎಂದು ಅವರು ಪ್ರತಿಪಾದಿಸಿದರು.
ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ ಔಟ್ ಆದ ನಂತರ 17ನೇ ಓವರ್ ಆರಂಭವಾಗುವ ಮೊದಲೇ ಧೋನಿ ಬ್ಯಾಟಿಂಗ್ ಮಾಡಲು ಬಂದರು. ಜಡೇಜಾ ಅವರೊಂದಿಗೆ ಧೋನಿ ಮಹೇಶ್ ತೀಕ್ಷಣ ವಿರುದ್ಧ ಹೋರಾಡಿದರು. ವಿಕೆಟ್ನ ಸ್ವರೂಪವನ್ನು ಗ್ರಹಿಸುವ ಮೊದಲೇ ಅವರು ಬಹಳಷ್ಟು ಎಸೆತಗಳನ್ನು ಎದುರಿಸಿದರು. ಒಂದು ಸಿಕ್ಸ್ ಮತ್ತು ಒಂದು ಬೌಂಡರಿ ಬಾರಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