ಏಕಾದಶಿಯ ದಿನ ಪತ್ನಿ ಕಂಟಕ ದರ್ಶನ

ವೈಕುಂಠ ಏಕಾದಶಿ ಪ್ರಯುಕ್ತ ಆ ದೇವಸ್ಥಾನವನ್ನು ಬಗೆಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಎಂದಿಗಿಂತ ಭಕ್ತರ ಸಮೂಹ ತುಸು ಹೆಚ್ಚಾಗಿಯೇ ಇತ್ತು. ಎಷ್ಟೋ ಮಂದಿ ದೇವರ ದರ್ಶನ ಪಡೆಯಲು ಬೆಳಗ್ಗೆಯಿಂದಲೇ ಬೃಹತ್ ಸರತಿ ಸಾಲಿನಲ್ಲಿ ನಿಂತಿದ್ದರು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ವೈಕುಂಠ ಏಕಾದಶಿ ಪ್ರಯುಕ್ತ ಆ ದೇವಸ್ಥಾನವನ್ನು ಬಗೆಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಎಂದಿಗಿಂತ ಭಕ್ತರ ಸಮೂಹ ತುಸು ಹೆಚ್ಚಾಗಿಯೇ ಇತ್ತು. ಎಷ್ಟೋ ಮಂದಿ ದೇವರ ದರ್ಶನ ಪಡೆಯಲು ಬೆಳಗ್ಗೆಯಿಂದಲೇ ಬೃಹತ್ ಸರತಿ ಸಾಲಿನಲ್ಲಿ ನಿಂತಿದ್ದರು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಅಲ್ಲೊಂದು ಘಟನೆ ಜರುಗಿತು.

ಅದು ಅಂತಿಂತಾ ಘಟನೆ ಅಲ್ಲ. ಸಿನೆಮಾ ಮಾದರಿ ಘಟನೆ... ಒಬ್ಬ ಪುರುಷ ಹಾಗೂ ಇಬ್ಬರು ಮಹಿಳೆಯರು ಪ್ರಧಾನ ಭೂಮಿಕೆಯಲ್ಲಿದ್ದ ಸಿನಿಮೀಯ ಘಟನೆ ಅದು. ದೇವಸ್ಥಾನದ ಆವರಣದಲ್ಲಿ ಆರಂಭವಾಗಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗುವ ಮೂಲಕ ಅಂತ್ಯವಾದ ಘಟನೆ. ಅರೇ ಇದೇನಿದು ಅನ್ನುತ್ತೀರಾ? ಇಲ್ಲಿದೆ ನೋಡಿ ಆ ಘಟನೆ. ವೈಕುಂಠ ಏಕಾದಶಿ ಪ್ರಯುಕ್ತ ಸೋಮವಾರ ಮಹಾಲಕ್ಷ್ಮೀ ಲೇಔಟ್‍ನಲ್ಲಿರುವ ವೆಂಕಟರಮಣಸ್ವಾಮಿ ದೇವಾಲಯವು ತಳಿರು ತೋರಣ, ವೈವಿಧ್ಯಮಯ ಹೂವುಗಳ ಅಲಂಕಾರದಿಂದ ಮಿರಿ ಮಿರಿ ಮಿಂಚುತಿತ್ತು.

ಬೆಳಗ್ಗೆ 10.30ರ ಸುಮಾರಿನಲ್ಲಿ ನಂದಿನಿ ಲೇಔಟ್ ನಿವಾಸಿ ಶ್ರೀನಿವಾಸ (38) ಮತ್ತು ಸಂಬಂಧಿ ಸುನೀತಾ ಪೂಜೆ ಮಾಡಿಸಲು ದೇವಸ್ಥಾನಕ್ಕೆ ಬಂದಿದ್ದರು. ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಈ ವೇಳೆ ಶ್ರೀನಿವಾಸ ಮತ್ತು ಸುನೀತಾ ನಿಂತಿದ್ದ ಸರತಿ ಸಾಲಿನ ಪಕ್ಕದ ಸಾಲಿನಲ್ಲಿ ರಮ್ಯಾ (ಶ್ರೀನಿವಾಸನ ಪತ್ನಿ) ನಿಂತಿದ್ದರು. ಪತಿ ಶ್ರೀನಿವಾಸನ ಜೊತೆ ಮತ್ತೊಂದು ಮಹಿಳೆಯನ್ನು ಕಂಡು ಕೆಂಡಮಂಡಲರಾದ ರಮ್ಯಾ, ಕೂಡಲೇ ಶ್ರೀನಿವಾಸನ ಬಳಿ ಧಾವಿಸಿ, `ಯಾರು ಈಕೆ' ಎಂದು ದಬಾಯಿಸಿದ್ದಾರೆ. ಅಂಗಿ ಹಿಡಿದು ಎಳೆದಾಡಿ ಒಂದೆರೆಡು ಗೂಸಾ ನೀಡಿ ರಂಪಾಟ ಮಾಡಿದ್ದಾರೆ. ಆದರೂ ಶ್ರೀನಿವಾಸ ತುಟಿಕ್ ಪಿಟಿಕ್ ಎನ್ನದೇ ಮೌನ ವಹಿಸಿದ್ದಾರೆ. ಇವರಿಬ್ಬರ ರಂಪಾಟ ನೋಡಿದ ಸುನೀತಾ, ರಮ್ಯನತ್ತ ಧಾವಿಸಿ, ಶ್ರೀನಿವಾಸನನ್ನು ಬಿಡುವಂತೆ ಕೇಳಿದ್ದಾರೆ.

