ನಗರದಲ್ಲಿ ಒಣ ತ್ಯಾಜ್ಯ ಮಾರ್ಕೆಟ್

ಕಸದಿಂದ ರಸ ಎನ್ನುವುದು ಸಾಮಾನ್ಯ ಮಾತಾಯಿತು. ಇನ್ನು ಮುಂದೆ ನಗರದಲ್ಲಿ 'ಕಸದಿಂದ ಹಣ' ಎಂಬ ಮಾತು ಜನಪ್ರಿಯತೆಗೆ ಬರಬಹುದು!
ಕಸ ಮಾರ್ಕೆಟ್‌ನ ದರ ಪಟ್ಟಿ
ಕಸ ಮಾರ್ಕೆಟ್‌ನ ದರ ಪಟ್ಟಿ

ಬೆಂಗಳೂರು: ಕಸದಿಂದ ರಸ ಎನ್ನುವುದು ಸಾಮಾನ್ಯ ಮಾತಾಯಿತು. ಇನ್ನು ಮುಂದೆ ನಗರದಲ್ಲಿ 'ಕಸದಿಂದ ಹಣ' ಎಂಬ ಮಾತು ಜನಪ್ರಿಯತೆಗೆ ಬರಬಹುದು!

ಬಿಬಿಎಂಪಿಯ ಹೊಸ 'ಕಸ ಮಾರ್ಕೆಟ್‌' ಪರಿಕಲ್ಪನೆ ಜನರಿಗೆ ಹಣ ನೀಡುವುದಲ್ಲದೆ, ಕಸಮುಕ್ತ ಬೆಂಗಳೂರು ನಿರ್ಮಾಣ ಮಾಡಲೂ ನೆರವಾಗಲಿದೆ. ಪ್ರತಿದಿನ ಮನೆ ಮುಂದೆ ಬರುವ ಕಸದ ಗಾಡಿಗಳಿಗೆ ಸಾರ್ವಜನಿಕರು ಒಣತ್ಯಾಜ್ಯವನ್ನು ಸುರಿಯುವ ಅಗತ್ಯವಿಲ್ಲ. ಏಕೆಂದರೆ  'ಕಸ ಮಾರ್ಕೆಟ್‌'ನಲ್ಲಿ ಇದನ್ನು ನೀಡಿದರೆ ಹಣ ದೊರೆಯುತ್ತದೆ. ಒಣಕಸವನ್ನು ಮುಖ್ಯವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದು, ಪ್ರತಿ ವಿಭಾಗದ ಕಸಕ್ಕೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಕಸವನ್ನು ಕಸದ ಬುಟ್ಟಿಗೆ ಹಾಕಿ ಎಂದು ಅಭಿಯಾನ ಮಾಡುವುದಕ್ಕಿಂತ ಇದು ಹೆಚ್ಚಿನ ಪರಿಣಾಮಕಾರಿ ಯೋಜನೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

'ನಿರ್ಮಲ್ ಎನ್‌ವಿರೋ ಸೊಲ್ಯೂಷನ್‌' ಸಂಸ್ಥೆಯ ಸಹಯೋಗದಲ್ಲಿ ಬಿಬಿಎಂಪಿ ಆರಂಭಿಸಿರುವ ನಗರದ ಅತಿದೊಡ್ಡ 'ಒಣತ್ಯಾಜ್ಯ ಸಂಗ್ರಹಣೆ ಘಟಕ'ವು ಕಸ ಮಾರ್ಕೆಟ್ ಎಂಬ ಪರಿಕಲ್ಪನೆ ತಂದಿದೆ. ಈ ಘಟಕಕ್ಕೆ ಸಾರ್ವಜನಿಕರು ಕಸ ನೀಡಿದರೆ ಸಾಕು, ಘಟಕದ ಸಿಬ್ಬಂದಿ ಹಣ ನೀಡುತ್ತಾರೆ. ಒಣ ತ್ಯಾಜ್ಯವನ್ನು ಮಾತ್ರ ಈ ಘಟಕ ಸಂಗ್ರಹಿಸಲಿದ್ದು, ಪ್ರತಿ ಕೆಜಿ ತ್ಯಾಜ್ಯಕ್ಕೆ ದರ ನಿಗದಿ ಮಾಡಲಾಗಿದೆ. ಪ್ರತ್ಯೇಕವಾಗಿ ತ್ಯಾಜ್ಯ ಸಂಗ್ರಹಿಸಿದ ನಂತರ ಮರುಬಳಕೆ ಮಾಡಲು ವಿವಿಧ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ.

ಘಟಕ ನಡೆಸುವ ನಿರ್ಮಲ್ ಸಂಸ್ಥೆ ಕೆಲವು ಕೈಗಾರಿಕೆಗಳೊಂದಿಗೆ ಸಹಯೋಗ ಹೊಂದಿದ್ದು, ತ್ಯಾಜ್ಯವನ್ನು ಕಾರ್ಖಾನೆಗೆ ಕಳುಹಿಸುತ್ತದೆ. ಹೆಚ್ಚಿನ ತ್ಯಾಜ್ಯವನ್ನು ಗುಜರಾತ್ ಹಾಗೂ ದೆಹಲಿಯಲ್ಲಿರುವ ಕಾರ್ಖಾನೆಗಳಿಗೆ ನೀಡಲಾಗುತ್ತದೆ. ತುಮಕೂರು ಹಾಗೂ ಬೊಮ್ಮನಹಳ್ಳಿ ಬಳಿ ಎರಡು ಕಾರ್ಖಾನೆಗಳಿದ್ದು, ಸಣ್ಣ ಪ್ರಮಾಣದ ಪ್ಲಾಸ್ಟಿಕ್ ಹಾಗೂ ಥರ್ಮಾಕೋಲ್ ತ್ಯಾಜ್ಯವನ್ನು ಇಲ್ಲಿಗೆ ನೀಡಲಾಗುತ್ತದೆ.

