ದುಲೀಪ್ ಟ್ರೋಫಿ ಫೈನಲ್ ಪಂದ್ಯ: ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರ; ಇದೇ ಕಾರಣ!

ಇದೇ ವೇಳೆ ಆರಂಭಿಕ ಹಂತದ ಪಂದ್ಯಗಳು ನಿಗದಿಯಂತೆ ಆಗಸ್ಟ್ 23 ರಿಂದ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿಯೇ ನಡೆಯಲಿವೆ.
Secretary Devajit Saikia
ದೇವಜಿತ್ ಸೈಕಿಯಾ
Updated on

ಬೆಂಗಳೂರು: ಪ್ರಮುಖ ದೇಶೀಯ ಟೂರ್ನಿಯಾದ ದುಲೀಪ್ ಟ್ರೋಫಿಯ ಫೈನಲ್ ಪಂದ್ಯವನ್ನು ಇಲ್ಲಿನ 'ಸೆಂಟರ್ ಆಫ್ ಎಕ್ಸಲೆನ್ಸ್' (CoE) ನಿಂದ ಎಂ.ಎ. ಚಿದಂಬರಂ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದ್ದು, ಮುಂದಿನ ತಿಂಗಳು ಚೆನ್ನೈನಲ್ಲಿ ಈ ಪಂದ್ಯ ನಡೆಯಲಿದೆ.

ಸೆಪ್ಟೆಂಬರ್ 6 ರಿಂದ 10 ರವರೆಗೆ ನಡೆಯಲಿರುವ ಈ ಪಂದ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಬಿಸಿಸಿಐ (BCCI) ಈ ನಿರ್ಧಾರವನ್ನು ಕೈಗೊಂಡಿದೆ. ಇದೇ ವೇಳೆ ಆರಂಭಿಕ ಹಂತದ ಪಂದ್ಯಗಳು ನಿಗದಿಯಂತೆ ಆಗಸ್ಟ್ 23 ರಿಂದ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿಯೇ ನಡೆಯಲಿವೆ.

"2026-27ರ ಸಾಲಿನ ದುಲೀಪ್ ಟ್ರೋಫಿ ಫೈನಲ್ ಪಂದ್ಯವನ್ನು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಿಂದ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಸೆಪ್ಟೆಂಬರ್ 6 ರಿಂದ 10 ರವರೆಗೆ ನಡೆಯಲಿರುವ ಈ ಪ್ರಮುಖ ದೇಶೀಯ ಪಂದ್ಯವನ್ನು ವೀಕ್ಷಕರು ಕ್ರೀಡಾಂಗಣದಲ್ಲಿಯೇ ನೇರವಾಗಿ ವೀಕ್ಷಿಸಲು ಅವಕಾಶ ಕಲ್ಪಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ದುಲೀಪ್ ಟ್ರೋಫಿಯ ಉಳಿದ ಪಂದ್ಯಗಳು ನಿಗದಿಯಂತೆ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿಯೇ ಮುಂದುವರಿಯಲಿವೆ. ಆಗಸ್ಟ್ 23 ರಂದು ಈಸ್ಟ್ ಝೋನ್ (East Zone) ತಂಡವು ನಾರ್ತ್-ಈಸ್ಟ್ ಝೋನ್ (Northeast Zone) ವಿರುದ್ಧ ಮತ್ತು ನಾರ್ತ್ ಝೋನ್ (North Zone) ತಂಡವು ವೆಸ್ಟ್ ಝೋನ್ (West Zone) ವಿರುದ್ಧ ಸೆಣಸುವ ಮೂಲಕ ಪಂದ್ಯಾವಳಿ ನಡೆಯಲಿದೆ ಎಂದು ಅದರಲ್ಲಿ ವಿವರಿಸಲಾಗಿದೆ.

