'ವೈಭವ್ ಸೂರ್ಯವಂಶಿ ವಿರುದ್ಧ ಆಡುವುದು ವಿಚಿತ್ರವೆನಿಸುತ್ತದೆ': ಇಂಗ್ಲೆಂಡ್‌ನ ಅತ್ಯಂತ ಕಿರಿಯ ಆಟಗಾರ ಜೇಕಬ್ ಬೆಥೆಲ್

ಭಾರತ ನೀಡಿದ್ದ 191 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ, ಬೆಥೆಲ್ ಸಂಯಮದ ಹಾಗೂ ಸ್ಫೋಟಕ ಆಟದ ಮೂಲಕ ಅಜೇಯ 76 ರನ್ ಗಳಿಸಿ ಇಂಗ್ಲೆಂಡ್‌ಗೆ ನಾಲ್ಕು ವಿಕೆಟ್‌ಗಳ ಜಯ ತಂದುಕೊಟ್ಟರು.
 Jacob Bethell
ಜೇಕಬ್ ಬೆಥೆಲ್
Updated on

ಶನಿವಾರ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಕೇವಲ 15 ವರ್ಷ 99 ದಿನಗಳ ವಯಸ್ಸಿನಲ್ಲಿ. ಬಿಹಾರದ ಸಮಸ್ತಿಪುರದ ಈ ಅದ್ಭುತ ಬ್ಯಾಟ್ಸ್‌ಮನ್ ಭಾರತದ ಅತ್ಯಂತ ಕಿರಿಯ ಅಂತಾರಾಷ್ಟ್ರೀಯ ಚೊಚ್ಚಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಸುಮಾರು 37 ವರ್ಷಗಳ ಕಾಲ ಹೊಂದಿದ್ದ ದೀರ್ಘಕಾಲೀನ ದಾಖಲೆಯನ್ನು ಮುರಿದರು. ಸೂರ್ಯವಂಶಿ 10 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿದ್ದರೂ, ಅವರ ಇನಿಂಗ್ಸ್‌ನಲ್ಲಿ ಎರಡು ಅಗಾಧ ಸಿಕ್ಸರ್‌ಗಳು ಇದ್ದವು. ಅದು ಅವರ ನಿರ್ಭೀತ ವಿಧಾನ ಮತ್ತು ಆಕ್ರಮಣಕಾರಿ ಇಂಟೆಂಟ್ ಅನ್ನು ಎತ್ತಿ ತೋರಿಸಿತು. ಆದಾಗ್ಯೂ, ಯುವ ಬ್ಯಾಟ್ಸ್‌ಮನ್ ಚೊಚ್ಚಲ ಪಂದ್ಯವು ನಿರಾಶೆಯಲ್ಲಿ ಕೊನೆಗೊಂಡಿತು, ಭಾರತ ನಾಲ್ಕು ವಿಕೆಟ್‌ಗಳ ಸೋಲನ್ನು ಅನುಭವಿಸಿತು.

ಪಂದ್ಯದ ನಂತರ ಮಾತನಾಡಿದ ಇಂಗ್ಲೆಂಡ್ ಬ್ಯಾಟರ್ ಜೇಕಬ್ ಬೆಥೆಲ್, ಸೂರ್ಯವಂಶಿ ಅವರ ಚೊಚ್ಚಲ ಪ್ರವೇಶವನ್ನು ಕಣ್ತುಂಬಿಕೊಂಡ ಅನುಭವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. 2024ರಲ್ಲಿ ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಹಾಗೂ ಕೇವಲ 22 ವರ್ಷ ವಯಸ್ಸಿನ ಬೆಥೆಲ್, ಇಂಗ್ಲೆಂಡ್ ತಂಡದಲ್ಲಿರುವ ಅತ್ಯಂತ ಕಿರಿಯ ಆಟಗಾರರೂ ಆಗಿದ್ದಾರೆ.

