
ಮುಲ್ಲನ್ಪುರ: ಹಾಲಿ ಐಪಿಎಲ್ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಇನ್ನು ಕೇವಲ ಎರಡು ಪಂದ್ಯಗಳ ಮಾತ್ರ ಬಾಕಿ ಇದ್ದು, ಇದೇ ಹೊತ್ತಿನಲ್ಲಿ ಟೀಂ ಇಂಡಿಯಾದ ಇಬ್ಬರು ಪ್ರಮುಖ ಆಟಗಾರರು ಪರಸ್ಪರ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು... ನಿನ್ನೆ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಸ್ಟಾರ್ ಆಟಗಾರರ ನಡುವೆ ಮುನಿಸು ಏರ್ಪಟ್ಟಿದ್ದು, ಇದು ಪಂದ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.
ನಿನ್ನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 20 ರನ್ಗಳಿಂದ ಮಣಿಸಿದ ಮುಂಬಯಿ, 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಗಳಿಸಿದೆ.
ಅತ್ತ ಲೀಗ್ ಹಂತದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರಿದ್ದ ಶುಭಮನ್ ಗಿಲ್ ಬಳಗ 4ನೇ ತಂಡವಾಗಿ ಅಭಿಯಾನ ಮುಗಿಸಿದೆ.
ನಾಯಕರ ನಡುವೆ ಮುನಿಸು?
ಇನ್ನು ಈ ಎಲಿಮಿನೇಟರ್ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಾ ಹಾಗೂ ಗುಜರಾತ್ ಟೈಟನ್ಸ್ ನಾಯಕ ಶುಭ್ ಮನ್ ಗಿಲ್ ನಡುವೆ ಮುಸುಕಿನ ಗುದ್ದಾಟ ನಡೆದಿದೆ ಎನ್ನಲಾಗಿದೆ. ನಿರ್ಣಾಯಕ ಪಂದ್ಯದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯಾ ಹಾಗೂ ಶುಭಮನ್ ಗಿಲ್ ನಡುವೆ ಕೆಲವು ಮುಜುಗರದ ಸನ್ನಿವೇಶಗಳು ನಡೆದವು. ಸದ್ಯ ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ಸಾಕಷ್ಟು ಚರ್ಚೆ ಹಟ್ಟು ಹಾಕಿದೆ.
ಕೈಕುಲುಕಲಿಲ್ಲ.. ಪರಸ್ಪರ ಮುಖಾಮುಖಿ ಮಾತನಾಡಲಿಲ್ಲ..
ಇನ್ನು ನಿನ್ನೆಯ ಪಂದ್ಯದಲ್ಲಿ ಟಾಸ್ ಮಾಡುವ ಮೊದಲು ಇಬ್ಬರೂ ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ನಂತರ ಟಾಸ್ ಮಾಡುವಾಗ ಹಾರ್ದಿಕ್ ಕೈ ಕುಲುಕಲು ಸಿದ್ಧರಿದ್ದರು. ಹಾರ್ದಿಕ್ ಪಾಂಡ್ಯ ಟಾಸ್ ಬಳಿಕ ಕೈ ಕುಲುಕಲು ಮುಂದಾದರು. ಆದರೆ ಗಿಲ್ ಅದನ್ನು ಗಮನಿಸದೇ ಮುಂದಕ್ಕೆ ಸಾಗಿದರು.
ಇದರಿಂದ ಪಾಂಡ್ಯಾ ಮುಜುಗರಕ್ಕೀಡಾದರು. ನಂತರ, ಶುಭಮನ್ ಗಿಲ್ ವಿಕೆಟ್ ಕಳೆದುಕೊಂಡಾಗ ಹಾರ್ದಿಕ್ ಪಾಂಡ್ಯ ಹೆಚ್ಚು ಆಕ್ರಮಣಕಾರಿಯಾಗಿ ಸಂಭ್ರಮಿಸಿದರು. ಗಿಲ್ ಹತ್ತಿರುವ ಬರುವವರೆಗೂ ಸೌಮ್ಯವಾಗಿಯೇ ಇದ್ದ ಪಾಂಡ್ಯಾ ಗಿಲ್ ಸಾಯಿ ಸುದರ್ಶನ್ ಬಳಿ ಚರ್ಚೆ ನಡೆಸುತ್ತಿದ್ದಾಗ ಉದ್ದೇಶಪೂರ್ವಕವಾಗಿಯೇ ಆಕ್ರಮಣಶೈಲಿ ಸಂಭ್ರಮಿಸಿದರು. ಅಲ್ಲದೆ ಗಿಲ್ ಅವರನ್ನು ದಾಟಿ ಹೋಗುವಾಗ ಮುಖವನ್ನು ತಿರುಗಿಸಿಕೊಂಡರು.
ಇಲ್ಲೇನೋ ಸಮಸ್ಯೆ ಇದೆ
ನಿನ್ನೆಯ ಪಂದ್ಯದ ಈ ದೃಶ್ಯಗಳೇ ಭಾರತದ ತಂಡದ ಸ್ಟಾರ್ ಆಟಗಾರರ ನಡುವೆ ಏನೋ ಸಮಸ್ಯೆ ಇದೆ ಎನ್ನುವುದುನ್ನು ಒತ್ತಿ ಹೇಳುತ್ತಿದೆ. ಹಾರ್ದಿಕ್ ಪಾಂಡ್ಯ ಮತ್ತು ಶುಭಮನ್ ಗಿಲ್ ನಡುವಿನ ಸಂಬಂಧವು ಸರಿಯಾಗಿಲ್ಲ ಎಂದು ಬಿಂಬಿತವಾಗುತ್ತಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಕೆಲವರು ಗಿಲ್ ನಿಮ್ಮ ವರ್ತನೆ ಸರಿಯಿಲ್ಲ ಎಂದರೆ, ಮತ್ತೆ ಕೆಲವರು ಗಿಲ್ ನಿಮಗೆ ಈ ಅಹಂಕಾರ ಒಳ್ಳೆಯದಲ್ಲ ಎಂದು ತಿಳಿಸಿದ್ದಾರೆ. ಇನ್ನು ಕೆಲವರು ಇದು ಕೇವಲ ಆಟದ ಭಾಗ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಇತರರು ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ವಾದಿಸುತ್ತಿದ್ದಾರೆ.
Advertisement