ಮಂಗಳೂರು: ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಎರಡು ಶವಗಳು ರಸ್ತೆಯಲ್ಲಿ ಇದ್ದ ಘಟನೆ ಮಂಗಳೂರಿನ ಬಜಪೆ ಹುಣಸೆಕಟ್ಟೆ ಬಳಿ ನಡೆದಿದೆ.
ಬಜಪೆ ಎಕ್ಕಾರು ಸಮೀಪದ ಕಲ್ಲು ಕೊರೆ ಕಾರ್ಮಿಕರಾಗಿದ್ದ ಬಾದಾಮಿ ನಿವಾಸಿ ಶಿವಮೂರ್ತಿ(22) ಹಾಗೂ ಮಡಿಕೇರಿ ನಿವಾಸಿ ಸಂತೋಷ್ ಯಾನೆ ಕೆಂಪ(24) ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಎದುರಿಗೆ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ ನಂತರ ಟಿಪ್ಪರ್ ಸಮೇತ ಚಾಲಕ ಪರಾರಿಯಾಗಿದ್ದಾನೆ. ಸುಮಾರು ಅರ್ಧ ಗಂಟೆ ಕಾಲ ಮೃತದೇಹಗಳು ರಸ್ತೆಯಲ್ಲೇ ಇದ್ದವು. ಬಜಪೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.