'ನನಗಿಂತ ಏಳು ವರ್ಷ ಚಿಕ್ಕ ಆಟಗಾರನ ವಿರುದ್ಧ ಆಡುತ್ತಿದ್ದೇನೆ ಎಂದು ಹೇಳಿಕೊಳ್ಳುವುದೇ ವಿಚಿತ್ರವೆನಿಸುತ್ತದೆ. ನಾನು ಅವರನ್ನು ಭಾರತದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದನ್ನು ನೋಡಿದ್ದೇನೆ, ಇಂದೂ ನೋಡಿದೆ - ಅವರ ಬ್ಯಾಟಿಂಗ್‌ನಲ್ಲಿನ 'ಸ್ವಿಂಗ್' ಮತ್ತು ಇತರ ಎಲ್ಲವೂ ಅತ್ಯುತ್ತಮವಾಗಿವೆ. ಹೀಗಾಗಿ, ಅವರು ಅದ್ಭುತ ಪ್ರತಿಭೆ' ಎಂದು ಬೆಥೆಲ್ ಹೇಳಿದರು.

191 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ, ಬೆಥೆಲ್ ಸಂಯಮದ ಹಾಗೂ ಸ್ಫೋಟಕ ಆಟದ ಮೂಲಕ ಅಜೇಯ 76 ರನ್ ಗಳಿಸಿ ಇಂಗ್ಲೆಂಡ್‌ಗೆ ನಾಲ್ಕು ವಿಕೆಟ್‌ಗಳ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಆತಿಥೇಯ ತಂಡವು ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

 Jacob Bethell
2ನೇ T20 ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ಆಟಗಾರ ಸ್ಯಾಮ್ ಕರನ್ ಎಚ್ಚರಿಕೆ!

'ಈ ಇನಿಂಗ್ಸ್ ಅನ್ನು ನನ್ನ ಅತ್ಯುತ್ತಮ ಇನಿಂಗ್ಸ್‌ಗಳ ಸಾಲಿನಲ್ಲಿ ಪರಿಗಣಿಸುತ್ತೇನೆ. ಒಬ್ಬ ಬ್ಯಾಟರ್‌ ಆಗಿ, ಪಂದ್ಯದಲ್ಲಿ ಅಜೇಯರಾಗಿ ಉಳಿದು, ಗೆಲುವಿನೊಂದಿಗೆ ಮೈದಾನದಿಂದ ಹೊರಬಂದು, ಸಹ ಆಟಗಾರರ ಕೈ ಕುಲುಕುವುದಕ್ಕಿಂತ ಮಿಗಿಲಾದ ಅನುಭವ ಮತ್ತೊಂದಿಲ್ಲ' ಎಂದು ಬೆಥೆಲ್ ಹೇಳಿದರು.

'ನಾನು ಕೆಲವು ಶತಕಗಳನ್ನು ಗಳಿಸಿದ್ದೇನೆ. ಆದರೆ, ಅವುಗಳಲ್ಲಿ ಒಂದರಲ್ಲಿ ಮಾತ್ರ ತಂಡ ಗೆಲುವು ಸಾಧಿಸಲು ಸಾಧ್ಯವಾಯಿತು. ಆಸ್ಟ್ರೇಲಿಯಾ ಮತ್ತು ಭಾರತದಲ್ಲಿ ನಾವು ಸೋಲನುಭವಿಸಿದ್ದೆವು; ಅಂತಹ ಪಂದ್ಯಗಳ ನಂತರ, 'ನಾನು ಇನ್ನೂ ಹೆಚ್ಚಿನದನ್ನು ಏನು ಮಾಡಬಹುದಿತ್ತು?' ಎಂದು ಯಾವಾಗಲೂ ಅನಿಸುತ್ತದೆ. ಆದರೆ ಇಂದು, ನನ್ನ ಮುಖದಲ್ಲಿ ಮಂದಹಾಸವಿದೆ. ಸರಣಿಯಲ್ಲಿ ನಾವು 1-0 ಮುನ್ನಡೆ ಸಾಧಿಸಿದ್ದೇವೆ. ಭಾರತದ ವಿರುದ್ಧದ ಹಿಂದಿನ ಪಂದ್ಯಗಳ ಕೆಲವು ಕಹಿ ನೆನಪುಗಳಿದ್ದವು, ಹಾಗಾಗಿ ಅವರ ವಿರುದ್ಧ ಮೇಲುಗೈ ಸಾಧಿಸಿದ್ದು ಸಂತೋಷದ ವಿಷಯ. ಇದು ಮುಂಬರುವ ಮೂರು ಪಂದ್ಯಗಳಿಗೆ ನನ್ನಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನೂ ಮೂಡಿಸಿದೆ' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com