

ವೆಸ್ಟ್ ಇಂಡೀಸ್ ಕೋಚ್ ಡೇರೆನ್ ಸ್ಯಾಮಿ ಮತ್ತು ಅವರ ತಂಡವು ತವರಿಗೆ ಮರಳಲು ಅನುಮತಿಗಾಗಿ ಕಾಯುತ್ತಿರುವಾಗ ಸಾಮಾಜಿಕ ಮಾಧ್ಯಮದಲ್ಲಿ ಹತಾಶ ಮನವಿಯೊಂದನ್ನು ಮಾಡಿದ್ದಾರೆ. ಸೂಪರ್ 8 ಹಂತದಲ್ಲಿ ಭಾರತದ ವಿರುದ್ಧದ ಸೋಲಿನ ನಂತರ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಪಂದ್ಯಾವಳಿಯಿಂದ ಹೊರಬಿತ್ತು. ಆದರೆ, ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿಯಿಂದ ಉಂಟಾಗಿರುವ ಅಂತರರಾಷ್ಟ್ರೀಯ ವಾಯುಪ್ರದೇಶದ ನಿರ್ಬಂಧಗಳಿಂದಾಗಿ ಆಟಗಾರರು ತವರಿಗೆ ಮರಳಲು ಸಾಧ್ಯವಾಗಿಲ್ಲ. ಪರಿಸ್ಥಿತಿ ಯಾವಾಗ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ, ವೆಸ್ಟ್ ಇಂಡೀಸ್ ತಂಡವು ಸದ್ಯಕ್ಕೆ ಭಾರತದಲ್ಲೇ ಉಳಿಯುವಂತಾಗಿದೆ.
'ನಾನು ಮನೆಗೆ ಹೋಗಬೇಕು' ಎಂದು ಸ್ಯಾಮಿ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಭಾರತದಿಂದ ತವರಿಗೆ ಮರಳಲು ವಿಮಾನ ಹತ್ತಲು ಹಸಿರು ನಿಶಾನೆ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದ್ದಾರೆ.
ಸಮಸ್ಯೆ ಬಗೆಹರಿಸಲು ಕ್ರಿಕೆಟ್ ವೆಸ್ಟ್ ಇಂಡೀಸ್ ಕೆಲಸ
ಆಟಗಾರರ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಕ್ರಿಕೆಟ್ ವೆಸ್ಟ್ ಇಂಡೀಸ್ ಐಸಿಸಿ ಮತ್ತು ಸಂಬಂಧಿತ ಸರ್ಕಾರಿ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ. ಗಲ್ಫ್ ಪ್ರದೇಶದಲ್ಲಿ ವಿಮಾನ ಕಾರ್ಯಾಚರಣೆಗಳನ್ನು ಸದ್ಯ ಸ್ಥಗಿತಗೊಳಿಸಲಾಗಿದೆ ಮತ್ತು ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ದಾಳಿಯಿಂದ ಹಾನಿಯಾಗಿದೆ ಎಂದು ವರದಿಯಾಗಿದೆ.
'ಐಸಿಸಿ ಪುರುಷರ ಟಿ20 ವಿಶ್ವಕಪ್ನಿಂದ ಹೊರಬಿದ್ದ ನಂತರ, ವೆಸ್ಟ್ ಇಂಡೀಸ್ ಹಿರಿಯ ಪುರುಷರ ತಂಡವು ಭಾರತದಿಂದ ನಿರ್ಗಮಿಸುವುದು ಅಂತರರಾಷ್ಟ್ರೀಯ ವಾಯುಪ್ರದೇಶದ ನಿರ್ಬಂಧಗಳಿಂದಾಗಿ ವಿಳಂಬವಾಗಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯುಐ) ತಿಳಿಸಲು ಬಯಸುತ್ತದೆ' ಎಂದು ಮಂಡಳಿಯು ಹೇಳಿಕೆಯಲ್ಲಿ ತಿಳಿಸಿದೆ.
