ಧಾರ್ಮಿಕ ಮೈತ್ರಿ ವಿವಾಹಕ್ಕೆ ಹಿಂದೂಪರ ಸಂಘಟನೆಗಳ ವಿರೋಧ

ಮರ್ಯಾದಾ ಹತ್ಯೆ ಪ್ರಕರಣಗಳ ಬಿಸಿ ತಣ್ಣಗಾಗುವ ಮುನ್ನವೇ ಇದೀಗ ಲವ್ ಜಿಹಾದ್ ಎಂಬ ಪ್ರತಿಭಟನೆಗಳ ಸದ್ದು ಕೇಳಿಬರುತ್ತಿದ್ದು, ಅಂತರ್ಧರ್ಮೀಯ ವಿವಾಹ...
ಅಂತರ್ಧರ್ಮೀಯ ವಿವಾಹ ಯುವಕನೊಂದಿಗೆ ವಿವಾಹವಾಗುತ್ತಿರುವ ಯುವತಿ ಅಶಿತಾ ಹಾಗೂ ಆಕೆಯ ತಾಯಿ
ಅಂತರ್ಧರ್ಮೀಯ ವಿವಾಹ ಯುವಕನೊಂದಿಗೆ ವಿವಾಹವಾಗುತ್ತಿರುವ ಯುವತಿ ಅಶಿತಾ ಹಾಗೂ ಆಕೆಯ ತಾಯಿ

ಮಂಡ್ಯ: ಮರ್ಯಾದಾ ಹತ್ಯೆ ಪ್ರಕರಣಗಳ ಬಿಸಿ ತಣ್ಣಗಾಗುವ ಮುನ್ನವೇ ಇದೀಗ ಲವ್ ಜಿಹಾದ್ ಎಂಬ ಪ್ರತಿಭಟನೆಗಳ ಸದ್ದು ಕೇಳಿಬರುತ್ತಿದ್ದು, ಅಂತರ್ಧರ್ಮೀಯ ವಿವಾಹ ನಿಶ್ಚಯವೊಂದನ್ನು ಲವ್ ಜಿಹಾದ್ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಮಂಡ್ಯದ ಅಶೋಕನಗರದ ಖ್ಯಾತ ಮಕ್ಕಳ ತಜ್ಞರಾದ ಡಾ. ಎಚ್. ವಿ ನರೇಂದ್ರಬಾಬು ಅವರ ಪುತ್ರಿ ಅಶಿತಾ ಎಂಬಿಎ ಪದವಿಧರೆಯಾಗಿದ್ದು, ಇವರು ಕಳೆದ 12 ವರ್ಷಗಳಿಂದಲೂ ಸಹಪಾಠಿ ಹಾಗೂ ಗೆಳೆಯನಾಗಿರುವ ಶಕೀಲ್ ಎಂಬ ಮುಸ್ಲಿಂ ಯುವಕನನ್ನು ಪ್ರೀತಿಸಿದ್ದಾರೆ. ಪದವಿ ಪಡೆಯುತ್ತಿದ್ದಂತೆ ಇಬ್ಬರೂ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಇದರಂತೆ ಇಬ್ಬರ ಪೋಷಕರು ಮಕ್ಕಳ ಪ್ರೀತಿಗೆ ಅಡ್ಡಿಯಾಗಬಾರದೆಂದು ವಿವಾಹಕ್ಕೆ ಸಮ್ಮತಿ ನೀಡಿದ್ದಾರೆ.

ಎರಡೂ ಕುಟುಂಬದ ಸಮ್ಮತಿ ಮೇರೆಗೆ ವಿವಾಹವನ್ನು ಇದೇ ಏ.17 ರಂದು ನಿಶ್ಚಯ ಮಾಡಲಾಗಿದೆ. ಆದರೆ, ಈ ವಿವಾಹಕ್ಕೆ ಕೆಲ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಇದೊಂದು ಲವ್ ಜಿಹಾದ್ ಎಂದು ಆರೋಪ ವ್ಯಕ್ತಪಡಿಸಿವೆ. ಅಲ್ಲದೆ, ವಿವಾಹ ನಿಲ್ಲಿಸುವಂತೆ ಕುಟುಂಬಸ್ಥರಿಗೆ ಒತ್ತಡ ಹೇರಿ ಪ್ರತಿಭಟನೆ ನಡೆಸಿದ್ದಾರೆ.

