Periods ಮುಂದೂಡಲು ಮಾತ್ರೆ ತೆಗೆದುಕೊಳ್ಳುತ್ತೀರಾ? ಜೀವಕ್ಕೆ ಅಪಾಯ ತರಬಹುದು ಈ ಅಭ್ಯಾಸ, ಆರೋಗ್ಯದ ಜೊತೆ ಆಟ ಬೇಡ..!

ಕೆಲ ದಿನಗಳ ಅನುಕೂಲಕ್ಕಾಗಿ ಅಥವಾ ಯೋಜಿತ ಕಾರ್ಯಕ್ರಮಗಳಲ್ಲಿ ಅಡಚಣೆ ಆಗದಿರಲಿ ಎಂಬ ಕಾರಣಕ್ಕೆ ಈ ಔಷಧಿಗಳನ್ನು ಸೇವಿಸುವುದು ಸಾಮಾನ್ಯವಾಗುತ್ತಿದೆ.
File photo
ಸಂಗ್ರಹ ಚಿತ್ರ
Updated on

ಇತ್ತೀಚಿನ ದಿನಗಳಲ್ಲಿ ಮದುವೆ, ಹನಿಮೂನ್, ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು, ದೀರ್ಘ ಪ್ರಯಾಣಗಳು ಅಥವಾ ವಿಶೇಷ ಸಂದರ್ಭಗಳ ಹಿನ್ನೆಲೆಯಲ್ಲಿ ಅನೇಕ ಮಹಿಳೆಯರು ತಮ್ಮ ಋತುಸ್ರಾವದ ದಿನಾಂಕವನ್ನು ಮುಂದೂಡಲು ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ.

ಕೆಲ ದಿನಗಳ ಅನುಕೂಲಕ್ಕಾಗಿ ಅಥವಾ ಯೋಜಿತ ಕಾರ್ಯಕ್ರಮಗಳಲ್ಲಿ ಅಡಚಣೆ ಆಗದಿರಲಿ ಎಂಬ ಕಾರಣಕ್ಕೆ ಈ ಔಷಧಿಗಳನ್ನು ಸೇವಿಸುವುದು ಸಾಮಾನ್ಯವಾಗುತ್ತಿದೆ. ಸಾಮಾಜಿಕ ಜಾಲತಾಣಗಳು, ಸ್ನೇಹಿತರ ಸಲಹೆಗಳು ಹಾಗೂ ಔಷಧ ಅಂಗಡಿಗಳ ಸುಲಭ ಲಭ್ಯತೆಯಿಂದಾಗಿ ವೈದ್ಯರ ಸಲಹೆ ಪಡೆಯದೇ ಪಿರಿಯಡ್ಸ್ ಮುಂದೂಡುವ ಮಾತ್ರೆಗಳನ್ನು ಸೇವಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಆದರೆ, ಆರೋಗ್ಯ ತಜ್ಞರು ಈ ಪ್ರವೃತ್ತಿಯ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ್ದು, ಋತುಸ್ರಾವವನ್ನು ಮುಂದೂಡುವ ಔಷಧಿಗಳು ಎಲ್ಲರಿಗೂ ಸುರಕ್ಷಿತವಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಶೇಷವಾಗಿ ಹಾರ್ಮೋನ್ ಆಧಾರಿತ ಮಾತ್ರೆಗಳು ಕೆಲವು ಮಹಿಳೆಯರಲ್ಲಿ ರಕ್ತ ಹೆಪ್ಪುಗಟ್ಟುವಿಕೆ (Blood Clotting) ಅಪಾಯವನ್ನು ಹೆಚ್ಚಿಸಬಹುದು. ಇದರ ಪರಿಣಾಮವಾಗಿ ಡೀಪ್ ವೇನ್ ಥ್ರೊಂಬೋಸಿಸ್ (DVT) ಎಂಬ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಇದು ಕಾಲಿನ ಆಳವಾದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಸ್ಥಿತಿಯಾಗಿದ್ದು, ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಆ ಹೆಪ್ಪುಗಟ್ಟಿದ ರಕ್ತ ಶ್ವಾಸಕೋಶಕ್ಕೆ ತಲುಪಿ ಜೀವಕ್ಕೆ ಅಪಾಯ ಉಂಟುಮಾಡಬಹುದು. ಆರಂಭದಲ್ಲಿ ಸಾಮಾನ್ಯ ಕಾಲು ನೋವು ಅಥವಾ ಆಯಾಸದಂತೆ ಕಾಣುವ ಲಕ್ಷಣಗಳು ಕೆಲವೊಮ್ಮೆ ದೊಡ್ಡ ಆರೋಗ್ಯ ಸಂಕಷ್ಟದ ಸೂಚನೆಯಾಗಿರಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

