

ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ವಜಾಗೊಳಿಸಿದರೆ ಗಂಭೀರ 'ಪರಿಣಾಮಗಳನ್ನು' ಎದುರಿಸಬೇಕಾಗುತ್ತದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಭಾರತದ ಮಾಜಿ ವೇಗಿ ಮುನಾಫ್ ಪಟೇಲ್ ಎಚ್ಚರಿಸಿದ್ದಾರೆ. 2024ರ ಟಿ20 ವಿಶ್ವಕಪ್ ಗೆಲುವಿನ ನಂತರ ರಾಹುಲ್ ದ್ರಾವಿಡ್ ಬದಲಿಗೆ ಭಾರತದ ಮಾಜಿ ಆರಂಭಿಕ ಆಟಗಾರ ಮುಖ್ಯ ಕೋಚ್ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡರು. ಸುಮಾರು ಎರಡು ವರ್ಷಗಳ ಅಧಿಕಾರಾವಧಿಯಲ್ಲಿ, ಗಂಭೀರ್ ಮಿಶ್ರ ಫಲಿತಾಂಶಗಳನ್ನು ನೀಡಿದ್ದಾರೆ. ಜೊತೆಗೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಟೆಸ್ಟ್ ಕ್ರಿಕೆಟ್ ನಿವೃತ್ತಿಗೆ ಒತ್ತಾಯಿಸಿದ್ದಾರೆ ಎಂಬ ಆರೋಪವೂ ಇದೆ.
ಗಂಭೀರ್ ತಮ್ಮ ಅವಧಿಯಲ್ಲಿ ಈಗಾಗಲೇ ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಸೇರಿದಂತೆ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ, ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡದ ಹೋರಾಟದಿಂದಾಗಿ ಅವರನ್ನು ಕೋಚ್ ಹುದ್ದೆಯಿಂದ ವಜಾಗೊಳಿಸಬೇಕೆಂಬ ಕೂಗು ಕೇಳಿಬಂದಿದೆ.
ಆದಾಗ್ಯೂ, 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಮುನಾಫ್ ಪಟೇಲ್, ಹೆಚ್ಚುತ್ತಿರುವ ಟೀಕೆಗಳ ನಡುವೆಯೂ ತಮ್ಮ ತಂಡದ ಮಾಜಿ ಸಹ ಆಟಗಾರನನ್ನು ಬೆಂಬಲಿಸಿದ್ದಾರೆ. ಗಂಭೀರ್ ಅವರನ್ನು ತೆಗೆದುಹಾಕಿದರೆ ಪರಿಸ್ಥಿತಿ ಕೆಟ್ಟದಾಗಬಹುದು ಎಂದು ಎಚ್ಚರಿಸಿದ್ದಾರೆ.
'ಇದನ್ನು ನೆನಪಿಡಿ, ಗೌತಮ್ ಗಂಭೀರ್ ಅವರಂತಹ ಮುಖ್ಯ ತರಬೇತುದಾರರನ್ನು ತೆಗೆದುಹಾಕಿದರೆ, ಆಟಗಾರರನ್ನು ನಿಭಾಯಿಸುವುದು ತುಂಬಾ ಕಷ್ಟಕರವಾಗುತ್ತದೆ. ಅವರು ಜೆನ್ಯೂನ್ ವ್ಯಕ್ತಿ, ಅವರು ಸತ್ಯವನ್ನು ನೇರವಾಗಿ ಹೇಳುತ್ತಾರೆ ಮತ್ತು ಅನೇಕ ಜನರು ಅದನ್ನು ಇಷ್ಟಪಡುವುದಿಲ್ಲ. ವಿಷಯಗಳು ಹಳಿ ತಪ್ಪಿದರೆ, ಆ ಆಟಗಾರನನ್ನು ಕೈಬಿಡುವ ಧೈರ್ಯ ಅವರಲ್ಲಿದೆ ಎಂದು ಎಲ್ಲರಿಗೂ ತಿಳಿದಿದೆ' ಎಂದು ಮುನಾಫ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದರು.
ಗಂಭೀರ್ ಅವರ 'ಸತ್ಯವನ್ನು ಮಾತನಾಡುವ' ಒಲವು ಸಹಜವಾಗಿಯೇ ಕ್ರಿಕೆಟ್ ವಲಯದಲ್ಲಿ ಅವರಿಗೆ ಶತ್ರುಗಳನ್ನು ಹುಟ್ಟುಹಾಕಿದೆ ಎಂದು ಮಾಜಿ ವೇಗಿ ಹೇಳಿದ್ದಾರೆ.
'ಮಾನವ-ನಿರ್ವಹಣೆ ಅತ್ಯಂತ ಮುಖ್ಯವಾದ ವಿಷಯ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಅವರಿಗೆ 'ಇಲ್ಲ' (ಅವರನ್ನು ಕೈಬಿಡುವುದು) ಎಂದು ಹೇಳುವುದು ಅತ್ಯಂತ ಕಷ್ಟಕರವಾಗಿದೆ. ಒಬ್ಬ ತರಬೇತುದಾರನಾಗಿ, ಗೌತಮ್ ಗಂಭೀರ್ ಅವರು ಆಟಗಾರರನ್ನು ಅಸಮಾಧಾನಗೊಳಿಸಬಹುದಾದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ' ಎಂದು ಅವರು ಹೇಳಿದರು.
ಈಮಧ್ಯೆ, ಮುನಾಫ್ ಸದ್ಯ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಿಸಿ ಸದ್ಯ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
Advertisement