ಯುವತಿ ತಾಯಿ ಹಾಗೂ ಆಕೆಯ ಸಂಬಂಧಿಕರಿಗೆ ಈ ವಿವಾಹ ಇಷ್ಟವಲ್ಲ. ಆಧರೆ, ವೈದ್ಯರು ಹಾಗೂ ಅವರ ಪುತ್ರಿ ಯಾವುದೋ ಬಲವಂತಕ್ಕೆ ಸಿಲುಕಿ ಮದುವೆಗೆ ಒಪ್ಪಿಕೊಂಡಿದ್ದಾರೆ. ಈ ವಿವಾಹ ಮುಂದೊಂದು ದಿನ ಅಘಾತಕಾರಿ ಬೆಳವಣಿಗೆಗೆ ಕಾರಣವಾಗಲಿದೆ. ಆದ್ದರಿಂದ ಮದುವೆಯನ್ನು ನಿಲ್ಲಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇನ್ನು ಮದುವೆಯನ್ನು ಮುಸ್ಲಿಂ ಧರ್ಮದ ಪದ್ದತಿಯಲ್ಲೇ ನಡೆಸಲಾಗುತ್ತಿದ್ದು, ಯುವತಿಯ ಹೆಸರನ್ನು ಬದಲಿಸಲಾಗಿದೆ. ವಿವಾಹವನ್ನು ಮುಸ್ಲಿಂ ಧರ್ಮದಲ್ಲೇ ಏಕೆ ಮಾಡಬೇಕು, ಹಿಂದೂ ಪದ್ಧತಿಯಲ್ಲಿ ಯಾಕೆ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.

ಇನ್ನು ಘಟನೆ ಕುರಿತಂತೆ ಮಾತನಾಡಿರುವ ಯುವತಿಯ ತಂದೆ ಬಾಬು ಅವರು, ಪ್ರತಿಭಟನಾಕಾರರು ಆರೋಪ ವ್ಯಕ್ತಪಡಿಸುತ್ತಿರುವಂತೆ ನನ್ನ ಮಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿಲ್ಲ. ನನ್ನ ಮಗಳು ನನ್ನ ಹಳೆಯ ಸ್ನೇಹಿತನಾದ ಅಹ್ಮದ್ ಅವರ ಮಗ ಶಕೀಲ್ ನನ್ನು ಪ್ರೀತಿಸಿದ್ದಳು. ಅವಳ ಆಸೆಯನ್ನು ಈಡೇರಿಸುತ್ತಿದ್ದೇವೆಂದು ಹೇಳಿದ್ದಾರೆ.

ಇನ್ನು ಯುವಕ ಶಕೀಲ್ ಅವತ ತಂದೆ ಅಹ್ಮದ್ ಅವರು ಮಾತನಾಡಿ, ಅಶಿತಾ ನನ್ನ ಮಗನನ್ನು ಮದುವೆಯಾಗುತ್ತಿರುವುದಕ್ಕೆ ಸಂತಸವಿದೆ. ನಾವು ಅಶಿತಾಳ ಮೇಲೆ ಯಾವುದೇ ನಿಯಮಗಳನ್ನು ಹೇರಿಲ್ಲ ಎಂದು ಹೇಳಿದ್ದಾರೆ.

ಇನ್ನು ವಿವಾಹಕ್ಕೆ ಎರಡೂ ಅಂತರ್ಧರ್ಮೀಯ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದರೂ ಇತ್ತ ಹಿಂದೂಪರ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಸಿ.ಟಿ. ಮಂಜುನಾಥ್, ಮಂಜು ಮತ್ತು ಕೆಲಸ ಕಾರ್ಯಕರ್ತರು ಮಾತನಾಡಿ, ಕೂಡಲೇ ಮದುವೆಯನ್ನು ನಿಲ್ಲಿಸಬೇಕು. ಒಂದು ವೇಳೆ ಮದುವೆ ನಡೆದಿದ್ದೇ ಆದರೆ, ಪ್ರತಿಭಟನೆಯನ್ನು ಮತ್ತಷ್ಟು ತೀವ್ರತೆಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com