

ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಪಂದ್ಯದ ನಂತರ, ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್ 2026 ರಲ್ಲಿ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ಸ್ಟಾರ್ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರೂಪ್ ಹಂತದಲ್ಲಿ, ಅವರು ಮೂರು ಬಾರಿ ಶೂನ್ಯಕ್ಕೆ ಔಟಾದರು. ಆದರೆ, ಅಹಮದಾಬಾದ್ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಅಭಿಷೇಕ್ ಉತ್ತಮ ಆರಂಭ ಕಂಡುಕೊಂಡರಾದರೂ ಅದನ್ನು ಉತ್ತಮ ಇನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಐದನೇ ಓವರ್ನಲ್ಲಿ ಮಾರ್ಕೊ ಜಾನ್ಸೆನ್ಗೆ ತಮ್ಮ ವಿಕೆಟ್ ಅನ್ನು ಉಡುಗೊರೆಯಾಗಿ ನೀಡಿದರು. ಜಾನ್ಸೆನ್ ಅವರ ನಕಲ್ಬಾಲ್ಗೆ ಅಭಿಷೇಕ್ ಅವರ ಇನಿಂಗ್ಸ್ 12 ಎಸೆತಗಳಲ್ಲಿ ಕೇವಲ 15 ರನ್ಗಳಿಗೆ ಕೊನೆಗೊಂಡಿತು.
ಅಭಿಷೇಕ್ ಔಟಾದ ಬಗ್ಗೆ ವಿಶ್ಲೇಷಿಸುತ್ತಾ ಸುನೀಲ್ ಗವಾಸ್ಕರ್, ಅಭಿಷೇಕ್ ಅವರ ತೋಳುಗಳನ್ನು ಮುಕ್ತಗೊಳಿಸಲು ಅವಕಾಶ ನೀಡದ ದಕ್ಷಿಣ ಆಫ್ರಿಕಾದ ಬೌಲರ್ಗಳನ್ನು ಶ್ಲಾಘಿಸಿದರು. ನಿರ್ದಿಷ್ಟವಾಗಿ ಕಗಿಸೊ ರಬಾಡ ಅವರ ಬೌಲಿಂಗ್ ಕೌಶಲ್ಯವನ್ನು ಎತ್ತಿ ತೋರಿಸಿದರು.
'ಈಗ ಆ ನಿರರ್ಗಳತೆ ಇಲ್ಲ. ನೆಟ್ಸ್ನಲ್ಲಿ, ನೀವು ಮೊದಲ ಎಸೆತದಲ್ಲೇ ಔಟಾದರೂ ಮುಂದಿನ ಚೆಂಡನ್ನು ಎದುರಿಸಬೇಕಾಗುತ್ತದೆ ಎಂದು ನಿಮಗೆ ತಿಳಿದಿದೆ. ಆದರೆ ಪಂದ್ಯದಲ್ಲಿ, ಇದು ಸಂಪೂರ್ಣ ವಿಭಿನ್ನ ಕಥೆ. ಆ ಒತ್ತಡ ನಿಮ್ಮನ್ನು ಬಹುತೇಕ ಫ್ರೀಜ್ ಮಾಡುತ್ತದೆ ಮತ್ತು ದೊಡ್ಡ ಹೊಡೆತಕ್ಕಾಗಿ ಗುರಿಯಿಟ್ಟುಕೊಳ್ಳುವಾಗ ತೋಳುಗಳ ಮುಕ್ತ ಚಲನೆಯನ್ನು ನಿರ್ಬಂಧಿಸುತ್ತದೆ. ಅವರು ಅಲ್ಲಿ ಸ್ವಲ್ಪ ಸಿಲುಕಿಕೊಂಡರು ಮತ್ತು ದಕ್ಷಿಣ ಆಫ್ರಿಕಾ ಬಹಳ ಜಾಣತನದಿಂದ ಬೌಲಿಂಗ್ ಮಾಡಿತು. ಅವರು ಸ್ಥಳಾವಕಾಶ ಮಾಡಿಕೊಳ್ಳುತ್ತಾರೆ ಮತ್ತು ಆಫ್-ಸೈಡ್ ಮೂಲಕ ಆಡಲು ಇಷ್ಟಪಡುತ್ತಾರೆ ಎಂಬುದು ಅವರಿಗೆ ತಿಳಿದಿದೆ. ಆದ್ದರಿಂದ ರಬಾಡ ಅವರನ್ನು ನೋಡಿ, ಅವರು ಸಿಕ್ಸರ್ ಬಿಟ್ಟುಕೊಟ್ಟ ನಂತರವೂ ನಿರಂತರವಾಗಿ ಪ್ಯಾಡ್ಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದರು' ಎಂದು ಗವಾಸ್ಕರ್ ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೇಳಿದರು.
ಈಮಧ್ಯೆ, ಭಾನುವಾರ ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಮೊದಲ ಸೋಲುಣಿಸಿತು ಮತ್ತು ಪಂದ್ಯಾವಳಿಯಲ್ಲಿ ತಮ್ಮ ಅಜೇಯ ಓಟವನ್ನು ಮುಂದುವರಿಸಿತು. 76 ರನ್ಗಳ ಅಂತರದ ಈ ಸೋಲು ಈಗ ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ಭಾರತದ ಅತ್ಯಂತ ಹೀನಾಯ ಸೋಲಾಗಿದೆ.
188 ರನ್ಗಳ ಗುರಿಯನ್ನು ಬೆನ್ನಟ್ಟಿದ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು 18.5 ಓವರ್ಗಳಲ್ಲಿ ಕೇವಲ 111 ರನ್ಗಳಿಗೆ ಆಲೌಟ್ ಆಯಿತು. ಈ ಹೀನಾಯ ಸೋಲಿನ ಬಗ್ಗೆ ಗವಾಸ್ಕರ್ ಭಾರತೀಯ ಬ್ಯಾಟ್ಸ್ಮನ್ಗಳನ್ನು ಟೀಕಿಸಿದರು. ಹೆಚ್ಚಿನ ಶಿಸ್ತಿನ ಅಗತ್ಯವಿರುವ ಮೇಲ್ಮೈಯಲ್ಲಿ ಅವರ ಕಳಪೆ ಶಾಟ್ ಆಯ್ಕೆಯನ್ನು ಟೀಕಿಸಿದರು.
'ಬ್ಯಾಟ್ಸ್ಮನ್ಗಳು ಕಳಪೆ ಶಾಟ್ ಆಯ್ಕೆ ಮಾಡಿದರು. ಡೇವಿಡ್ ಮಿಲ್ಲರ್ ಮತ್ತು ಡೆವಾಲ್ಡ್ ಬ್ರೆವಿಸ್ ಅವರನ್ನು ನೋಡಿ; ಚೆಂಡು ಸುಲಭವಾಗಿ ಬ್ಯಾಟ್ಗೆ ಬರದ ಪಿಚ್ನಲ್ಲಿ, ಅವರು ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಸ್ಕೋರ್ ಮಾಡಿದರು. ಆದಾಗ್ಯೂ, ಭಾರತೀಯ ಬ್ಯಾಟ್ಸ್ಮನ್ಗಳು ಅದೇ ರೀತಿ ಮಾಡಲು ವಿಫಲರಾದರು' ಎಂದು ಹೇಳಿದರು.
Advertisement