

ಜಿಂಬಾಬ್ವೆ ಪ್ರವಾಸಕ್ಕಾಗಿ ಭಾರತದ ಟಿ20ಐ ತಂಡದಿಂದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದಕ್ಕೆ ಭಾರತೀಯ ಕ್ರಿಕೆಟಿಗ ಅಜಿಂಕ್ಯ ರಹಾನೆ ಆಶ್ಚರ್ಯ ವ್ಯಕ್ತಪಡಿಸಿದ್ದು, ಆಯ್ಕೆದಾರರು ಈ ನಿರ್ಧಾರವನ್ನು ಆಟಗಾರನಿಗೆ ತಿಳಿಸಿರುತ್ತಾರೆ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡ ರಹಾನೆ, ಸ್ಯಾಮ್ಸನ್ ಅವರನ್ನು ಬೆಂಬಲಿಸಿದ್ದು, ವಿಕೆಟ್ ಕೀಪರ್-ಬ್ಯಾಟರ್ ಶೀಘ್ರದಲ್ಲೇ ರಾಷ್ಟ್ರೀಯ ತಂಡಕ್ಕೆ ಮರಳುತ್ತಾರೆ ಎಂದು ನಿರೀಕ್ಷಿಸುವುದಾಗಿ ಹೇಳಿದರು.
'ಸಂಜು ಸ್ಯಾಮ್ಸನ್ ಅವರೊಂದಿಗೆ ಕೆಲವು ಮಾತುಕತೆಗಳು ನಡೆದಿವೆ ಎಂದು ಭಾವಿಸುತ್ತೇನೆ. ನಮ್ಮ ಇತ್ತೀಚಿನ ಟಿ20 ವಿಶ್ವಕಪ್ ಗೆಲುವಿಗೆ ಕಾರಣರಾದ ಆಟಗಾರನನ್ನು ಮುಂಬರುವ ಜಿಂಬಾಬ್ವೆ ವಿರುದ್ಧದ ಸರಣಿಗೆ ಭಾರತದ ಟಿ20 ತಂಡದಿಂದ ಹೊರಗಿಡಲಾಗಿದೆ ಎಂಬುದು ವಿಚಿತ್ರವೆನಿಸುತ್ತದೆ. ಅವರನ್ನು ಶೀಘ್ರದಲ್ಲೇ ತಂಡಕ್ಕೆ ಹಿಂತಿರುಗಿಸುವ ಭರವಸೆ ಇದೆ' ಎಂದು ರಹಾನೆ ಬರೆದಿದ್ದಾರೆ.
ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಗೆ ಭಾರತದ ತಂಡವನ್ನು ಪ್ರಕಟಿಸಿದ ನಂತರ ರಹಾನೆ ಈ ಹೇಳಿಕೆ ನೀಡಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಅಭಿಯಾನದಲ್ಲಿ ಭಾರತ ತಂಡಕ್ಕೆ ಸ್ಯಾಮ್ಸನ್ ನೀಡಿದ ಕೊಡುಗೆಗಳ ಹೊರತಾಗಿಯೂ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಜುಲೈ 6 ರಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂರು ಪಂದ್ಯಗಳ ಟಿ20ಐ ಸರಣಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಅಶೋಕ್ ಶರ್ಮಾ, ಪ್ರಭ್ಸಿಮ್ರನ್ ಸಿಂಗ್ ಮತ್ತು ಯಶ್ ಠಾಕೂರ್ ಭಾರತ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ20ಐ ಸರಣಿ ಜುಲೈ 23 ರಂದು ಪ್ರಾರಂಭವಾಗಲಿದೆ. ಜುಲೈ 25 ರಂದು ಎರಡನೇ ಟಿ20ಐ ಮತ್ತು ಜುಲೈ 26 ರಂದು ಮೂರನೇ ಟಿ20ಐ ಪಂದ್ಯ ನಡೆಯಲಿದ್ದು, ಎಲ್ಲವೂ ಹರಾರೆಯಲ್ಲಿ ನಡೆಯಲಿವೆ. ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಲಿದ್ದಾರೆ. ವೈಭವ್ ಸೂರ್ಯವಂಶಿ ಭಾರತದ ಪರ ಇಂಗ್ಲೆಂಡ್ ವಿರುದ್ಧ ಸದ್ಯ ನಡೆಯುತ್ತಿರುವ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತದ ಪರ ಚೊಚ್ಚಲ ಪಂದ್ಯವನ್ನು ಆಡಿದ ನಂತರ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ತಿಲಕ್ ವರ್ಮಾ ಉಪನಾಯಕರಾಗಿದ್ದಾರೆ.
ಜಿಂಬಾಬ್ವೆ ವಿರುದ್ಧದ T20I ಸರಣಿಗೆ ಭಾರತ ತಂಡ
ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್, ಪ್ರಭ್ರಿಮ್ರನ್ ಸಿಂಗ್ (ವಿಕೆಟ್ ಕೀಪರ್).