

ನವದೆಹಲಿ: ವೈಫಲ್ಯಗಳು ಆಟದ ಸಾಮಾನ್ಯ ಭಾಗವಾಗಿದೆ. ವಿಶೇಷವಾಗಿ ತಂಡವು ತುಂಬಾ ಆಕ್ರಮಣಕಾರಿ ಶೈಲಿಯ ಕ್ರಿಕೆಟ್ ಆಡಲು ಬದ್ಧವಾಗಿರುವಾಗ T20I ನಾಯಕ ಸೂರ್ಯಕುಮಾರ್ ಯಾದವ್ ಅವರ ಇತ್ತೀಚಿನ ಕಳಪೆ ಪ್ರದರ್ಶನದ ಬಗ್ಗೆ ಚಿಂತಿಸುತ್ತಿಲ್ಲ ಎಂದು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಕಳೆದ ತಿಂಗಳು ಯುಎಇಯಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಜಯಗಳಿಸಿದ್ದರೂ, ಸೂರ್ಯಕುಮಾರ್ ಅವರು ಏಳು ಇನಿಂಗ್ಸ್ಗಳಲ್ಲಿ 72 ರನ್ ಗಳಿಸಿದ್ದಾರೆ.
'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸೂರ್ಯ ಅವರ ಬ್ಯಾಟಿಂಗ್ ಫಾರ್ಮ್ ನಾನು ತಲೆ ಕೆಡಿಸಿಕೊಳ್ಳುತ್ತಿಲ್ಲ. ಏಕೆಂದರೆ, ನಾವು ನಮ್ಮ ಡ್ರೆಸ್ಸಿಂಗ್ ಕೋಣೆಯಲ್ಲಿ ಅತಿ ಆಕ್ರಮಣಕಾರಿ ಮಾದರಿಗೆ ಬದ್ಧರಾಗಿದ್ದೇವೆ. ನೀವು ರೀತಿಯನ್ನು ಅಳವಡಿಸಿಕೊಂಡಾಗ, ವೈಫಲ್ಯಗಳು ಅನಿವಾರ್ಯ' ಎಂದು ಜಿಯೋಹಾಟ್ಸ್ಟಾರ್ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಗಂಭೀರ್ ಹೇಳಿದರು.
'ಸೂರ್ಯ 30 ಎಸೆತಗಳಲ್ಲಿ 40 ರನ್ ಗಳಿಸಿ ಈ ಟೀಕೆಗಳಿಗೆ ತಕ್ಕ ಉತ್ತರ ನೀಡುವುದು ಸುಲಭ. ಆದರೆ, ಆಕ್ರಮಣಕಾರಿ ವಿಧಾನವನ್ನು ಅನುಸರಿಸುವಾಗ ಕೆಲವೊಮ್ಮೆ ವಿಫಲವಾಗುವುದು ಸ್ವೀಕಾರಾರ್ಹ ಎಂದು ನಾವು ಸಾಮೂಹಿಕವಾಗಿ ನಿರ್ಧರಿಸಿದ್ದೇವೆ. ಹೀಗಾಗಿ, ವ್ಯಕ್ತಿಗಳ ಮೇಲಲ್ಲ, ಇಡೀ ತಂಡದ ಮೇಲೆ ಗಮನ ಕೇಂದ್ರೀಕರಿಸಲಾಗಿದೆ' ಎಂದು ಅವರು ಹೇಳಿದರು.
ಸೂರ್ಯ ಅವರು ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾಗಲೂ, ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಅವರಂತಹವರು ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದ ಪಂದ್ಯಾವಳಿಯಲ್ಲಿ ಭಾರತ ತಂಡ ಗೆಲ್ಲಲು ನೆರವಾದರು.
'ಸದ್ಯ, ಅಭಿಷೇಕ್ ಶರ್ಮಾ ಉತ್ತಮ ಫಾರ್ಮ್ನಲ್ಲಿದ್ದಾರೆ ಮತ್ತು ಏಷ್ಯಾ ಕಪ್ನಾದ್ಯಂತ ಅದನ್ನು ಕಾಯ್ದುಕೊಂಡಿದ್ದಾರೆ. ಸೂರ್ಯ ತನ್ನ ಲಯವನ್ನು ಕಂಡುಕೊಂಡಾಗ, ಅದಕ್ಕೆ ತಕ್ಕಂತೆ ಜವಾಬ್ದಾರಿಯನ್ನು ಹೊರುತ್ತಾರೆ. ಟಿ20 ಕ್ರಿಕೆಟ್ನಲ್ಲಿ, ನಮ್ಮ ಗಮನವು ವೈಯಕ್ತಿಕ ರನ್ಗಳ ಮೇಲಿರುವುದರ ಬದಲಾಗಿ ನಾವು ಆಡಲು ಬಯಸುವ ಕ್ರಿಕೆಟ್ನ ಬ್ರ್ಯಾಂಡ್ನ ಮೇಲಿರುತ್ತದೆ. ನಮ್ಮ ಆಕ್ರಮಣಕಾರಿ ಶೈಲಿಯೊಂದಿಗೆ, ಬ್ಯಾಟ್ಸ್ಮನ್ಗಳು ಹೆಚ್ಚಾಗಿ ವಿಫಲರಾಗಬಹುದು. ಆದರೆ, ಅಂತಿಮವಾಗಿ ಕೇವಲ ರನ್ಗಳಿಗಿಂತ ಫಲಿತಾಂಶ ಮುಖ್ಯವಾಗಿರುತ್ತದೆ' ಎಂದರು.
