ಬೆಂಗಳೂರು: ಇಷ್ಟು ದಿನ ಸಂಗೀತ, ನೃತ್ಯದ ಕಲರವ ಕೇಳಿಬರುತ್ತಿದ್ದ ಕಬ್ಬನ್ ಉದ್ಯಾನದಲ್ಲಿ ಭಾನುವಾರ ಎಲ್ಇಡಿ ಬಲ್ಪ್ಗಳ ಮಿಂಚಿನ ಸಂಚಾರ ಕಂಡು ಬಂತು. ಭಾನುವಾರ ಕಬ್ಬನ್ ಉದ್ಯಾನದಲ್ಲಿ ವಾಹನ ನಿಷೇಧಿಸಿರುವ ಹಿನ್ನಲೆಯಲ್ಲಿ ಪ್ರತಿವಾರ ವಿನೂತನ ಕಾರ್ಯಕ್ರಮಗಳು ನಡೆಯುತ್ತಿದ್ದು, ಅದರ ಅಂಗವಾಗಿ ಇಂದು ವಿದ್ಯುತ್ ಸರಬರಾಜು ಕಂಪನಿ ಎನರ್ಜಿ ಎಫಿಶಿಯನ್ಸಿ ಸರ್ವಿಸ್ ಸಹಯೋಗದಲ್ಲಿ ಎಲ್ಇಡಿ ಬಲ್ಬ್ ವಿತರಿಸಲಾಯಿತು.
ಸಾರ್ವಜನಿಕರು ಪ್ರತಿ 9 ವ್ಯಾಟ್ ಬಲ್ಬ್ಗೆ ರು.100, 2ಕಿ.ವ್ಯಾ ಗರಿಷ್ಟ ಬಲ್ಬ್ ಹಾಗೂ 2ಕಿ.ವ್ಯಾಕಿಂತ ಹೆಚ್ಚು ಇದ್ದರೆ 10 ಬಲ್ಬ್ಗಳನ್ನು ವಿತರಿಸಲಾಯಿತು. ಒಟ್ಟು 8 ಸಾವಿರ ಬಲ್ಬ್ಗಳನ್ನು ವಿತರಿಸಲಾಯಿತು. ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ವ್ಯಾಯಾಮದಲ್ಲಿ ತೊಡಗಿದ್ದರೆ ಎಸ್ ಬಿಐನಿಂದ ಪಿಂಕಥಾನ್ ಕಾರ್ಯಕ್ರಮ ಜರುಗಿತು. ಉದಯ ರಾಗ ಕಾರ್ಯಕ್ರಮದಲ್ಲಿ ಕುಣಿಗಲ್ ರಾಮಚಂದ್ರ ಮತ್ತು ತಂಡದಿಂದ ಜಾನಪದ ಗೀತೆ ಮತ್ತು ಭಾವಗೀತೆ ಕಾರ್ಯಕ್ರಮ, ಶಿವಶಂಕರ್ ಮತ್ತು ಕೃಷ್ಣರಾಜ ಆಚಾರ್ಯ ಅವರಿಂದ ರಚಿಸಲ್ಪಟ್ಟ ಬೆಂಗಳೂರಿನ ಹತ್ತು ಜಾಗಗಳ ಮಾಹಿತಿಯುಳ್ಳ ಪುಸ್ತಕವಾದ ಬೆಂಗಳೂರು ಚುರುಮುರಿ ಪುಸ್ತಕದ ಪ್ರದರ್ಶನ ಮತ್ತು ಮಾರಾಟವಿತ್ತು.
ಯೂನಿವರ್ಸ್ ಆರ್ಟ್ ಫೌಂಡೇಶನ್ ಹಾಗೂ ಸ್ಪೂರ್ತಿ ಶಾಲೆಯ ಮಕ್ಕಳಿಂದ ನೃತ್ಯ ಪ್ರದರ್ಶನ ಜತೆಗೆ ಸಂಚಾರ ಪೊಲೀಸರು ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಶ್ರೀಕಂಠೇಗೌಡರ ಸಾಹಿತ್ಯ ಚಿಂತನೆ ಕುರಿತು ನಾರಾಯಣಪ್ಪ ಉಪನ್ಯಾಸ ನೀಡಲಿದ್ದಾರೆ. ಉದ್ಯಾನದ ಸಂಧ್ಯಾರಾಗದಲ್ಲಿ ನಂಜುಂಡಸ್ವಾಮಿ ಮತ್ತು ತಂಡದಿಂದ ಜನಪದ ಗೀತೆ ಭಜನೆ ಕಾರ್ಯಕ್ರಮ ನಡೆಯಿತು.
Advertisement