ಭಗವಾನ್ ಗಡಿಪಾರಿಗೆ ಆಜಾದ್ ಸೇನೆ ಆಗ್ರಹ

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನನ್ನು ಪೂಜಿಸುವ ಕೋಟಿಗಟ್ಟಲೆ ಮನಸ್ಸುಗಳನ್ನು ನೋಯಿಸುವ ಹೇಳಿಕೆ...
ಪ್ರೋ. ಭಗವಾನ್
ಪ್ರೋ. ಭಗವಾನ್

ಬೆಂಗಳೂರು: ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನನ್ನು ಪೂಜಿಸುವ ಕೋಟಿಗಟ್ಟಲೆ ಮನಸ್ಸುಗಳನ್ನು ನೋಯಿಸುವ ಹೇಳಿಕೆ ನೀಡಿರುವ ಫ್ರೋ.ಕೆ.ಎಸ್. ಭಗವಾನ್ ಅವರನ್ನು ಗಡಿಪಾರು ಮಾಡುವಂತೆ ಸರ್ಕಾರವನ್ನು ಆಗ್ರಹಿಸಿ ಅಜಾದ್ ಸೇನೆ ಕಾರ್ಯಕರ್ತರು ಸೋಮವಾರ ಪುರಭವನದ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸೇನೆಯ ಅಧ್ಯಕ್ಷ  ಸುಭಾಷ್ ಮಾತನಾಡಿ, ಭಾರತೀಯ ಸಂಸ್ಕೃತಿ ವಿರೋಧಿಸುವವರು ಹಾಗೂ ದೇಶದ ಐಕ್ಯತೆಗೆ ಧಕ್ಕೆ ತರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಫ್ರೋ.ಕೆ.ಎಸ್. ಭಗವಾನ್ ಅವರು ಶ್ರೀರಾಮಚಂದ್ರ ಮಾಂಸಹಾರಿಯಾಗಿದ್ದ, ಏಕಪತ್ನಿ ವ್ರತಸ್ಥನಲ್ಲ ಎಂಬಿತ್ಯಾದಿ ವಿಕೃತ ಹೇಳಿಕೆ ನೀಡುವ ಮೂಲಕ ಭಾರತೀಯರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಈ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮುರಿದು ಅರಾಜಕತೆಯನ್ನು ಸೃಷ್ಟಿ ಮಾಡಲು ಹೊರಟಿದ್ದಾರೆ.

ಇತಿಹಾಸದಲ್ಲೇ ಭಾರತಕ್ಕೆ ವಿಶೇಷ ಸ್ಥಾನಮಾನವಿದೆ. ಇಂದಿಗೂ ವಿದೇಶಿಗರು ಸೇರಿದಂತೆ ಸಾಕಷ್ಟು ಮಂದಿ ನಮ್ಮ ಪುರಾಣದ ಗ್ರಂಥಗಳಿಗಳಾದ ರಾಮಾಯಣ, ಮಹಾಭಾರತ, ಭಗವದ್ಗೀತೆಗಳನ್ನು ಅಭ್ಯಸಿಸಿ, ಅದರಲ್ಲಿರುವ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಭಗವಾನ್ ಅವರ ಇಂತಹ ವಿಕೃತ ಹೇಳಿಕೆ ಸರಿಯಲ್ಲ. ಇಂತಹವರು ನಾಗರಿಕ ಸಮಾಜದಲ್ಲಿ ವಾಸ ಮಾಡಲು ಅರ್ಹರಲ್ಲ. ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ರಾಜಕೀಯ ಪಕ್ಷಗಳನ್ನು ಬೇಕಾದರೆ ಟೀಕಿಸಲಿ, ಅದನ್ನು ಬಿಟ್ಟು ನಮ್ಮ ದೇಶ, ಇತಿಹಾಸ, ಸಂಸ್ಕೃತಿ ಬಗ್ಗೆ ಟೀಕಿಸುವುದು ಸರಿಯಲ್ಲ. ಇದನ್ನು ಹೀಗೆಯೇ ಬಿಟ್ಟಲ್ಲಿ ಮುಂದೆ ಬೇರೊಬ್ಬರು ಈ ರೀತಿ ವಿಕೃತ ಹೇಳಿಕೆ ನೀಡುತ್ತಾರೆ.

ಯಾರ ನಂಬಿಕೆಗೂ ಧಕ್ಕೆ ತರಬಾರದು. ಆ ಕೆಲಸ ಭಗವಾನ್ ಮಾಡುತ್ತಿದ್ದಾರೆ ಎಂದರು. ಸೇನೆಯ ಸದಸ್ಯರಾದ ಶಂಕರ್ ಭಟ್, ಬಿ.ಕೆ.ಪ್ರಸನ್ನ, ವಿ.ಶಿವಣ್ಣ, ಆರ್.ಆರ್.ಪ್ರದೀಪ್, ಬಿ.ಎಲ್.ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com