2026-27ರ ಸಾಲಿನ ದುಲೀಪ್ ಟ್ರೋಫಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸುತ್ತಿವೆ. ಆಗಸ್ಟ್ 23 ರಿಂದ ಸೆಪ್ಟೆಂಬರ್ 10 ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಸೆಂಟ್ರಲ್ ಝೋನ್, ಸೌತ್ ಝೋನ್, ಈಸ್ಟ್ ಝೋನ್, ವೆಸ್ಟ್ ಝೋನ್, ನಾರ್ತ್ ಝೋನ್ ಮತ್ತು ನಾರ್ತ್-ಈಸ್ಟ್ ಝೋನ್ ಎಂಬ ಆರು ಪ್ರಾದೇಶಿಕ ತಂಡಗಳು ಸ್ಪರ್ಧಿಸುತ್ತಿವೆ.

ಬಿಸಿಸಿಐ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು, ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಪಂದ್ಯ ವೀಕ್ಷಿಸಬಹುದಾದ ಪ್ರೇಕ್ಷಕರ ಸಂಖ್ಯೆಯ ಮೇಲೆ ನಿರ್ಬಂಧಗಳಿರುವುದರಿಂದಲೇ ಫೈನಲ್ ಪಂದ್ಯವನ್ನು ಅಲ್ಲಿಂದ ಚೆನ್ನೈಗೆ ಸ್ಥಳಾಂತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದುಲೀಪ್ ಟ್ರೋಫಿಯು ನಮ್ಮ ಕ್ರೀಡಾ ವೇಳಾಪಟ್ಟಿಯಲ್ಲಿನ ಒಂದು ಪ್ರಮುಖ ಪ್ರಥಮ ದರ್ಜೆ ಪಂದ್ಯಾವಳಿಯಾಗಿದ್ದು, ಇದು ಶ್ರೀಮಂತ ಪರಂಪರೆಯನ್ನು ಹೊಂದಿದೆ. ಇಲ್ಲಿನ ಕ್ರಿಕೆಟ್‌ನ ಗುಣಮಟ್ಟ ಯಾವಾಗಲೂ ಅತ್ಯುತ್ತಮವಾಗಿರುತ್ತದೆ ಮತ್ತು ಅಭಿಮಾನಿಗಳು ಕ್ರೀಡಾಂಗಣದಲ್ಲಿಯೇ ಫೈನಲ್ ಪಂದ್ಯವನ್ನು ನೇರವಾಗಿ ವೀಕ್ಷಿಸುವ ಅವಕಾಶವನ್ನು ಪಡೆಯಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದರು.

Secretary Devajit Saikia
ಕುಲದೀಪ್ ಯಾದವ್ ಮೇಲೆ ಗಿಲ್‌ಗೆ ಸಂಪೂರ್ಣ ನಂಬಿಕೆ ಇಲ್ವಾ? ಗಾಲೆ ಟೆಸ್ಟ್ ನಲ್ಲಿ ಹೆಚ್ಚಿನ ಓವರ್ ನೀಡದ ನಾಯಕನ ವಿರುದ್ಧ ಕೈಫ್ ಕಿಡಿ!

ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಪ್ರೇಕ್ಷಕರ ಹಾಜರಾತಿಗೆ ಸಂಬಂಧಿಸಿದಂತೆ ಕೆಲವು ನಿರ್ಬಂಧಗಳಿವೆ. ಹೀಗಾಗಿ, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮತ್ತು ಈ ಕಾರ್ಯಕ್ರಮದ ಭಾಗವಾಗಲು ಸಾಧ್ಯವಾಗುವಂತಹ ಸ್ಥಳಕ್ಕೆ ಫೈನಲ್ ಪಂದ್ಯವನ್ನು ಸ್ಥಳಾಂತರಿಸುವುದು ಸೂಕ್ತವೆಂದು ನಮಗೆ ಅನ್ನಿಸಿತು ಎಂದು ಸೈಕಿಯಾ ಹೇಳಿದರು. ದುಲೀಪ್ ಟ್ರೋಫಿಯ ಎಲ್ಲಾ ಪಂದ್ಯಗಳು ನೇರ ಪ್ರಸಾರವಾಗಲಿವೆ ಮತ್ತು ಒಂದು ಕ್ವಾರ್ಟರ್-ಫೈನಲ್, ಒಂದು ಸೆಮಿ-ಫೈನಲ್ ಹಾಗೂ ಫೈನಲ್ ಪಂದ್ಯಗಳು ಟಿವಿಯಲ್ಲೂ ಪ್ರಸಾರವಾಗಲಿವೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com