10 ಟನ್ ಸಾಮರ್ಥ್ಯದ ಶೆಡ್: ಘಟಕಕ್ಕಾಗಿ ಬಿಬಿಎಂಪಿ ಸುಮಾರು 25 ಲಕ್ಷ ರು ವೆಚ್ಚದಲ್ಲಿ ಶೆಡ್ ನಿರ್ಮಿಸಿಕೊಟ್ಟಿದೆ. ಸಾರ್ವಜನಿಕರು ಕಸ ನೀಡುವುದರೊಂದಿಗೆ ಈ ಭಾಗದ ಬಿಬಿಎಂಪಿ ಕಾರ್ಮಿಕರೂ ಕಸ ನೀಡಲಿದ್ದಾರೆ. ಸಧ್ಯಕ್ಕೆ ಘಟಕವು 10 ಟನ್ ಸಾಮರ್ಥ್ಯ ಹೊಂದಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ವಿಸ್ತರಿಸುವ ಚಿಂತನೆಯಿದೆ. ತ್ಯಾಜ್ಯವನ್ನು 36 ಉಪವಿಧ, ಪ್ರಮುಖವಾಗಿ ಕಾಗದ, ಪ್ಲಾಸ್ಟಿಕ್, ಇ-ತ್ಯಾಜ್ಯ, ಇತರ ಸಾಮಾಗ್ರಿಗಳು ಎಂಬ 4 ವಿಧಗಳಾಗಿ ವಿಂಗಡಿಸಲಾಗಿದೆ.

ಶೆಡ್‌ನಲ್ಲಿ ತ್ಯಾಜ್ಯ ಹಾಕಲು ವಿಭಾಗಗಳಿದ್ದು, ಸಂಗ್ರಹಣೆಗೆ ಮಾತ್ರ ಅವಕಾಶವಿದೆ. ಘಟಕದಿಂದ ಕಸವನ್ನು ಹೊತ್ತೊಯ್ಯುವ ಸಾರಿಗೆ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ. ಮೊಬೈಲ್, ರೇಡಿಯೋ, ಟಿವಿ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣ, ದಿನಬಳಕೆ ಸಾಮಗ್ರಿಗಳ ಕಾಗದ ಹಾಗೂ ಪ್ಲಾಸ್ಟಿಕ್ ಪ್ಯಾಕೆಟ್‌ಗಳು ಸೋಫಾ, ಪಾತ್ರೆ, ಮರದಿಂದ ಮಾಡಿದ ವಸ್ತುಗಳು ಹೆಚ್ಚು ಬಂದರೆ ಮರುಬಳಕೆಗೆ ಅನುಕೂಲವಾಗಲಿಗೆ ಎಂದು ಸಂಸ್ಥೆ ತಿಳಿಸಿದೆ.

ಇಂದು ಆರಂಭ
ಕಸಕ್ಕೆ ಅತ್ತುತ್ತಮ ಬೆಲೆ ಮತ್ತು ಉತ್ತಮ ಜಾಗ ಎಂಬ ಘೋಷಣೆ ಹೊಂದಿರುವ ಕಸ ಮಾರ್ಕೆಟ್ ಸಿಲ್ಕ್ ಬೋರ್ಡ್ ಮೇಲು ಸೇತುವೆಯ ಕೆಳಗೆ ನಿರ್ಮಾಣವಾಗಿದೆ. ಶನಿವಾರ ಬೆಳಗ್ಗೆ 10ಕ್ಕೆ ಆಯುಕ್ತ ಲಕ್ಷ್ಮೀನಾರಾಯಣ ಮಳಿಗೆಗೆ ಚಾಲನೆ ನೀಡಲಿದ್ದಾರೆ.

ಬಿಬಿಎಂಪಿ, ಸಾರ್ವಜನಿಕರು ಸೇರಿದಂತೆ ಕಸ ನೀಡುವ ಎಲ್ಲರಿಗೂ ಹಣ ಪಾವತಿಸಲಾಗುತ್ತದೆ. ಕಸ ಸಮಸ್ಯೆ ನಿವಾರಿಸುವಲ್ಲಿ ಸಾರ್ವಜನಿಕರು ಹೆಚ್ಚಿನ ಆಸಕ್ತಿವಹಿಸಲು ಈ ಯೋಜನೆಯಿಂದ ಸಾಧ್ಯವಿದೆ. ಮಳಿಗೆಗೆ ಉತ್ತಮ ಪ್ರತಿಕ್ರಿಯ ವ್ಯಕ್ತವಾದರೆ ಈಗಿರುವ 10 ಟನ್ ಸಂಗ್ರಹಣಾ ಸಾಮಥ್ಯವನ್ನು ವಿಸ್ತರಿಸಲಾಗುತ್ತದೆ.

-ವಿನೋದ್ ಕುಮಾರ್ ರೆಡ್ಡಿ
ನಿರ್ಮಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com