ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಬೌಲಿಂಗ್ ವೇಳೆ ಕೋಪದಿಂದ ಸ್ಟಂಪ್ಗಳ ಬೇಲ್ಸ್ ಅನ್ನು ಉರುಳಿಸಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ (MI) ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಪಂದ್ಯ ಶುಲ್ಕದ ಶೇ 10ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ.
ಬುಧವಾರ ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಾಲ್ಕು ವಿಕೆಟ್ಗಳಿಂದ ಸೋಲು ಕಂಡಿತು. ಈ ಸಂದರ್ಭದಲ್ಲಿ ತನ್ನ ಮುಂದಿನ ಚೆಂಡನ್ನು ಎಸೆಯಲು ರನ್-ಅಪ್ ಮಾರ್ಕ್ಗೆ ಹಿಂತಿರುಗುವಾಗ ಕೋಪದಿಂದ ಸ್ಟಂಪ್ಗಳಿಗೆ ಹೊಡೆದರು ಮತ್ತು ಬೇಲ್ಸ್ ಅನ್ನು ಕೆಡವಿದರು. ಹೀಗಾಗಿ, ನೀತಿ ಸಂಹಿತೆಯ ಹಂತ 1ನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.
ಕೆಕೆಆರ್ ತಂಡವು 148 ರನ್ಗಳ ಗುರಿಯನ್ನು ಇನ್ನೂ ಏಳು ಎಸೆತಗಳು ಬಾಕಿ ಇರುವಾಗಲೇ ತಲುಪಿತು ಮತ್ತು ಪಾಂಡ್ಯ ತನ್ನ ಎರಡು ಓವರ್ಗಳಲ್ಲಿ ವಿಕೆಟ್ ಪಡೆಯದೆ 13 ರನ್ಗಳನ್ನು ಬಿಟ್ಟುಕೊಟ್ಟರು.
'ಹಾರ್ದಿಕ್ ಪಾಂಡ್ಯ ಐಪಿಎಲ್ನ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಇದು 'ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ಗ್ರೌಂಡ್ ಉಪಕರಣಗಳು ಅಥವಾ ಫಿಕ್ಚರ್ಗಳು ಮತ್ತು ಫಿಟ್ಟಿಂಗ್ಗಳ ದುರುಪಯೋಗ'ಕ್ಕೆ ಸಂಬಂಧಿಸಿದೆ' ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.
'ಪಂದ್ಯದ ಎರಡನೇ ಇನಿಂಗ್ಸ್ನ 10ನೇ ಓವರ್ನ ನಾಲ್ಕನೇ ಎಸೆತದಲ್ಲಿ ಈ ಘಟನೆ ಸಂಭವಿಸಿದೆ. ಹಾರ್ದಿಕ್ ಪಾಂಡ್ಯ ತಮ್ಮ ರನ್-ಅಪ್ಗೆ ಹಿಂತಿರುಗುವಾಗ ವಿಕೆಟ್ನ ಬೇಲ್ಸ್ಗಳನ್ನು ಬಲವಾಗಿ ಹೊಡೆದರು' ಎಂದಿದೆ.
ನಾಲ್ಕರಿಂದ ಏಳು ಡಿಮೆರಿಟ್ ಪಾಯಿಂಟ್ಗಳನ್ನು ಪಡೆದರೆ ಐಪಿಎಲ್ನಲ್ಲಿ ಒಂದು ಪಂದ್ಯದ ಅಮಾನತು ಶಿಕ್ಷೆಗೆ ಕಾರಣವಾಗುತ್ತದೆ.
ಪಾಂಡ್ಯ ತಮ್ಮ ತಪ್ಪನ್ನು ಒಪ್ಪಿಕೊಂಡರು ಮತ್ತು ಮ್ಯಾಚ್ ರೆಫರಿ ರಾಜೀವ್ ಸೇಠ್ ವಿಧಿಸಿದ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ.
ಐದು ಬಾರಿಯ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವು ಈ ವರ್ಷದ ಐಪಿಎಲ್ ಪ್ಲೇ-ಆಫ್ನಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಿಂದ ಹೊರಗುಳಿದಿದ್ದು, ಈ ಆವೃತ್ತಿಯಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ಗೆದ್ದಿದೆ. ಭಾನುವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಲಿದ್ದಾರೆ.
Advertisement