File photo
ಸಂಗ್ರಹ ಚಿತ್ರ

ತಾತ್ಕಾಲಿಕ ಸೌಕರ್ಯಕ್ಕಾಗಿ ತೆಗೆದುಕೊಳ್ಳುವ ಒಂದು ನಿರ್ಧಾರ ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಾರದು. ಆದ್ದರಿಂದ ಪಿರಿಯಡ್ಸ್ ಮುಂದೂಡುವ ಅಗತ್ಯವಿದ್ದರೆ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.

ಪ್ರತಿಯೊಬ್ಬ ಮಹಿಳೆಯ ದೇಹದ ಸ್ಥಿತಿ, ಆರೋಗ್ಯ ಹಿನ್ನೆಲೆ ಮತ್ತು ಅಪಾಯದ ಅಂಶಗಳು ವಿಭಿನ್ನವಾಗಿರುವುದರಿಂದ, ವೈದ್ಯಕೀಯ ಮಾರ್ಗದರ್ಶನವಿಲ್ಲದೆ ಔಷಧಿಗಳನ್ನು ಸೇವಿಸುವುದು ಆರೋಗ್ಯದೊಂದಿಗೆ ಆಟವಾಡಿದಂತೆಯೇ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

File photo
Energy drinks ಜೊತೆ ಮದ್ಯ ಸೇವಿಸುತ್ತೀರಾ..? ಹಾಗಿದ್ರೆ ಹೃದಯಾಘಾತಕ್ಕೆ ನೀವೇ ಆಹ್ವಾನ ನೀಡುತ್ತಿದ್ದೀರಿ..!

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮತ್ತು CARE ಆಸ್ಪತ್ರೆಗಳ ಕ್ಲಿನಿಕಲ್ ನಿರ್ದೇಶಕಿ ಡಾ. ಮಂಜುಳಾ ಅನಗನಿ ಅವರು ಮಾತನಾಡಿ, ಡೀಪ್ ವೇನ್ ಥ್ರೊಂಬೋಸಿಸ್ ಎಂದರೆ ದೇಹದ ಆಳವಾದ ರಕ್ತನಾಳಗಳಲ್ಲಿ, ವಿಶೇಷವಾಗಿ ಕಾಲುಗಳ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು. ಆರಂಭದಲ್ಲಿ ಇದು ಕಾಲು ಊತ, ಭಾರವಾದ ಅನುಭವ, ನೋವು, ಕೆಂಪಾಗುವುದು ಅಥವಾ ಉಷ್ಣತೆ ಹೆಚ್ಚಾದಂತೆ ಕಾಣಿಸಿಕೊಳ್ಳಬಹುದು. ಆದರೆ. ಅನೇಕರು ಇದನ್ನು ಸಾಮಾನ್ಯ ಆಯಾಸ ಅಥವಾ ಸ್ನಾಯು ನೋವೆಂದು ನಿರ್ಲಕ್ಷಿಸುತ್ತಾರೆ. ಸಮಸ್ಯೆ ಗಂಭೀರವಾಗುವುದು ಯಾವಾಗ ಎಂದರೆ, ಈ ರಕ್ತ ಹೆಪ್ಪುಗಟ್ಟುವಿಕೆ ಅಲ್ಲಿಂದ ಬೇರ್ಪಟ್ಟು ಶ್ವಾಸಕೋಶಕ್ಕೆ ತಲುಪಿದಾಗ. ಇದರಿಂದ ಏಕಾಏಕಿ ಉಸಿರಾಟದ ತೊಂದರೆ ಉಂಟಾಗಿ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ಹೇಳಿದ್ದಾರೆ.

