

ಬುಲವಾಯೋ: ಜಾಗತಿಕ ಕ್ರಿಕೆಟ್ ನಲ್ಲಿ ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ತಂಡ ವಿವಿಧ ಕಾರಣಗಳಿಂದಾಗಿ ನಿತ್ಯ ಸುದ್ದಿಗೆ ಗ್ರಾಸವಾಗುತ್ತಿದ್ದು, ಈ ಬಾರಿ ತನ್ನ ಆಟದಿಂದಾಗಿ ಮತ್ತೆ ನಗೆಪಾಟಲಿಗೆ ತುತ್ತಾಗಿದೆ.
ಈ ಹಿಂದೆ ಐಸಿಸಿ ಟಿ20 ವಿಶ್ವಕಪ್ ವಿಚಾರದಲ್ಲಿ ಬಾಂಗ್ಲಾದೇಶವನ್ನು ಎತ್ತಿಕಟ್ಟಿದ್ದ ಪಾಕಿಸ್ತಾನ ಬಳಿಕ ತಾನೂ ಕೂಡ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಗೊಂದಲದ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿತ್ತು. ಆದರೆ ಐಸಿಸಿಯ ನಿರ್ಬಂಧದ ಭಯದಿಂದಾಗಿ ಕೊನೆಗೂ ಪಾಕಿಸ್ತಾನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ತಂಡ ಪ್ರಕಟಿಸಿತ್ತು.
ಈ ಎಲ್ಲ ಬೆಳವಣಿಗಗಳ ನಡುವೆ ಪಾಕಿಸ್ತಾನ ಇದೀಗ ಮತ್ತೊಂದು ವಿಚಾರವಾಗಿ ವ್ಯಾಪಕ ಟ್ರೋಲ್ ಗೆ ಗುರಿಯಾಗುತ್ತಿದೆ. ಅದೂ ಕೂಡ ತನ್ನ ಫೀಲ್ಡಿಂಗ್ ಸಾಮರ್ಥ್ಯವನ್ನು ತಾನೇ ಬಟಾಬಯಲು ಮಾಡಿಕೊಂಡು ಪಾಕಿಸ್ತಾನ ಮುಜುಗರಕ್ಕೀಡಾಗಿದೆ.
ಜಿಂಬಾಬ್ವೆಯ ಬುಲವಾಯೋದಲ್ಲಿ ಇಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಒಂದೇ ಎಸೆತದಲ್ಲಿ ಎದುರಾಳಿ ಆಟಗಾರನಿಗೆ 2 ಬಾರಿ ಜೀವದಾನ ನೀಡುವ ಮೂಲಕ ಪಾಕಿಸ್ತಾನ ನಗೆಪಾಟಲಿಗೀಡಾಗಿದೆ.
3 ಬಾರಿ ಜೀವದಾನ
ಈ ಪಂದ್ಯದಲ್ಲಿ ಭಾರತ ತಂಡದ ವೈಭವ್ ಸೂರ್ಯವಂಶಿ ಒಂದೇ ಎಸೆತದಲ್ಲಿ ಎರಡು ಬಾರಿ ಜೀವದಾನ ಪಡೆದರು. ಆಕ್ರಮಣಕಾರಿ ಆಟಕ್ಕೆ ಮುಂದಾದ ವೈಭವ್ ಸೂರ್ಯವಂಶಿ ನಾಲ್ಕನೇ ಓವರ್ನಲ್ಲಿ ಎರಡು ಬೌಂಡರಿ ನಂತರ ಏಳನೇ ಓವರ್ನಲ್ಲಿ ಸತತ ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು.
