ಮಹಾಭಾರತ ಎಂದಿಗೂ ಪ್ರಸ್ತುತ: ಪ್ರೊ. ತಿಮ್ಮೇಗೌಡ
ಬೆಂಗಳೂರು: ಮಹಾಭಾರತವು ಸಾರ್ವಕಾಲಿಕ ಪ್ರಸ್ತುತ ಹಾಗೂ ಮಾರ್ಗದರ್ಶಕ ಮಹಾಕಾವ್ಯವಾಗಿದೆ. ಭಗವದ್ಗೀತೆ ಆ ಕಾಲದ ಆಧ್ಯಾತ್ಮಿಕ ಪ್ರವೃತ್ತಿಗಳನ್ನು ಒಳಗೊಂಡ ಸಮನ್ವಯ ಗ್ರಂಥವಾಗಿದೆ ಎಂದು ಬೆಂವಿವಿ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಬಣ್ಣಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗವು ಮಹಾಭಾರತ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾಭಾರತವು ಗಾತ್ರದಲ್ಲಿ ಎಲಿಯಡ್ ಮಹಾಕಾವ್ಯಕ್ಕಿಂತ ಹತ್ತುಪಟ್ಟು, ಬೈಬಲ್ಗಿಂತ ಮೂರು ಪಟ್ಟು ದೊಡ್ಡದು. ಧರ್ಮಕ್ಕೆ ನಿಯಮಿತ ವ್ಯಾಖ್ಯೆ ಇರಲು ಸಾಧ್ಯವಿಲ್ಲ ಎಂಬ ವ್ಯಾಸರ ಪ್ರತಿಪಾದನೆ ಒಪ್ಪಬಹುದಾದ
ವಿಷಯ ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪದ್ಮಾ ಶೇಖರ್ ಮಾತನಾಡಿ, ಮಹಾಭಾರತ ಜರುಗಿದ ಕಾಲದಲ್ಲಿ ಮಹಿಳೆಯರಿಗೆ ಸ್ವತಂತ್ರ ಆಯ್ಕೆ ಇರಲಿಲ್ಲ. ಪುರುಷರೇ ಮಹಿಳೆಯರ ಎಲ್ಲ ನಡವಳಿಕೆಯನ್ನು ಹೇಗೆ ನಿಯಂತ್ರಿಸುತ್ತಿದ್ದರು ಎಂಬುವುದಕ್ಕೆ ದ್ರೌಪದಿ ಮತ್ತು ಕುಂತಿ ಪಾತ್ರಗಳ ದುರಂತ ತಿಳಿದರೆ ಸಾಕು. ಮಹಾಭಾರತದಲ್ಲಿನ ಭೂಮಿ ಮತ್ತು ಸ್ತ್ರೀ ರಾಜಕಾರಣ ಇಂದಿಗೂ ಪ್ರಸ್ತುತ. ಭೂ ರಾಜಕಾರಣವು ವ್ಯಾಸ, ಪಂಪ, ಕುಮಾರವ್ಯಾಸರ ಕೈಯಲ್ಲಿ ಹೇಗೆ ಪಲ್ಲಟ ಪಡೆಯಿತು ಎಂದು ವಿವರಿಸಿದರು.
ಸಂಸ್ಕೃತ ವಿದ್ವಾಂಸ ಪ್ರೊ.ಎಂ. ಶಿವಕುಮಾರ ಸ್ವಾಮಿ ಮಾತನಾಡಿ, ಜಯ-ಭಾರತ-ಮಹಾಭಾರತ ಎಂಬುದಾಗಿ ಮೂರು ಹಂತಗಳಲ್ಲಿ ಈ ಗ್ರಂಥವು ವಿಸ್ತಾರ ಪಡೆದುಕೊಂಡಿದೆ. ಇದರಲ್ಲಿರುವ ವಿಷಯವು ಬೆರೆಲ್ಲೂ ಇರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ವಿಭಾಗದ ಪ್ರೊ.ಸಿ.ಶಿವರಾಜು, ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಉಪಸ್ಥಿತರಿದ್ದರು.