ನಿಮ್ಮ ನಿರ್ಧಾರಗಳೇ ಜೀವನ ರೂಪಿಸುತ್ತವೆ: ದಲೈಲಾಮಾ

ಆಧುನಿಕ ಭಾರತೀಯ ವಿಜ್ಞಾನಕ್ಕೆ ಹೋಲಿಸಿದರೆ ಪುರಾತನ ಭಾರತೀಯರ ಜ್ಞಾನ, ಮನೋವಿಜ್ಞಾನ ಅದ್ಭುತ ಮತ್ತು ಪ್ರಬುದ್ಧವಾಗಿತ್ತು. ಈಗಿನ ವಿಜ್ಞಾನ ಕೇವಲ ಆರಂಭಿಕ ಹಂತದಲ್ಲಿದೆ. ಹೀಗಾಗಿ ಪುರಾತನ ಕಾಲದ ಜ್ಞಾನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ...
ಬೌದ್ಧ ಧರ್ಮ ಗುರು ದಲೈಲಾಮಾ (ಸಂಗ್ರಹ ಚಿತ್ರ)
ಬೌದ್ಧ ಧರ್ಮ ಗುರು ದಲೈಲಾಮಾ (ಸಂಗ್ರಹ ಚಿತ್ರ)

ಬೆಂಗಳೂರು: ಆಧುನಿಕ ಭಾರತೀಯ ವಿಜ್ಞಾನಕ್ಕೆ ಹೋಲಿಸಿದರೆ ಪುರಾತನ ಭಾರತೀಯರ ಜ್ಞಾನ, ಮನೋವಿಜ್ಞಾನ ಅದ್ಭುತ ಮತ್ತು ಪ್ರಬುದ್ಧವಾಗಿತ್ತು. ಈಗಿನ ವಿಜ್ಞಾನ ಕೇವಲ ಆರಂಭಿಕ ಹಂತದಲ್ಲಿದೆ. ಹೀಗಾಗಿ ಪುರಾತನ ಕಾಲದ ಜ್ಞಾನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಬೌದ್ಧ ಧರ್ಮ ಗುರು ದಲೈಲಾಮಾ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ನಿಮಾ್ಹನ್ಸ್ ಸಭಾಂಗಣದಲ್ಲಿ ಯೋಗಕೇಂದ್ರದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇವರು ಕೊಟ್ಟ ವಿಸ್ಮಯ ಕೊಡುಗೆಗಳಲ್ಲಿ ಮೆದುಳು ಕೂಡ ಒಂದು. ಅದರ ಲಾಭ ಪಡೆಯಬೇಕಾದರೆ ನಿರಂತರ ಅಧ್ಯಯನ, ಚಿಂತನೆ ಮತ್ತು ಅರ್ಥೈಸಿಕೊಳ್ಳುವಿಕೆ ಬಹಳ ಮುಖ್ಯ. ಇವು ನಿಮ್ಮ ಕೈಯಲ್ಲಿಯೇ ಇವೆ. ನಿಮ್ಮ ನಿರ್ಧಾರಗಳು ನಿಮ್ಮ ಜೀವನವನ್ನು ರೂಪಿಸುತ್ತವೆ. ಆದ್ದರಿಂದ ನಿರಂತರ ಕಲಿಕೆ ನಿಮ್ಮದಾಗಿರಲಿ ಎಂದು ಕರೆ ನೀಡಿದರು.

ಮನುಷ್ಯ ಬೆಳೆಯುತ್ತಾ ಹೋದಂತೆ ಹಲವಾರು ಅಡತಡೆಗಳನ್ನು ಎದುರಿಸುವುದು, ಅನುಭವಿಸುವುದು ಸಾಮಾನ್ಯ. ಕಾಲಾನಂತರ ಅವನಿಗೆ ಜೀವನ ತಿಳಿದುಕೊಂಡಷ್ಟು ಸುಲಭವಲ್ಲ ಎಂದೆನಿಸುತ್ತದೆ. ನಂತರ ಒಂದು ನಿರ್ಧಾರಕ್ಕೆ ಬರುತ್ತಾನೆ. ಅಷ್ಟರಲ್ಲಿ ಜೀವನದ ಕೊನೆಯಘಟ್ಟ ತಲುಪಿರುತ್ತಾನೆ. ಈ ಜೀವನದ ನೈಜತೆಯನ್ನು ಅರ್ಥೈಸಿಕೊಳ್ಳುವುದು ಬಹುಕಷ್ಟ. ಅರ್ಥೈಸಿಕೊಂಡರೆ ಅತೀ ಸುಲಭ ಎಂದರು.

ನಮ್ಮ ಧರ್ಮವನ್ನು ಪ್ರೀತಿಸುವುದು, ಉಳಿಸಿಕೊಳ್ಳು ವುದು ಮತ್ತು ಬೆಳೆಸುವುದು ಎಷ್ಟು ಮುಖ್ಯವೋ ಅದೇ ರೀತಿ ಪರ ಧರ್ಮವನ್ನು ಗೌರವಿಸಿ ಅಲ್ಲಿಯ ಉತ್ತಮ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಎಂದು ಹೇಳಿದರು. ಭಾಷಣದುದ್ದಕ್ಕೂ ಭಾರತೀಯ ಯೋಗ ಗುರುಗಳು ಮತ್ತು ಸಂಸ್ಕೃತಿಯ ವಿಶೇಷತೆಗಳ ಬಗ್ಗೆ ಮಾತನಾಡಿದ ಅವರು, ಭಾರತೀಯ ಯೋಗ ಗುರುಗಳ ಹೆಸರುಗಳು ಚಿಕ್ಕದಾಗಿದ್ದು ಅವರ ಜ್ಞಾನ ಮಾತ್ರ ಅತ್ಯದ್ಭುತ. ನನ್ನ ಮೂಲ ಹೆಸರು ಬಹಳ ದೊಡ್ಡದಾಗಿದೆ. ಆದರೆ ನನ್ನ ಜ್ಞಾನ ಮಾತ್ರ ಅತೀ ಚಿಕ್ಕದು ಎಂದು ಹೇಳುವ ಮೂಲಕ ನಗೆ ಚಟಾಕಿ ಹಾರಿಸಿದರು. ಕಾರ್ಯಕ್ರಮದಲ್ಲಿ ನಿಮಾ್ಹನ್ಸ್ ನಿರ್ದೇಶಕ ಪ್ರೊ.ಪಿ.ಸತೀಶ ಚಂದ್ರ, ಸಹಾಯಕ ಉಪನ್ಯಾಸಕ ಡಾ.ಶಿವರಾಮ್ ವರಂದಳ್ಳಿ ಮತ್ತು ಡಾ. ಬಿ.ಎನ್.ಗಂಗಾಧರ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com