
ಗುಜರಾತ್ ಟೈಟಾನ್ಸ್ ವಿರುದ್ಧ ಭಾನುವಾರ ಐಪಿಎಲ್ 2025ರ ಆವೃತ್ತಿಯ ಲೀಗ್ ಹಂತದ ತಮ್ಮ ಕೊನೆಯ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ (CSK) ಸಿದ್ಧತೆ ನಡೆಸುತ್ತಿದ್ದ ವೇಳೆ ಎಂಎಸ್ ಧೋನಿ ಅವರ ಭವಿಷ್ಯದ ಬಗ್ಗೆ ಚರ್ಚೆ ಭುಗಿಲೆದ್ದಿತು. ಪಂದ್ಯಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ, ಭಾರತದ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ, ಸಂಜಯ್ ಬಂಗಾರ್, ಆರ್ಪಿ ಸಿಂಗ್ ಮತ್ತು ಆಕಾಶ್ ಚೋಪ್ರಾ ಅವರು ಧೋನಿ ಅವರ ನಿವೃತ್ತಿ ಕುರಿತು ಚರ್ಚಿಸಿದರು. ಆರ್ಪಿ ಸಿಂಗ್ ಮತ್ತು ಸುರೇಶ್ ರೈನಾ ಅವರು ನಿವೃತ್ತಿಯ 'ವಿರುದ್ಧ' ನಿಂತರೆ, ಆಕಾಶ್ ಚೋಪ್ರಾ ಮತ್ತು ಬಂಗಾರ್ 'ಪರವಾಗಿ' ಚರ್ಚೆ ನಡೆಸಿದರು.
ಈ ಭಾರಿ ಪ್ಲೇಆಫ್ ರೇಸ್ನಿಂದಲೇ ಹೊರಬಿದ್ದಿದ್ದ ಸಿಎಸ್ಕೆ ಕಳಪೆ ಪ್ರದರ್ಶನದಿಂದ ಚೇತರಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿತ್ತು. ಟೂರ್ನಿಯ ಮಧ್ಯಭಾಗದಲ್ಲೇ ಗಾಯದಿಂದಾಗಿ ನಾಯಕ ರುತುರಾಜ್ ಗಾಯಕ್ವಾಡ್ ಪಂದ್ಯಾವಳಿಯಿಂದಲೇ ಹೊರಬಿದ್ದ ವೇಳೆ ಎಂಎಸ್ ಧೋನಿಯವರೇ ಆವೃತ್ತಿಯ ಉಳಿದ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಆಗಲೂ ತಂಡದ ಹಣೆಬರಹ ಮಾತ್ರ ಬದಲಾಗಿರಲಿಲ್ಲ. ಸಿಎಸ್ಕೆ ಪರ ಬ್ಯಾಟಿಂಗ್ ಮಾಡಲು ಧೋನಿ ಹಿಂಜರಿಯುತ್ತಿದ್ದರು. ಕೆಲವೊಮ್ಮೆ 8ನೇ ಸ್ಥಾನದಲ್ಲಿ ಕಾಣಿಸಿಕೊಂಡರೆ, ಮತ್ತೊಮ್ಮೆ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಂತಹ ಆಟಗಾರರನ್ನು ತಮಗಿಂದ ಮೊದಲೇ ಬ್ಯಾಟಿಂಗ್ಗೆ ಕಳಿಸಿದ್ದರು.
ಇತರ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿಯೇ ಎಂಎಸ್ ಧೋನಿ ಅವರು ಈ ಕ್ರಮ ಕೈಗೊಂಡರು ಎಂದು ಸುರೇಶ್ ರೈನಾ ಮತ್ತು ಆರ್ಪಿ ಸಿಂಗ್ ಸೂಚಿಸಿದರೆ, ಚೋಪ್ರಾ ಮತ್ತು ಬಂಗಾರ್, ಅಷ್ಟು ಹೊತ್ತು ಬ್ಯಾಟಿಂಗ್ ಮಾಡಲು ಧೋನಿ ಫಿಟ್ನೆಸ್ ಹೊಂದಿದ್ದಾರೆಯೇ ಎಂದು ಪ್ರಶ್ನಿಸಿದರು.
ಚರ್ಚೆಯಾಗಿದ್ದೇನು?
