

ಭಾರತದ ಟಿ20 ವಿಶ್ವಕಪ್ 2026 ಅಭಿಯಾನದ ಬಗ್ಗೆ ಭವಿಷ್ಯ ನುಡಿದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲಿಂಗ್ಗೆ ಗುರಿಯಾದರು. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ನಂತರ ಭಾರತ ಸೆಮಿಫೈನಲ್ಗೆ ಅರ್ಹತೆ ಪಡೆಯುವುದಿಲ್ಲ ಎಂದು ಅಮೀರ್ ಭವಿಷ್ಯ ನುಡಿದಿದ್ದರು. ಆದರೆ, ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸತತ ಗೆಲುವು ಸಾಧಿಸುವ ಮೂಲಕ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಸೆಮಿಫೈನಲ್ನಲ್ಲಿ ಸ್ಥಾನ ಪಡೆಯಿತು. ಪಾಕಿಸ್ತಾನ ಟಿವಿ ಕಾರ್ಯಕ್ರಮ ಹಾರ್ನಾ ಮನಾ ಹೈ ನಲ್ಲಿ ಕಾಣಿಸಿಕೊಂಡ ಅಮೀರ್, ಭಾರತ ಮತ್ತು ಟಿ20 ವಿಶ್ವಕಪ್ನಲ್ಲಿ ತಂಡದ ಭವಿಷ್ಯದ ಬಗ್ಗೆ ಹೊಸ ಮಾತುಗಳನ್ನಾಡಿದ್ದಾರೆ.
'ಕ್ರಿಕೆಟ್ ದೃಷ್ಟಿಕೋನದಿಂದ ನಾನು ಇದನ್ನು ವಿಶ್ಲೇಷಿಸಿದರೆ, ಭಾರತ ಉತ್ತಮ ಕ್ರಿಕೆಟ್ ಆಡುತ್ತಿಲ್ಲ. ಅವರ ಫೀಲ್ಡಿಂಗ್ ಉತ್ತಮವಾಗಿಲ್ಲ. ಅವರು ಕನಿಷ್ಠ 3-4 ಕ್ಯಾಚ್ಗಳನ್ನು ಕೈಬಿಟ್ಟಿದ್ದಾರೆ ಮತ್ತು ಮೈದಾನದಲ್ಲಿ ಎಡವಿದ್ದಾರೆ. ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಪ್ರತಿಯೊಬ್ಬ ಬೌಲರ್ ಸಾಕಷ್ಟು ರನ್ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ದೊಡ್ಡ ತಂಡಗಳ ವಿರುದ್ಧ ಎಂದಿಗೂ ಪ್ರದರ್ಶನ ನೀಡುವುದಿಲ್ಲ ಎಂದು ನಾನು ನಿಮಗೆ ಹೇಳಿದ್ದೆ. ಅವರು ತಮ್ಮ 4 ಓವರ್ಗಳಲ್ಲಿ 40 ರನ್ಗಳನ್ನು ನೀಡಿದರು. ವರುಣ್ ಚಕ್ರವರ್ತಿ ಕೂಡ ಉತ್ತಮ ಪ್ರದರ್ಶನ ನೀಡಿಲ್ಲ. ಸೆಮಿಫೈನಲ್ನಲ್ಲಿರುವ ತಂಡಗಳು ಸ್ಪಿನ್ನರ್ಗಳ ವಿರುದ್ಧ ಉತ್ತಮವಾಗಿ ಆಡುತ್ತವೆ. ಭಾರತ ಇನ್ನೂ ಟೂರ್ನಮೆಂಟ್ನಲ್ಲಿ ಗೆಲ್ಲುವ ನೆಚ್ಚಿನ ತಂಡವಲ್ಲ ಎಂದು ನಾನು ನಂಬುತ್ತೇನೆ' ಎಂದು ಅಮೀರ್ ಹೇಳಿದರು.
ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.
ವೆಸ್ಟ್ ಇಂಡೀಸ್ ಇನಿಂಗ್ಸ್ನ 12ನೇ ಓವರ್ನಲ್ಲಿ, ಶಿಮ್ರಾನ್ ಹೆಟ್ಮೆಯರ್ ಜಸ್ಪ್ರೀತ್ ಬುಮ್ರಾ ಅವರ ಎಸೆತವನ್ನು ಸ್ಲಾಗ್ ಮಾಡಲು ಪ್ರಯತ್ನಿಸಿದರು. ಆದರೆ, ಸ್ಟಂಪ್ಗಳ ಹಿಂದೆ ಸಂಜು ಸ್ಯಾಮ್ಸನ್ಗೆ ಕ್ಯಾಚ್ ನೀಡಿದರು. ಬುಮ್ರಾ ಅವರ ಮನವಿಯ ಬಗ್ಗೆ ವಿಶ್ವಾಸವಿತ್ತು ಮತ್ತು ಅಂಪೈರ್ ಕ್ರಿಸ್ ಗಫಾನಿ ಹಿಂಜರಿಕೆಯಿಲ್ಲದೆ ಬೆರಳು ಎತ್ತಿದರು. ಆದಾಗ್ಯೂ, ಹೆಟ್ಮೈಯರ್ ಅವರಿಗೆ ಮನವರಿಕೆಯಾಗದ ಕಾರಣ ರಿವ್ಯೂ ತೆಗೆದುಕೊಂಡರು. ಆಗ ಚೆಂಡು ಬ್ಯಾಟ್ಗೆ ತಗುಲಿತ್ತೆಂದು ತೋರಿಸಿತು. ಆದರೆ, ಬ್ಯಾಟರ್ಗೆ ಇನ್ನೂ ಮನವರಿಕೆಯಾಗಲಿಲ್ಲ ಮತ್ತು ವೆಸ್ಟ್ ಇಂಡೀಸ್ ಡಗೌಟ್ ಕೂಡ ಅದೇ ಭಾವನೆಯಲ್ಲಿತ್ತು.
ಪಾಕಿಸ್ತಾನಿ ಕಾರ್ಯಕ್ರಮ ಹಾರ್ನಾ ಮನಾ ಹೈ ನಲ್ಲಿ ಕಾಣಿಸಿಕೊಂಡಾಗ ಅಮೀರ್, ಹೆಟ್ಮೇಯರ್ ಔಟಾಗಿಲ್ಲ ಎಂದು ನಾನು ನಂಬುತ್ತೇನೆ ಎಂದು ಹೇಳಿದರು.
'ಹೆಟ್ಮೇಯರ್ ಅವರ ಔಟ್ ವಿವಾದಾತ್ಮಕವಾಗಿತ್ತು ಎಂದು ನಾನು ಭಾವಿಸುತ್ತೇನೆ. ಅವರು ಔಟ್ ಆಗಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಸ್ವಲ್ಪ ಹೆಚ್ಚು ಸಮಯ ಅಲ್ಲಿಯೇ ಇದ್ದು ಸ್ಕೋರ್ 220–230 ತಲುಪಿದ್ದರೆ, ಭಾರತ ಇಂದು ನಾಕ್ಔಟ್ ಆಗುತ್ತಿತ್ತು' ಎಂದು ಅವರು ಹೇಳಿದರು.
Advertisement