'ಸೂರ್ಯ ಒಬ್ಬ ಉತ್ತಮ ಮನುಷ್ಯ. ಒಳ್ಳೆಯ ಮನುಷ್ಯರಿಂದ ಒಳ್ಳೆಯ ನಾಯಕರು ರೂಪುಗೊಳ್ಳುತ್ತಾರೆ. ಅವರು ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ, ಆಟದ ಬಗೆಗಿನ ನನ್ನ ತಿಳುವಳಿಕೆಯ ಆಧಾರದ ಮೇಲೆ ಅವರಿಗೆ ತಕ್ಕಮಟ್ಟಿಗೆ ಸಲಹೆ ನೀಡುವುದು ನನ್ನ ಜವಾಬ್ದಾರಿ ಮತ್ತು ಪಾತ್ರವಾಗಿದೆ. ಅಂತಿಮವಾಗಿ, ಇದು ಅವರ ತಂಡ' ಎಂದರು.
'ಅವರ ಮುಕ್ತ ಮನೋಭಾವದ ಪಾತ್ರವು T20 ಕ್ರಿಕೆಟ್ನ ಸಾರಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಇದು ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯ ಬಗ್ಗೆ. ನಿಮ್ಮ ಆಫ್-ಫೀಲ್ಡ್ ವ್ಯಕ್ತಿತ್ವವು ಮೈದಾನದಲ್ಲಿ ಮತ್ತು ಡ್ರೆಸ್ಸಿಂಗ್ ಕೋಣೆಯಲ್ಲಿ ಪ್ರತಿಫಲಿಸುತ್ತದೆ ಮತ್ತು ಸೂರ್ಯ ಕಳೆದ 1.5 ವರ್ಷಗಳಿಂದ ಈ ವಾತಾವರಣವನ್ನು ಅದ್ಭುತವಾಗಿ ಕಾಯ್ದುಕೊಂಡಿದ್ದಾರೆ' ಎಂದು ಗಂಭೀರ್ ಹೇಳಿದರು.
'ನಮ್ಮ ಮೊದಲ ಸಂಭಾಷಣೆಯಿಂದಲೇ ನಾವು ಸೋಲುವ ಭಯವಿಲ್ಲದ ತಂಡವಾಗಬೇಕೆಂದು ಒಪ್ಪಿಕೊಂಡೆವು. ನಾನು ಅತ್ಯಂತ ಯಶಸ್ವಿ ತರಬೇತುದಾರನಾಗುವ ಗುರಿಯನ್ನು ಹೊಂದಿಲ್ಲ; ನಾವು ಅತ್ಯಂತ ನಿರ್ಭೀತ ತಂಡವಾಗಬೇಕೆಂದು ನಾನು ಬಯಸುತ್ತೇನೆ. ಇಂತಹ ಸಮಯದಲ್ಲಿ ತಪ್ಪುಗಳನ್ನು ಮಾಡುವುದು ಸಹಜ. ಏಷ್ಯಾ ಕಪ್ ಫೈನಲ್ನಂತಹ ದೊಡ್ಡ ಪಂದ್ಯಗಳಲ್ಲಿಯೂ ಕೆಲವೊಮ್ಮೆ ಕ್ಯಾಚ್ ಬಿಡುವುದು, ಕೆಟ್ಟ ಶಾಟ್ ಆಡುವುದು ಅಥವಾ ಕಳಪೆ ಎಸೆತ ಎಸೆಯುವುದು ಸ್ವೀಕಾರಾರ್ಹ ಎಂದು ಆಟಗಾರರಿಗೆ ನಾನು ಹೇಳಿದ್ದೇನೆ. ಮನುಷ್ಯರು ತಪ್ಪುಗಳನ್ನು ಮಾಡುತ್ತಾರೆ. ಡ್ರೆಸ್ಸಿಂಗ್ ರೂಮ್ನಲ್ಲಿರುವವರ ಅಭಿಪ್ರಾಯಗಳು ಮಾತ್ರ ಮುಖ್ಯ' ಎಂದು ಮುಖ್ಯ ಕೋಚ್ ಹೇಳಿದರು.
'ಸೂರ್ಯ ಮತ್ತು ನಾನು ನಿರಂತರವಾಗಿ ಒಪ್ಪುತ್ತೇವೆ ಏನೆಂಗರೆ, ನಾವು ಎಂದಿಗೂ ತಪ್ಪುಗಳಿಗೆ ಹೆದರುವುದಿಲ್ಲ. ಆಟ ದೊಡ್ಡದಾದಷ್ಟೂ, ನಾವು ಹೆಚ್ಚು ನಿರ್ಭೀತ ಮತ್ತು ಆಕ್ರಮಣಕಾರಿಯಾಗಿರಬೇಕು. ಸಂಪ್ರದಾಯವಾದಿ ವಿಧಾನವು ಎದುರಾಳಿಗಳಿಗೆ ಮಾತ್ರ ಅನುಕೂಲವನ್ನು ನೀಡುತ್ತದೆ. ನಮ್ಮಲ್ಲಿರುವ ಪ್ರತಿಭೆಯೊಂದಿಗೆ, ನಾವು ನಿರ್ಭೀತವಾಗಿ ಆಡಿದರೆ, ನಾವು ಚೆನ್ನಾಗಿರುತ್ತೇವೆ' ಎಂದು ಗಂಭೀರ್ ಹೇಳಿದರು.
ಭಾರತವು ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಏಷ್ಯಾ ಕಪ್ ಗೆದ್ದಿತು.
Advertisement