ಋತುಸ್ರಾವವನ್ನು ಮುಂದೂಡುವ ಔಷಧಿಗಳು ಮುಖ್ಯವಾಗಿ ಎರಡು ವಿಧಗಳಾಗಿವೆ. ಹಾರ್ಮೋನ್ ಆಧಾರಿತ ಮಾತ್ರೆಗಳು ಮತ್ತು ಟ್ರಾನೆಕ್ಸಾಮಿಕ್ ಆಸಿಡ್‌ಗಳಂತಹ ಹಾರ್ಮೋನ್ ರಹಿತ ಔಷಧಿಗಳು. ಇವೆರಡನ್ನೂ ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ. ಈಸ್ಟ್ರೋಜನ್ ಅಂಶ ಹೊಂದಿರುವ ಹಾರ್ಮೋನಲ್ ಔಷಧಿಗಳು ಕೆಲವು ಮಹಿಳೆಯರಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಇದೇ ರೀತಿಯ ಅಪಾಯ ಕೆಲವು ಗರ್ಭನಿರೋಧಕ ಮಾತ್ರೆಗಳು ಹಾಗೂ ಸಂತಾನೋತ್ಪತ್ತಿ ಚಿಕಿತ್ಸೆಗಳಲ್ಲಿಯೂ ಕಂಡುಬರುತ್ತದೆ.

ಅದರಲ್ಲೂ ಧೂಮಪಾನ ಮಾಡುವವರು, ಅಧಿಕ ತೂಕ ಹೊಂದಿರುವವರು, ದೀರ್ಘಕಾಲ ಪ್ರಯಾಣ ಮಾಡುವವರು, ಹೆಚ್ಚು ಹೊತ್ತು ಒಂದೇ ಜಾಗದಲ್ಲಿ ಕುಳಿತುಕೊಳ್ಳುವವರು, ಹಿಂದೆ ರಕ್ತ ಹೆಪ್ಪುಗಟ್ಟಿದ ಇತಿಹಾಸ ಹೊಂದಿರುವವರು ಅಥವಾ ಕುಟುಂಬದಲ್ಲಿ ಅಂತಹ ಸಮಸ್ಯೆ ಇದ್ದವರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಸಿಕಂದರಾಬಾದ್‌ನ ಅಪೋಲೋ ಆಸ್ಪತ್ರೆಗಳ ಸಲಹೆಗಾರ ನಾಳೀಯ ಮತ್ತು ಎಂಡೋವಾಸ್ಕುಲರ್ ಶಸ್ತ್ರಚಿಕಿತ್ಸಕ ಡಾ. ಅನಿಲ್ ಮಾಮಿಡಿ ಮಾತನಾಡಿ, ಡಿವಿಟಿಯ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು ಜೀವ ಉಳಿಸಬಹುದು. ಒಂದು ಕಾಲಿನಲ್ಲಿ ಮಾತ್ರ ಊತ, ನೋವು, ಕೆಂಪು, ಸ್ಪರ್ಶಿಸಿದಾಗ ನೋವು ಅಥವಾ ಉರಿಯೂತ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಕೆಲವರಿಗೆ ಕಾಲು ಸಾಮಾನ್ಯಕ್ಕಿಂತ ಹೆಚ್ಚು ಭಾರವಾದಂತೆ ಅನುಭವವಾಗಬಹುದು. ಈ ಲಕ್ಷಣಗಳನ್ನು ನಿರ್ಲಕ್ಷಿಸಿ ಮನೆಯಲ್ಲೇ ಕಾಯುವುದು ಅಪಾಯಕಾರಿಯಾಗಿದೆ.

File photo
ಸಂಗ್ರಹ ಚಿತ್ರ

ಇದರ ಜೊತೆಗೆ, ಋತುಸ್ರಾವ ಮುಂದೂಡುವ ಮಾತ್ರೆಗಳನ್ನು ವೈದ್ಯರ ಸಲಹೆಯಿಲ್ಲದೆ ಪದೇಪದೇ ಸೇವಿಸುವುದರಿಂದ ಹಾರ್ಮೋನ್ ಅಸಮತೋಲನ, ಅಸಹಜ ರಕ್ತಸ್ರಾವ ಹಾಗೂ ಇತರ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಸಲಹೆಗಳು ಅಥವಾ ಔಷಧ ಅಂಗಡಿಗಳ ಸೂಚನೆಗಳನ್ನು ನಂಬಿ ಸ್ವಯಂ ಔಷಧೋಪಚಾರ ಮಾಡುವುದು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.

ಆದರೆ ಈ ಅಪಾಯಗಳನ್ನು ಬಹುಮಟ್ಟಿಗೆ ನಿಯಂತ್ರಿಸಬಹುದು. ಸಾಕಷ್ಟು ನೀರು ಕುಡಿಯುವುದು, ದೈಹಿಕ ಚಟುವಟಿಕೆಗಳನ್ನು ಮುಂದುವರಿಸುವುದು, ಹೆಚ್ಚು ಹೊತ್ತು ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸುವುದು ಹಾಗೂ ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು ಮುಖ್ಯ. ದೀರ್ಘ ಪ್ರಯಾಣದ ವೇಳೆ ಮಧ್ಯ ಮಧ್ಯೆ ಎದ್ದು ನಡೆಯುವುದು ಮತ್ತು ಕಾಲುಗಳನ್ನು ಚಲಿಸುವಂತೆ ಮಾಡುವುದು ಅಗತ್ಯ ಎಂದು ಸಲಹೆ ನೀಡಿದ್ದಾರೆ.

ಋತುಸ್ರಾವವನ್ನು ಮುಂದೂಡುವ ಅಗತ್ಯವಿದ್ದರೆ ಮೊದಲು ಸ್ತ್ರೀರೋಗ ತಜ್ಞರ ಸಲಹೆ ಪಡೆಯಬೇಕು. ನಿಮ್ಮ ಆರೋಗ್ಯ ಸ್ಥಿತಿ, ವಯಸ್ಸು, ಜೀವನಶೈಲಿ ಮತ್ತು ವೈದ್ಯಕೀಯ ಇತಿಹಾಸವನ್ನು ಪರಿಗಣಿಸಿ ಯಾವ ಔಷಧಿ ಸೂಕ್ತ ಎಂಬುದನ್ನು ವೈದ್ಯರೇ ನಿರ್ಧರಿಸಬೇಕು. ಕೆಲ ದಿನಗಳ ಅನುಕೂಲಕ್ಕಾಗಿ ತೆಗೆದುಕೊಳ್ಳುವ ನಿರ್ಧಾರವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಅಂತಿಮವಾಗಿ, ಋತುಸ್ರಾವ ಮುಂದೂಡುವ ಮಾತ್ರೆಗಳು ಎಲ್ಲರಿಗೂ ಅಪಾಯಕಾರಿ ಎನ್ನುವುದಿಲ್ಲ. ಆದರೆ ಅವುಗಳನ್ನು ವೈದ್ಯರ ಸಲಹೆಯಿಲ್ಲದೆ ಬಳಸುವುದು, ಅಪಾಯದ ಅಂಶಗಳನ್ನು ನಿರ್ಲಕ್ಷಿಸುವುದು ಮತ್ತು ಸ್ವಯಂ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಖಂಡಿತವಾಗಿಯೂ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹೀಗಾಗಿ ಯಾವುದೇ ಔಷಧಿಯನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಂತ ಮುಖ್ಯ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com