ತಲೆಗೂದಲು ಹಿಡಿದು ಎಳೆದಾಡಿದರು!: ಇದುವರೆಗೂ ಶ್ರೀನಿವಾಸನ ಮೇಲೆ ಕೆಂಡಕಾರುತ್ತಿದ್ದ ರಮಾ್ಯ ಏಕಾಏಕಿ ಸುನೀತಾ ಮೇಲೆ ಜಗಳಕ್ಕೆ ಬಿದ್ದಿದ್ದಾರೆ. ಇಬ್ಬರೂ ಮಹಿಳೆಯರು ಪರಸ್ಪರ ಬೈದಾಡಿಕೊಂಡು ತಲೆಕೂದಲು ಹಿಡಿದು ಎಳೆದಾಡಿದ್ದಾರೆ.

ರಮ್ಯಾ ಹಾಗೂ ಶ್ವೇತಾ ನಡುವಿನ ಕುಸ್ತಿ ತಾರಕಕ್ಕೆ ಏರುತ್ತಿದ್ದಂತೆ ಶ್ರೀನಿವಾಸ ಮೆಲ್ಲಗೆ ಜಾಗ ಖಾಲಿ ಮಾಡಿದ್ದಾರೆ. ಬಳಿಕ ಜಂಗಿ ಕುಸ್ತಿ ನೋಡಲಾಗದ ಕೆಲ ಸಾರ್ವಜ ನಿಕರು ಮಧ್ಯೆ ಪ್ರವೇಶಿಸಿ, ಜಗಳ ಬಿಡಿಸಿದ್ದಾರೆ. ಅಲ್ಲಿಯ ವರೆಗೂ ಏಟು ಎದುರೇಟು ಕೊಡುತ್ತಾ ಭಕ್ತರಿಗೆ ಭರ ಪೂರ ಮನರಂಜನೆ ನೀಡಿದ ರಮ್ಯಾ ಮತ್ತು ಶ್ವೇತಾ, ದೇವಸ್ಥಾನದ ಆವರಣದಿಂದ ಕಾಲ್ಕಿತ್ತಿದ್ದಾರೆ. ನಂತರ ಇಬ್ಬರೂ ಪ್ರತ್ಯೇಕವಾಗಿ ಮಹಾಲಕ್ಷ್ಮೀ ಲೇಔಟ್ ಠಾಣೆಗೆ ದೂರು ಪ್ರತಿದೂರು ದಾಖಲಿಸಿದ್ದಾರೆ.

ವಿಚ್ಛೇದನಕ್ಕೆ ಅರ್ಜಿ

ಶ್ರೀನಿವಾಸ ಮತ್ತು ರಮ್ಯಾ ಏಳು ವರ್ಷದ ಹಿಂದೆ ವಿವಾಹವಾಗಿದ್ದರು. ಆದರೆ, ವಿವಾಹವಾದ ಎರಡೇ ವರ್ಷಕ್ಕೆ ದಂಪತಿ ನಡುವೆ ಬಿರುಕು ಮೂಡಿದೆ. ಇದರಿಂದ ಕಳೆದ ಐದು ವರ್ಷಗಳಿಂದ ಇಬ್ಬರು ದೂರವಾಗಿದ್ದರು. ಬಳಿಕ ರಮ್ಯಾಅವರು ಪತಿ ಶ್ರೀನಿವಾಸನ ವಿರುದ್ಧ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ.

ಶ್ರೀನಿವಾಸ ಕೂಡ ರಮ್ಯಾ ಅವರಿಂದ ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಇಂದು ತನ್ನ ಗಂಡನನ್ನು ಬೇರೊಂದು ಮಹಿಳೆ ಜೊತೆಗೆ ಕಂಡಿರುವ ರಮ್ಯಾ ಅವರು, ರೌದ್ರಾವತಾರ ತಾಳಿದ್ದರಿಂದ ಒಂದು ಸಿನಿಮೀಯ ಘಟನೆಯೇ ನಡೆಯಿತು. ಘಟನೆ ಸಂಬಂಧ ರಮ್ಯಾ ಹಾಗೂ ಸುನೀತಾ ಅವರಿಂದ ದೂರು ಪ್ರತಿದೂರು ಸ್ವೀಕರಿಸಿರುವ ಪೊಲೀಸರು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com