

ಕ್ರಿಕೆಟಿಗ ಅಮಿತ್ ಮಿಶ್ರಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪ ಹೊರಿಸಿ 35 ವರ್ಷದ ಮಾಡೆಲ್ ಕಾನ್ಪುರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮದುವೆ ನಂತರ ತನ್ನ ಪತಿ ಮತ್ತು ಅವರ ಕುಟುಂಬದಿಂದ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸಿರುವುದಾಗಿ ಆರೋಪಿಸಿ ಗರಿಮಾ ತಿವಾರಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ (ಹಿರಿಯ ವಿಭಾಗ) ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಅಮಿತ್ ಮಿಶ್ರಾ ಅವರ ತಾಯಿ ಬೀನಾ ಮಿಶ್ರಾ, ತಂದೆ ಶಶಿಕಾಂತ್ ಮಿಶ್ರಾ, ಸಹೋದರ ಅಮರ್ ಮಿಶ್ರಾ, ಅತ್ತಿಗೆ ರಿತು ಮಿಶ್ರಾ ಮತ್ತು ಸಹೋದರಿ ಸ್ವಾತಿ ಮಿಶ್ರಾ ಅವರನ್ನು ಸಹ ಆರೋಪಿಗಳೆಂದು ಹೆಸರಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ತಿವಾರಿ, ತಾನು ಮತ್ತು ಈಗ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಯಾಗಿರುವ ಮಿಶ್ರಾ 2019 ರಲ್ಲಿ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದೆವು ಮತ್ತು ಸುಮಾರು ಮೂರು ವರ್ಷ ಸಂಬಂಧದಲ್ಲಿದ್ದೆವು ಮತ್ತು ಏಪ್ರಿಲ್ 26, 2021 ರಂದು ಕಾನ್ಪುರ ಕ್ಲಬ್ನಲ್ಲಿ ವಿವಾಹವಾದೆವು ಎಂದು ಹೇಳಿದರು.
ಮದುವೆಯಾದ ಕೂಡಲೇ, ತನ್ನ ಪತಿ ಮತ್ತು ಅತ್ತೆ-ಮಾವಂದಿರು ಹೋಂಡಾ ಸಿಟಿ ಕಾರು ಮತ್ತು ₹10 ಲಕ್ಷ ವರದಕ್ಷಿಣೆ ನೀಡುವಂತೆ ಕುಟುಂಬದ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಆ ಸಮಯದಲ್ಲಿ ತನ್ನ ಕುಟುಂಬವು ₹2.5 ಲಕ್ಷ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾಯಿತು. ಆದರೆ, ಹೆಚ್ಚಿನ ಹಣಕ್ಕಾಗಿ ಒತ್ತಡ ಹೇರಿದರು ಎಂದು ಆರೋಪಿಸಿದ್ದಾರೆ.
ಮಿಶ್ರಾ ಕುಡಿದು ತನ್ನ ಮೇಲೆ ಆಗಾಗ್ಗೆ ಹಲ್ಲೆ ನಡೆಸುತ್ತಿದ್ದರು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಮತ್ತು ಕೆಲವೊಮ್ಮೆ ದಿನಗಟ್ಟಲೆ ಊಟ ನೀಡುತ್ತಿರಲಿಲ್ಲ. ಮಾಡೆಲಿಂಗ್ ಮೂಲಕ ತಾನು ಗಳಿಸಿದ ಹಣವನ್ನು ಕಸಿದುಕೊಂಡಿದ್ದಲ್ಲದೆ, ವಿಚ್ಛೇದನ ನೀಡುವುದಾಗಿ ಪದೇ ಪದೆ ಬೆದರಿಕೆ ಹಾಕುತ್ತಿದ್ದರು ಎಂದು ತಿವಾರಿ ದೂರಿದ್ದಾರೆ.
ಈ ಕಿರುಕುಳವು ತನ್ನನ್ನು ಖಿನ್ನತೆಗೆ ತಳ್ಳಿತು ಮತ್ತು ತನ್ನ ಮಾಡೆಲಿಂಗ್ ವೃತ್ತಿಜೀವನವನ್ನು ತೊರೆಯುವಂತೆ ಒತ್ತಾಯಿಸಿತು. ಒಮ್ಮೆ ನಾನು ಫಿನಾಯಿಲ್ ಕುಡಿದು ಆತ್ಮಹತ್ಯೆಗೂ ಯತ್ನಿಸಿದ್ದೇನೆ ಮತ್ತು ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿ ಸೇರಿದಂತೆ ಹಲವು ಬಾರಿ ಪೊಲೀಸರನ್ನು ಸಂಪರ್ಕಿಸಿದರೂ, ಮಿಶ್ರಾ ಅವರ ಪ್ರಭಾವದಿಂದಾಗಿ ಎಫ್ಐಆರ್ ದಾಖಲಿಸಿಲ್ಲ. ನಂತರ ನಾನು ನ್ಯಾಯಾಲಯದ ಮೆಟ್ಟಿಲೇರಿದ್ದೇನೆ ಎಂದು ತಿಳಿಸಿದರು.
ಪೊಲೀಸರಿಗೆ ಪದೇ ಪದೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ದೂರು ದಾಖಲಿಸಲಾಗಿದೆ ಎಂದು ಅವರ ವಕೀಲ ಕರೀಮ್ ಅಹ್ಮದ್ ಸಿದ್ದಿಕಿ ಹೇಳಿದರು.
ಅಮಿತ್ ಮಿಶ್ರಾ ವಿರುದ್ಧ ತಿವಾರಿ ದಾಖಲಿಸಿರುವ ಮೂರನೇ ಕಾನೂನು ಪ್ರಕರಣ ಇದಾಗಿದೆ. ಏಪ್ರಿಲ್ 21, 2025 ರಂದು ಅವರ ವಿರುದ್ಧ ಕೌಟುಂಬಿಕ ಹಿಂಸಾಚಾರ ಪ್ರಕರಣ ದಾಖಲಿಸಿದರು. ನಂತರ ಏಪ್ರಿಲ್ 23, 2025 ರಂದು ಮಾಸಿಕ ₹50,000 ಭತ್ಯೆ ಮತ್ತು ₹ 1 ಕೋಟಿ ಪರಿಹಾರವನ್ನು ಕೋರಿ ನಿರ್ವಹಣಾ ಅರ್ಜಿಯನ್ನು ಸಲ್ಲಿಸಿದ್ದರು.
ನ್ಯಾಯಾಲಯವು ಶೀಘ್ರದಲ್ಲೇ ಈ ವಿಷಯವನ್ನು ಪ್ರಾಥಮಿಕ ವಿಚಾರಣೆಗೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement