ಬೆಂಗಳೂರು: ಮಾಲ್ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಒಂದೇ ಕಾರಣಕ್ಕೆ ರಾತ್ರೋರಾತ್ರಿ ಕೆಡವಲಾಗಿದ್ದ `ಸಾರ್ವಜನಿಕ ಶೌಚಾಲಯ'ದ ಮರು ನಿರ್ಮಾಣದ ಕಟ್ಟಡವು ಜ.15ರಂದು ಉದ್ಘಾಟನೆಗೊಳ್ಳಲಿದೆ.
ವಿವಿಧ ಸಂಘ ಸಂಸ್ಥಗಳ ಒಕ್ಕೂಟದ ಹೋರಾಟದ ಫಲವಾಗಿ ಯಲಹಂಕ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ಮರು ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಾಲಯವನ್ನು ನಿವೃತ್ತ
ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ಬೆಳಗ್ಗೆ 10ಕ್ಕೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಟಕಕಾರ ಮಾಸ್ಟರ್ ಹಿರಣ್ಣಯ್ಯ ಹಾಗೂ ಶೌಚಾಲಯ ಹೋರಾಟ ಮತ್ತು ಅದರ ಫಲಶ್ರುತಿಯ ಬಗ್ಗೆ ವ್ಯಂಗ್ಯ ಚಿತ್ರ ಅನಾವರಣವನ್ನು ಕನ್ನಡಪ್ರಭ ಪತ್ರಿಕೆಯ ವ್ಯಂಗ್ಯ ಚಿತ್ರಕಾರ ಎಸ್.ವಿ.ಪದ್ಮನಾಭ ನೆರವೇರಿಸಲಿದ್ದಾರೆ.
ಸುಮಾರು 15 ವರ್ಷಗಳಿಂದ ಯಲಹಂಕದ ಈ ಶೌಚಾಲಯವನ್ನು ಸಾರ್ವಜನಿಕರು ಬಳಸುತ್ತಿದ್ದರು. ಇದಕ್ಕೆ ಹೊಂದಿಕೊಂಡಂತೆ ಆರ್ಎಂಝಡ್ ಖಾಸಗಿ ಸಂಸ್ಥೆಯು ಮಾಲ್ ನಿರ್ಮಿಸಲು ಮುಂದಾಗಿತ್ತು. ಆದರೆ, ಮಾಲ್ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ರಾತ್ರೋರಾತ್ರಿ ಸಾರ್ವಜನಿಕ ಅನುಕೂಲಕ್ಕೆ ಇದ್ದ ಶೌಚಾಲಯವನ್ನು ಅರ್ಧಂಬರ್ಧ ಕೆಡವಿದ್ದರು. ಇದರ ವಿರುದ್ಧ ವಿವಿಧ ಸಂಘಟನೆಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಯಿತು. ಸಹಿ ಸಂಗ್ರಹ, ಅನಿರ್ಧಿಷ್ಟಾವಧಿ ಧರಣಿ, ಪ್ರತಿಭಟನೆ, ಬೈಕ್ ರ್ಯಾಲಿ ನಡೆದವು.
ಹೋರಾಟದ ಬಳಿಕ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶೌಚಾಲಯ ನಿರ್ಮಾಣ ಆರಂಭವಾಯಿತು. ಇದಕ್ಕೆ ಬೇಕಾದ ಇಟ್ಟಿಗೆ, ಸಿಮೆಂಟ್, ಮರಳು, ಕಬ್ಬಿಣ ಇತರೆ ಸಾಮಾಗ್ರಿಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಲಾಯಿತು. ಅಂತೂ ಬಂಡವಾಳ ಶಾಹಿಗಳ ಅಡೆತಡೆಗಳ ನಡುವೆಯೂ ಸಾರ್ವಜನಿಕ ಶೌಚಾಲಯ ಕಟ್ಟಡ ಉದ್ಘಾಟನೆ ಸಿದ್ಧವಾಗಿದೆ.
Advertisement