ಮಂಗಳವಾರ ನಡೆದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ನ ವೇಗಿಗಳಾದ ಜೋಫ್ರಾ ಆರ್ಚರ್ ಮತ್ತು ಜೋಶ್ ಟಂಗ್ ಅವರ ಮಾರಕ ಬೌಲಿಂಗ್ ದಾಳಿಗೆ ಭಾರತ ತಂಡವು 125 ರನ್ಗಳ ದಾಖಲೆಯ ಅಂತರದಿಂದ ಹೀನಾಯ ಸೋಲನ್ನು ಅನುಭವಿಸಿತು. ರನ್ಗಳ ಅಂತರದ ದೃಷ್ಟಿಯಿಂದ ನೋಡಿದರೆ ಇದು ಭಾರತದ ಅತ್ಯಂತ ಹೀನಾಯ ಟಿ20 ಸೋಲಾಗಿತ್ತು. ಏಕೆಂದರೆ ಕೇವಲ ನಾಲ್ವರು ಬ್ಯಾಟರ್ಗಳು ಮಾತ್ರ ಎರಡಂಕಿಯ ಮೊತ್ತವನ್ನು ತಲುಪಲು ಸಾಧ್ಯವಾಯಿತು. ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರೆ, ಮೂರನೇ ಪಂದ್ಯದಲ್ಲಿ ಗೆಲುವಿನ ಮೂಲಕ ಇಂಗ್ಲೆಂಡ್ 2-0 ಮುನ್ನಡೆ ಸಾಧಿಸಿತು. 202 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತವು ಕೇವಲ 11.4 ಓವರ್ಗಳಲ್ಲಿ 76 ರನ್ಗಳಿಗೆ ಆಲೌಟ್ ಆಯಿತು. ವೇಗಿಗಳಾದ ಆರ್ಚರ್ (3 ಓವರ್ಗಳಲ್ಲಿ 3/29) ಮತ್ತು ಟಂಗ್ (4 ಓವರ್ಗಳಲ್ಲಿ 4/28) ಪವರ್ಪ್ಲೇ ಅವಧಿಯಲ್ಲಿ ಅತ್ಯಂತ ವೇಗ ಮತ್ತು ಆಕ್ರಮಣಕಾರಿ ಬೌಲಿಂಗ್ ಪ್ರದರ್ಶಿಸಿದರು.
ನಾಯಕನಾದ ಮೇಲೆ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಇದೀಗ ಐದು ಟಿ20 ಪಂದ್ಯಗಳಲ್ಲಿ ಸೋಲು ಕಂಡಿದೆ. ಮತ್ತೊಂದೆಡೆ, ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಡಿಯಲ್ಲಿ ತಂಡದ ಪ್ರದರ್ಶನ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ.
ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ನ ಆರಂಭಿಕರಾದ ಫಿಲ್ ಸಾಲ್ಟ್ ಅವರ 44 ಎಸೆತಗಳಲ್ಲಿ 70 ರನ್, ಜೋಸ್ ಬಟ್ಲರ್ ಅವರ 21 ಎಸೆತಗಳಲ್ಲಿ 36 ರನ್ ಮತ್ತು ಸ್ಯಾಮ್ ಕರನ್ ಅವರ ಅಜೇಯ 41 ರನ್ಗಳ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿತು.
202ರನ್ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲೇ ಸಂಕಷ್ಟ ಎದುರಾಯಿತು. ಐದು ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 52 ರನ್ಗಳಿಗೆ ಕುಸಿಯಿತು. ಭಾರತದ ಪರ ಅಭಿಷೇಕ್ ಶರ್ಮಾ 10, ವೈಭವ್ ಸೂರ್ಯವಂಶಿ ಮತ್ತು ಇಶಾನ್ ಕಿಶನ್ ತಲಾ 13, ಅಕ್ಷರ್ ಪಟೇಲ್ 10 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾವುದೇ ಬ್ಯಾಟರ್ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ.
ಪವರ್ಪ್ಲೇ ಒಳಗೆಯೇ 7ನೇ ಸ್ಥಾನದಲ್ಲಿದ್ದ ಹರ್ಷಿತ್ ರಾಣಾ ಅವರನ್ನು ಶಿವಂ ದುಬೆ ಅವರಗಿಂತ ಮುಂಚಿತವಾಗಿ ಕಳುಹಿಸಿದ್ದು ಬಹುತೇಕರ ಹುಬ್ಬೇರಿಸಿತು. ವೈಭವ್ ಸೂರ್ಯವಂಶಿ ಮತ್ತೊಮ್ಮೆ ಆರ್ಚರ್ ಮತ್ತು ಟಂಗ್ ಅವರ ಬೌಲಿಂಗ್ನಲ್ಲಿ ತಲಾ ಒಂದು ಸಿಕ್ಸರ್ಗಳನ್ನು ಬಾರಿಸಿದರು. ಐದು ಎಸೆತಗಳಲ್ಲಿ 13 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಭಾರತವು ಕೇವಲ 76 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 125 ರನ್ಗಳ ಅಂತರದ ಹೀನಾಯ ಸೋಲು ಕಂಡಿತು. ಐದು ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾಗಿರುವುದರಿಂದ ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಭಾರತ ಗೆದ್ದರೆ ಈಗಾಗಲೇ 2-0 ಮುನ್ನಡೆ ಸಾಧಿಸಿರುವ ಇಂಗ್ಲೆಂಡ್ ಜೊತೆಗೆ ಸರಣಿ ಸಮಬಲ ಸಾಧಿಸಬಹುದು.
ಭಾರತದ ವೇಗದ ಬೌಲಿಂಗ್ ವಿಭಾಗವು ಪ್ರಭಾವಶಾಲಿ ಪ್ರದರ್ಶನ ನೀಡಿತು; ಹರ್ಷಿತ್ ರಾಣಾ (4 ಓವರ್ಗಳಲ್ಲಿ 2/40) ಮತ್ತು ಪ್ರಿನ್ಸ್ ಯಾದವ್ (4 ಓವರ್ಗಳಲ್ಲಿ 2/30) ನಿರ್ಣಾಯಕ ಹಂತಗಳಲ್ಲಿ ವಿಕೆಟ್ಗಳನ್ನು ಕಬಳಿಸಿದರು. ಆದರೆ, ಅನುಭವಿ ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್ (4 ಓವರ್ಗಳಲ್ಲಿ 1/49) ಮತ್ತು ವರುಣ್ ಚಕ್ರವರ್ತಿ (3 ಓವರ್ಗಳಲ್ಲಿ 0/35) ರನ್ ಸೋರಿಕೆ ಮಾಡಿದರು.