
ಬೆಂಗಳೂರು:ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ತಮ್ಮ ಮೇಲೆ ಮಾನಸಿಕ ಭಯೋತ್ಪಾದನೆ ಮಾಡುತ್ತಿದ್ದು, ಅವರ ವಿರುದ್ಧ ಶೀಘ್ರ ಕ್ರಮ ಕೈಗೊಂಡು ಬಂಧಿಸಬೇಕು ಎಂದು ಪ್ರೇಮಲತಾ ದಿವಾಕರ್ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಫೇಸ್ಬುಕ್ನಲ್ಲಿ ಹಾಗೂ ಭಾಷಣ ಮಾಡುವ ವೇಳೆ ಅವಕಾಶ ಸಿಕ್ಕಾಗಲೆಲ್ಲ ಅವರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ತೇಜೋವಧೆ ಮಾಡುತ್ತಿದ್ದು,ತಮಗೆ ಸಾಕಷ್ಟು ತೊಂದರೆ ನೀಡುತ್ತಿದ್ದಾರೆ. ಹಾಗಾಗಿ ಅವರನ್ನು ಕೂಡಲೇ ಬಂಧಿಸಬೇಕೆಂದು ಕೋರಿ ಪ್ರೇಮಲತಾ ಅವರು ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಒಂದು ವೇಳೆ ಪೊಲೀಸರು ಅವರ ಮೇಲೆ ಕ್ರಮ ಕೈಗೊಳ್ಳದಿದ್ದಲ್ಲಿ ತಮಗೆ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ. ಶ್ರೀಗಳು,ಅವರ ಅನುಯಾಯಿಗಳಿಂದ ತಮಗೆ ಸಾಮಾಜಿಕವಾಗಿಯೂ ತೊಂದರೆಯಾಗುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶ್ರೀಗಳು ಪರೋಕ್ಷವಾಗಿ ತಮ್ಮ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ.ಸಭೆ-ಸಮಾರಂಭ ಸೇರಿದಂತೆ ಎಲ್ಲ ಕಡೆ ತಮ್ಮ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ, ಅವರ ಹಿಂಬಾಲಕರಿಗೂ ಕುಮ್ಮಕ್ಕು ನೀಡಿದ್ದಾರೆ. ಅವರ ಅನುಯಾಯಿಗಳು ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಎಲ್ಲರೂ ಸೇರಿ ತಮಗೆ ಕಿರುಕುಳ ನೀಡುತ್ತಿದ್ದಾರೆ.`ಒಬ್ಬ ಸನ್ಯಾಸಿಯನ್ನು ಕೊಂದರೆ
ಇಡೀ ಸಮಾಜವನ್ನು ಕೊಂದಂತೆ. ಅಂತಹ ಹುನ್ನಾರಗಳು ನಮ್ಮಲ್ಲಿ ಈಗಲೂ ನಡೆಯುತ್ತಿವೆ. ಸ್ವಾಮೀಜಿಗಳ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸವೂ ನಡೆಯುತ್ತಿದೆ.' ಎಂಬುದು ಸೇರಿದಂತೆ ಚಾತರ್ಮಾಸದ ಸಮಯದಲ್ಲಿ ಭಾಷಣದ ವೇಳೆ ತಮ್ಮನ್ನು ಪರೋಕ್ಷವಾಗಿ ನಿಂದಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಅವರ ಭಾಷಣದ ಸಾಕಷ್ಟು ತುಣುಕುಗಳನ್ನು ದೂರಿನಲ್ಲಿ ಲಗತ್ತಿಸಿದ್ದಾರೆ.ಇದು ಹೀಗೆಯೇ ಮುಂದುವರಿದಲ್ಲಿ ಶ್ರೀಗಳು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಎಲ್ಲ ಸಾಕ್ಷಿ ನಾಶ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Advertisement