ಆಧುನಿಕ ಕಾಲದ ಬ್ಯಾಟರ್ಗಳು 'ರೆಡ್-ಬಾಲ್' ಕ್ರಿಕೆಟ್ಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಕಂಡು ತಾನು ಆಶ್ಚರ್ಯಚಕಿತನಾಗಿರುವುದಾಗಿ ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಐಪಿಎಲ್ ಯುಗದ ಆಟಗಾರರು ಟಿ20 ಮಾದರಿಯಿಂದ ಟೆಸ್ಟ್ ಕ್ರಿಕೆಟ್ಗೆ ಯಶಸ್ವಿಯಾಗಿ ಹೊಂದಿಕೊಂಡಿರುವುದು ಒಂದು ಒಗಟಿನಂತಿದೆ ಮತ್ತು ಇದು ನಿಜಕ್ಕೂ ಪ್ರಶಂಸನೀಯ ಸಾಧನೆ ಎಂದು ಬಣ್ಣಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಭಾಗವಾಗಿ ಈ ವಾರದ ಆರಂಭದಲ್ಲಿ ನಡೆದ ಗಾಲೇ ಟೆಸ್ಟ್ನಲ್ಲಿ ಭಾರತದ ಗೆಲುವಿನಲ್ಲಿ ಆರ್ಸಿಬಿ ಆಟಗಾರ ದೇವದತ್ ಪಡಿಕ್ಕಲ್ ಮತ್ತು ಮಾನವ್ ಸುತಾರ್ ಅವರಂತಹ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಆಧುನಿಕ ಕ್ರಿಕೆಟಿಗರ ಬದಲಾವಣೆಯನ್ನು, ಪಾಪ್ ಗಾಯಕರು ಶಾಸ್ತ್ರೀಯ ಸಂಗೀತ ಹಾಡಲು ಪ್ರಯತ್ನಿಸುವಂತಿದೆ ಎಂದರು.
'ಆಧುನಿಕ ಪಾಪ್ ಗಾಯಕರಿಗೆ ಶಾಸ್ತ್ರೀಯ ಸಂಗೀತ ಅಥವಾ ರಾಗಗಳನ್ನು ಹಾಡಲು ಹೇಳಿದರೆ ಅದು ಬಹಳ ಕಷ್ಟಕರವಾಗಿರುತ್ತದೆ. ಆದರೆ, ಇವರು ಅದನ್ನು ಮಾಡುತ್ತಿದ್ದಾರೆ. ಐಪಿಎಲ್ ಮತ್ತು ಟಿ-20 ಯುಗದ ಆಟಗಾರರು ಇಷ್ಟೊಂದು ಉತ್ತಮವಾಗಿ ಟೆಸ್ಟ್ ಕ್ರಿಕೆಟ್ ಆಡುವುದು ನನಗೆ ಒಂದು ಒಗಟಿನಂತಿದೆ; ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅವರು ಇದನ್ನು ಸಾಧಿಸುತ್ತಿದ್ದಾರೆ' ಎಂದು ಮಂಜ್ರೇಕರ್ ದೂರದರ್ಶನದಲ್ಲಿ ಹೇಳಿದರು.
'ಟಿ20 ಮತ್ತು ರೆಡ್-ಬಾಲ್ ಕ್ರಿಕೆಟ್ನ ಬೇಡಿಕೆಗಳು ತೀರಾ ಭಿನ್ನವಾಗಿರುವುದರಿಂದ, ಇಂತಹ ಹೊಂದಿಕೊಳ್ಳುವಿಕೆಯು ಶ್ಲಾಘನೀಯ. ವಿಶೇಷವಾಗಿ ಬ್ಯಾಟಿಂಗ್ ವಿಷಯದಲ್ಲಿ ಇದು ಹೆಚ್ಚು ಮುಖ್ಯ; ಏಕೆಂದರೆ ಟಿ20 ಬ್ಯಾಟಿಂಗ್ ಮತ್ತು ಟೆಸ್ಟ್ ಬ್ಯಾಟಿಂಗ್ ನಡುವೆ ಸಾಕಷ್ಟು ವ್ಯತ್ಯಾಸವಿದೆ' ಎಂದು ಅವರು ಹೇಳಿದರು.
ಗಾಲೆಯಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಪಡಿಕ್ಕಲ್, ಎರಡು ಇನಿಂಗ್ಸ್ಗಳಲ್ಲಿ ಶತಕ ಸಹಿತ ಒಟ್ಟು 211 ರನ್ಗಳನ್ನು ಕಲೆಹಾಕಿದರು.
ಭಾರತದ ನಿಯಮಿತ ಮೂರನೇ ಕ್ರಮಾಂಕದ ಬ್ಯಾಟರ್ ಸಾಯಿ ಸುದರ್ಶನ್ ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದರಿಂದ ಆಡುವ ಬಳಗಕ್ಕೆ ಸೇರ್ಪಡೆಗೊಂಡ ಪಡಿಕ್ಕಲ್, ಮೊದಲ ಇನಿಂಗ್ಸ್ನಲ್ಲಿ ತಮ್ಮ ವೃತ್ತಿಜೀವನದ ಶ್ರೇಷ್ಠ ಎನಿಸಿದ 167 ರನ್ಗಳನ್ನು ಸಿಡಿಸಿದರು; ಇದು ಪಂದ್ಯದ ಮೇಲೆ ಭಾರತದ ಸಂಪೂರ್ಣ ಹಿಡಿತವನ್ನು ಖಚಿತಪಡಿಸಿತು. ಕರ್ನಾಟಕದ ಬ್ಯಾಟರ್ ಎರಡನೇ ಇನಿಂಗ್ಸ್ನಲ್ಲಿ ಗಳಿಸಿದ ನಿರ್ಣಾಯಕ 44 ರನ್ಗಳು, ಶ್ರೀಲಂಕಾ ವಿರುದ್ಧ ಭಾರತವು ದೊಡ್ಡ ಮುನ್ನಡೆಯನ್ನು ಸಾಧಿಸಲು ನೆರವಾದವು.
ಪಡಿಕ್ಕಲ್ ತಮ್ಮ ಬ್ಯಾಟಿಂಗ್ ಮೂಲಕ ಭಾರತದ ಗೆಲುವಿಗೆ ಭದ್ರ ಬುನಾದಿ ಹಾಕಿದರೆ, ಮಾನವ್ ಸುತಾರ್ ತಮ್ಮ ಬೌಲಿಂಗ್ ವೇಗದಲ್ಲಿನ ಸೂಕ್ಷ್ಮ ಬದಲಾವಣೆಗಳು ಮತ್ತು ವೈವಿಧ್ಯಮಯ ಎಸೆತಗಳ ಮೂಲಕ ಶ್ರೀಲಂಕಾವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದರು.
ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಅವರಂತಹ ದಿಗ್ಗಜ ಸ್ಪಿನ್ನರ್ಗಳನ್ನೊಳಗೊಂಡ ಬಲಿಷ್ಠ ಸ್ಪಿನ್ ದಾಳಿಯ ನಡುವೆಯೂ ಪಂದ್ಯದಲ್ಲಿ ಅವರು 4-76 ಮತ್ತು 6-55 ಅಂಕಿಅಂಶಗಳೊಂದಿ ಉತ್ತಮ ಪ್ರದರ್ಶನ ನೀಡಿದರು.