ಆಕಾಶ್ ಚೋಪ್ರಾ: ಎಂಎಸ್ ಧೋನಿ ಅನ್ಕ್ಯಾಪ್ಡ್ ಇಂಡಿಯನ್ ಆಗಿರದಿದ್ದರೆ, ಈ ವರ್ಷ ಸಿಎಸ್ಕೆ ತಂಡದ ಭಾಗವಾಗಿರುತ್ತಿದ್ದರೇ?
ಸುರೇಶ್ ರೈನಾ: ಖಂಡಿತ, ಅವರು 18 ವರ್ಷಗಳಿಂದ ತಂಡದಲ್ಲಿದ್ದಾರೆ. ಈಗಲೂ ಅವರು ಅತಿ ಹೆಚ್ಚು ಸಿಕ್ಸ್ಗಳನ್ನು ಬಾರಿಸುತ್ತಾರೆ.
ಆಕಾಶ್ ಚೋಪ್ರಾ: ಮುಖ್ಯ ವಿಷಯವೆಂದರೆ, ಅವರು 7, 8 ಅಥವಾ 9 ನೇ ಸ್ಥಾನದಲ್ಲಿ ಏಕೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ನಿಮ್ಮ ತಂಡ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿಲ್ಲ, ಸಮಸ್ಯೆಗಳು ಅಗ್ರ ಕ್ರಮಾಂಕದಿಂದ ಬರುತ್ತಿವೆ. ಇಷ್ಟು ದೊಡ್ಡ ಆಟಗಾರ ಆರಂಭಿಕ ಅಥವಾ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಲ್ಲವೇ? ಇಷ್ಟೊಂದು ಹಿಂಜರಿಕೆ ಏಕೆ? ಅವರು ಫಿಟ್ ಆಗಿದ್ದಾರೆಯೇ ಅಥವಾ ಇಲ್ಲವೇ?
ಸುರೇಶ್ ರೈನಾ: ಕೊನೆಯ ನಾಲ್ಕು ಓವರ್ಗಳಲ್ಲಿ ಅವರು ಹೆಚ್ಚು ಕಂಫರ್ಟ್ ಆಗಿದೆ ಎಂದು ಅವರು ಭಾವಿಸುತ್ತಾರೆ. ಅವರು 44ನೇ ವಯಸ್ಸಿನಲ್ಲಿಯೂ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ. ಅವರು ಫಿಟ್ ಆಗಿದ್ದಾರೆ. ವಿಶ್ವಕಪ್ (ಟಿ20) ಗಾಗಿ ತಂಡ ರಚನೆಯಾಗಬೇಕಿರುವುದರಿಂದ ಶಿವಂ ದುಬೆ ಅವರಂತಹ ಇತರರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಬಯಸುತ್ತಾರೆ ಎಂದು ಹೇಳಿದರು.
ಆರ್ಪಿ ಸಿಂಗ್: ಮೊಣಕಾಲು ಶಸ್ತ್ರಚಿಕಿತ್ಸೆಯ ನಂತರ, ಅವರು ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಪ್ರತಿಯೊಬ್ಬ ಆಟಗಾರ ಕೂಡ ಹಾಗೆಯೇ ಮಾಡುತ್ತಾರೆ. ಅವರು 20 ವರ್ಷಗಳಿಂದ ಕೀಪಿಂಗ್ ಮಾಡುತ್ತಿದ್ದಾರೆ. ತಮ್ಮನ್ನು ತಾವು ನಿಭಾಯಿಸಿಕೊಳ್ಳುತ್ತಾರೆ. ರೈನಾ ಕೂಡ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಸ್ವಲ್ಪ ಸಮಯದವರೆಗೆ ತಮ್ಮನ್ನು ತಾವು ನಿಭಾಯಿಸಿಕೊಂಡು ಕೊನೆಗೆ ಚೇತರಿಸಿಕೊಂಡರು.
ಮುಂದುವರಿದ ಸಂಭಾಷಣೆಯಲ್ಲಿ, ತಂಡದಲ್ಲಿ ಧೋನಿಯ ಉಪಸ್ಥಿತಿಯು ರುತುರಾಜ್ ಗಾಯಕ್ವಾಡ್ ಮತ್ತು ರವೀಂದ್ರ ಜಡೇಜಾ ಅವರಂತಹವರು ನಾಯಕರಾಗಿ ಅಭಿವೃದ್ಧಿ ಹೊಂದಲು ಅವಕಾಶ ನೀಡುತ್ತಿಲ್ಲ ಎಂದು ಬಂಗಾರ್ ಒತ್ತಿ ಹೇಳಿದರು.
Advertisement