ಆದರೆ 8ನೇ ಓವರ್ನಲ್ಲಿ ಪಾಕಿಸ್ತಾನದ ಎಡಗೈ ವೇಗದ ಬೌಲರ್ ಮೊಹಮ್ಮದ್ ಸಯಾಮ್ ಎಸೆದ ಓವರ್ನಲ್ಲಿ ವೈಭವ್ ಸೂರ್ಯ ಸತತ ಎರಡು ಎಸೆತಗಳಲ್ಲಿ ಮೂರು ಬಾರಿ ಪಾಕಿಸ್ತಾನಕ್ಕೆ ವಿಕೆಟ್ ಪಡೆಯುವ ಅವಕಾಶ ನೀಡಿದರು.
ಓವರ್ನ ಮೂರನೇ ಎಸೆತದಲ್ಲಿ, ವೈಭವ್ ಪುಲ್ ಮಾಡಲು ಪ್ರಯತ್ನಿಸಿದರು, ಆದರೆ ಚೆಂಡು ಮಿಡ್ವಿಕೆಟ್ನಲ್ಲಿ ಗಾಳಿಯಲ್ಲಿ ಎತ್ತರಕ್ಕೆ ಹಾರಿತು. ಈ ವೇಳೆ ಫೀಲ್ಡರ್ ಹುಜೈಫಾ ಅಹ್ಸಾನ್ ಸುಲಭವಾದ ಕ್ಯಾಚ್ ಅನ್ನು ಕೈಬಿಟ್ಟರು. ಆದಾಗ್ಯೂ, ಈ ಸಮಯದಲ್ಲಿ, ಇಬ್ಬರು ಭಾರತೀಯ ಬ್ಯಾಟ್ಸ್ಮನ್ಗಳ ನಡುವೆ ರನ್ ಓಡುವ ಬಗ್ಗೆ ಗೊಂದಲ ಉಂಟಾದ್ದರಿಂದ ವೈಭವ್ ರನೌಟ್ಗೆ ಬಲಿಯಾಗಬೇಕಿತ್ತು. ಆದರೆ ಕ್ಯಾಚ್ ಬಿಟ್ಟ ಫೀಲ್ಡರ್ ಅಹ್ಸಾನ್ ಚೆಂಡನ್ನು ವಿಕೆಟ್ನತ್ತ ಎಸೆದರು. ಅಲ್ಲಿ ಕೀಪರ್ ಇರದ ಕಾರಣ ರನೌಟ್ನಿಂದಲೂ ಪಾರಾದರು.
ನಗೆಪಾಟಲಿಗೀಡಾದ ಪಾಕ್ ಫೀಲ್ಡಿಂಗ್!
ಇನ್ನು ಪಾಕಿಸ್ತಾನದ ಈ ಕಳಪೆ ಫೀಲ್ಡಿಂಗ್ ವ್ಯಾಪಕ ಟ್ರೋಲ್ ಗೆ ಗುರಿಯಾಗಿದೆ. ಒಂದೇ ಎಸೆತದಲ್ಲಿ ಎರಡು ಬಾರಿ ವಿಕೆಟ್ ಪಡೆಯುವ ಅವಕಾಶ ಕೈ ಚೆಲ್ಲಿದ ಪಾಕಿಸ್ತಾನ ಆಟಗಾರರನ್ನು ನೋಡಿ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಹಾಸ್ಯ ಮಾಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಜೀವದಾನಗಳೂ ವಿಫಲ
ಒಂದೇ ಚೆಂಡಿನಲ್ಲಿ ಎರಡು ಬಾರಿ ಔಟ್ ಆಗುವುದನ್ನು ತಪ್ಪಿಸಿಕೊಂಡ ನಂತರ ವೈಭವ್ ಮತ್ತು ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ ಮುಂದಿನ ಎಸೆತದಲ್ಲಿಯೇ ವೈಭವ್ ಮತ್ತೆ ಅದೇ ಹೊಡೆತವನ್ನು ಆಡಲು ಯತ್ನಿಸಿ ವಿಕೆಟ್ ಕೀಪರ್ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಮೂರು ಜೀವದಾನ ಸಿಕ್ಕರೂ ಅದನ್ನು ಸದುಪಯೋಗಪಡಿಸಿಕೊಳ್ಳಲಾಗದೆ 30 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
Advertisement