'ಗಲ್ಫ್ ಪ್ರದೇಶದಲ್ಲಿನ ಮಿಲಿಟರಿ ಕ್ರಮದಿಂದ ಉಂಟಾಗುವ ಭದ್ರತಾ ಬೆದರಿಕೆಗಳ ನೇರ ಪರಿಣಾಮವಾಗಿ ನಿರ್ಬಂಧಗಳು ಜಾರಿಯಲ್ಲಿವೆ. ಇದು ಹಲವಾರು ಅಂತರರಾಷ್ಟ್ರೀಯ ವಿಮಾನ ಮಾರ್ಗಗಳ ಮೇಲೆ ಪರಿಣಾಮ ಬೀರಿದೆ ಮತ್ತು ಸುರಕ್ಷತಾ ಕಾರಣಗಳಿಗಾಗಿ ವಿಮಾನಯಾನ ಸಂಸ್ಥೆಗಳು ನಿಗದಿತ ಸೇವೆಗಳನ್ನು ಬಂದ್ ಮಾಡಿವೆ. ಈ ಸಮಯದಲ್ಲಿ ನಮ್ಮ ಅಭಿಮಾನಿಗಳು, ಕುಟುಂಬಗಳು ಮತ್ತು ಪಾಲುದಾರರ ತಿಳುವಳಿಕೆ ಮತ್ತು ಕಾಳಜಿಯನ್ನು CWI ಶ್ಲಾಘಿಸುತ್ತದೆ' ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಕೋಲ್ಕತ್ತಾದಲ್ಲಿ ನಡೆದ ಭಾರತ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಸೋತು ತಂಡವು ಟೂರ್ನಿಯಿಂದ ಹೊರನಡೆದಿತು.
'ವೆಸ್ಟ್ ಇಂಡೀಸ್ ತಂಡವು ಇನ್ನೂ ಇಲ್ಲೇ ಇದೆ. ಅವರು ಯಾವಾಗ ಹೊರಡುತ್ತಾರೆ ಎಂಬುದರ ಕುರಿತು ಯಾವುದೇ ದೃಢೀಕರಣವಿಲ್ಲ. ಐಸಿಸಿ ಈ ವಿಚಾರಗಳ ಮೇಲೆ ಗಮನವಹಿಸಿದೆ. ವೆಸ್ಟ್ ಇಂಡೀಸ್ ಹುಡುಗರು ಮನೆಗೆ ಮರಳಲು ಯಾವುದೇ ರೀತಿಯ ಒತ್ತಡದಲ್ಲಿದ್ದಾರೆ ಎಂದು ನಾನು ಭಾವಿಸುವುದಿಲ್ಲ' ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ತವರಿನತ್ತ ಹೊರಟ ಜಿಂಬಾಬ್ವೆ
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ವಿಮಾನ ಸಂಚಾರದಲ್ಲಿ ಅಡಚಣೆ ಉಂಟಾಗಿ ಕೆಲವು ದಿನಗಳ ಕಾಲ ಭಾರತದಲ್ಲಿ ಸಿಲುಕಿಕೊಂಡಿದ್ದ ಸಿಕಂದರ್ ರಜಾ ನೇತೃತ್ವದ ಜಿಂಬಾಬ್ವೆ ತಂಡವು ಹರಾರೆಗೆ ತೆರಳಲು ಪ್ರಾರಂಭಿಸಿದೆ. ಜಿಂಬಾಬ್ವೆ ಕ್ರಿಕೆಟ್ ತಂಡವು ತನ್ನ ಮೂಲ ಮಾರ್ಗಗಳ ಮೇಲೆ ಪರಿಣಾಮ ಬೀರಿದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಂಡಕ್ಕೆ ಪರ್ಯಾಯ ಪ್ರಯಾಣ ಯೋಜನೆಗಳನ್ನು ವ್ಯವಸ್ಥೆ ಮಾಡಲು ಮಧ್ಯಪ್ರವೇಶಿಸಿದೆ ಎಂದು ದೃಢಪಡಿಸಿದೆ.
ಐಸಿಸಿ ಹೊಸ ವ್ಯವಸ್ಥೆಗಳನ್ನು ಪಡೆದುಕೊಂಡ ನಂತರ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಈಗ ಬ್ಯಾಚ್ಗಳಲ್ಲಿ ಮನೆಗೆ ಮರಳುತ್ತಿದ್ದಾರೆ ಎಂದು ಜಿಂಬಾಬ್ವೆ ಕ್ರಿಕೆಟ್ ಪ್ರಕಟಿಸಿದೆ. ಮಂಡಳಿಯು ಹಂಚಿಕೊಂಡ ಹೇಳಿಕೆಯಲ್ಲಿ, ತಂಡವು ಈಗಾಗಲೇ ಜಿಂಬಾಬ್ವೆಗೆ ಮರಳುತ್ತಿದೆ ಎಂದು ದೃಢಪಡಿಸಿದೆ.
Advertisement