ನಿವೃತ್ತ ಎಎಸ್ಐ ಕೊಲೆ: ಕಳ್ಳತನ ಪ್ರಕರಣದ ವಿಚಾರಣೆ ವೇಳೆ ಬಯಲಾದ ರಹಸ್ಯ

ಹಣ ಮತ್ತು ಬಂದೂಕು ದೋಚಲು ನಿವೃತ್ತ ಸಹಾಯಕ ಸಬ್ ಇನ್ಸ್‍ಪೆಕ್ಟರ್ (ಎಎಸ್ಸೈ) ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಣ ಮತ್ತು ಬಂದೂಕು ದೋಚಲು ನಿವೃತ್ತ ಸಹಾಯಕ ಸಬ್ ಇನ್ಸ್‍ಪೆಕ್ಟರ್ (ಎಎಸ್ಸೈ) ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಧುಗಿರಿ ತಾಲೂಕಿನ ಸೋಂಪುರದ ಲಾರಿ ಚಾಲಕ ಎಸ್.ಎ. ಮಲ್ಲೇಶ್ (29) ಮತ್ತು ಆಚೇನಹಳ್ಳಿಯ ಟ್ರಾಕ್ಟರ್ ಚಾಲಕ ನರಸಿಂಹಮೂರ್ತಿ (19) ಬಂಧಿತರು. ಇವರಿಂದ ರು.35 ಸಾವಿರ ನಗದು, 1 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿವೃತ್ತ ಎಎಸ್ಸೈ ಲಂಕೇಹನುಮಯ್ಯ ಅವರು ಮಧುಗಿರಿಯ ತೋಟದ ಮನೆಯಲ್ಲಿ ಕುಟುಂಬದ ಜತೆ ವಾಸವಾಗಿದ್ದರು. ಕಾಡು ಪ್ರಾಣಿಗಳು ಹಾಗೂ ಆತ್ಮರಕ್ಷಣೆಗೆಂದು ಡಬಲ್ ಬ್ಯಾರೆಲ್ ಬಂದೂಕು ಇಟ್ಟುಕೊಂಡಿದ್ದರು. ಈ ವಿಷಯ ತಿಳಿದ ಮಲ್ಲೇಶ್, ನಾಲ್ವರು ಸಹಚರರ ಜತೆ ಸೇರಿ ಲಂಕೇ ಹನುಮಯ್ಯಗೆ ಬೆದರಿಸಿ ಹಣ ಮತ್ತು ಬಂದೂಕು ದೋಚಲು ಸ್ಕೆಚ್ ಹಾಕಿದ್ದ.

ಒಂಟಿಯಾಗಿದ್ದ ಲಂಕೇಹನುಮಯ್ಯ ಅವರ ಮನೆಗೆ ಆಗಸ್ಟ್ ಲ್ಲಿ ನುಗ್ಗಿದ ಐವರು ಬೆದರಿಸಿ ಹಣ ಹಾಗೂ ಬಂದೂಕು ಕಸಿಯಲು ಯತ್ನಿಸಿದ್ದರು. ಆದರೆ, ಇದಕ್ಕೆ ಲಂಕೆ ಹನುಮಯ್ಯ ಅವರು ಪ್ರತಿರೋಧ ವ್ಯಕ್ತಪಡಿಸಿದಾಗ ತಲೆಗೆ ಹೊಡೆದು ಕೊಲೆ ಮಾಡಿ ಬಂದೂಕು ಮತ್ತು ಹಣದೊಂದಿಗೆ ಪರಾರಿಯಾಗಿದ್ದರು.

ಈ ಸಂಬಂಧ ದೂರು ದಾಖಲಿಸಿಕೊಂಡ ಮಧುಗಿರಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಮಲ್ಲೇಶ್ ಮತ್ತು ನರಸಿಂಹ ಮೂರ್ತಿ ತಲೆಮರೆಸಿಕೊಂಡಿದ್ದರು. ಮಲ್ಲೇಶ್ ಮತ್ತು ನರಸಿಂಹ ಮೂರ್ತಿ ದೇವನಹಳ್ಳಿ ಬಳಿ ದಾರಿ ಹೋಕರನ್ನು ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕುತ್ತಿದ್ದಾಗ ಬಂಧಿಸಲಾಯಿತು. ಇಬ್ಬರನ್ನು ತೀವ್ರ ವಿಚಾರಣೆ ವೇಳೆ ಕೊಲೆ ಪ್ರಕರಣದ ಬಗ್ಗೆಯೂ ಬಾಯ್ಬಿಟ್ಟಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com