ಪ್ರಿಯಕರನ ಜೊತೆ ಸೇರಿ ಮಹಿಳೆ ಅಪಹರಿಸಿ ಹತ್ಯೆ; ಮಂಡ್ಯದಲ್ಲಿ ಶವ ಸುಟ್ಟ ಕಿರಾತಕಿ ಬಂಧನ

ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಅಪಹರಿಸಿ, ಉಸಿರುಗಟ್ಟಿಸಿ ಕೊಂದು ಮಂಡ್ಯದಲ್ಲಿ ಸುಟ್ಪುಹಾಕಿರುವ ಘಟನೆ ನಡೆದಿದೆ.
ಮೃತ ಮಹಿಳೆ ತಿಮ್ಮಮ್ಮ
ಮೃತ ಮಹಿಳೆ ತಿಮ್ಮಮ್ಮ

ಬೆಂಗಳೂರು: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಅಪಹರಿಸಿ, ಉಸಿರುಗಟ್ಟಿಸಿ ಕೊಂದು ಮಂಡ್ಯದಲ್ಲಿ ಸುಟ್ಪುಹಾಕಿರುವ ಘಟನೆ ನಡೆದಿದೆ.

ಪ್ರಿಯಕರನ ಜತೆ ಸೇರಿ ತಿಮ್ಮಮ್ಮ ಎಂಬ ಮಹಿಳೆಯನ್ನು ಕಾರಿನಲ್ಲಿ ಅಪಹರಿಸಿದ್ದ ಶೀಲಾ ಎಂಬಾಕೆ, ಅವರನ್ನು ಉಸಿರುಗಟ್ಟಿಸಿ ಹತ್ಯೆಗೈದು ಮಂಡ್ಯದಲ್ಲಿ ಶವ ಸುಟ್ಟು ಹಾಕಿದ್ದಾಳೆ. ಈ ಸಂಬಂಧ ಶೀಲಾಳನ್ನು ಬಂಧಿಸಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಆಕೆಯ ಪ್ರಿಯಕರ ಅರುಣ್‌ಗಾಗಿ ಶೋಧ ನಡೆಸುತ್ತಿದ್ದಾರೆ.

ತಾವು ಮೈಸೂರಿಗೆ ಟ್ರಿಪ್ ಹೋಗುತ್ತಿರುವುದಾಗಿ ಅಲ್ಲಿ ನೀಡಬೇಕಾದ ಹಣ ಕೊಡುವುದಾಗಿ ನಂಬಿಸಿ ಕರೆದೊಯ್ದ ಶೀಲಾ  ಮತ್ತು ಆಕೆಯ ಪ್ರಿಯಕರ ಸೇರಿ,. ತಿಮ್ಮಮ್ಮ ಅವರನ್ನು ಮಾರ್ಗಮಧ್ಯೆ ಉಸಿರುಗಟ್ಟಿಸಿ ಸಾಯಿಸಿದ್ದರು. ಬಳಿಕ ಶವವನ್ನು ಡಿಕ್ಕಿಯಲ್ಲಿ ಹಾಕಿಕೊಂಡು, ರಾತ್ರಿ ಮಂಡ್ಯದ ಹನಗೆರೆ ಗ್ರಾಮಕ್ಕೆ ತೆರಳಿದ್ದರು. ಮೃತರ ಮೈಮೇಲಿದ್ದ ಆಭರಣಗಳನ್ನು ಬಿಚ್ಚಿಕೊಂಡ ಹಂತಕರು, ಪೆಟ್ರೋಲ್ ಸುರಿದು ಮೃತದೇಹವನ್ನು ಸುಟ್ಟು ಹಾಕಿ ಬೆಳಗಿನ ಜಾವ ನಗರಕ್ಕೆ ಮರಳಿದ್ದರು.

ತಮ್ಮ ತಾಯಿ ರಾತ್ರಿ ಆದರು ವಾಪಸ್ ಬರದ ಕಾರಣ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ತಿಮ್ಮಮ್ಮ ಪುತ್ರ ದೂರು ದಾಖಲಿಸಿದ್ದರು.  ಮಹಿಳೆಯ ಶವ ಪತ್ತೆಯಾಗಿರುವ ಬಗ್ಗೆ ಮಂಡ್ಯ ಪೊಲೀಸರು ನಿಯಂತ್ರಣ ಕೊಠಡಿಗೆ ಫೋಟೊ ಸಹಿತ ಮಾಹಿತಿ ಕೊಟ್ಟಿದ್ದರು. ಆ ಸುಳಿವು ಆಧರಿಸಿ ನಮ್ಮ ಸಿಬ್ಬಂದಿ ತಿಮ್ಮಮ್ಮ ಅವರ ಕುಟುಂಬ ಸದಸ್ಯರ ಜತೆ ಮಂಡ್ಯಕ್ಕೆ ತೆರಳಿದರು. ಮೃತದೇಹ ಗುರುತಿಸಿದ ಅವರ ಮಗ, ಹಣದಾಸೆಗೆ ಶೀಲಾಳೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆಯನ್ನೂ ವ್ಯಕ್ತಪಡಿಸಿದರು  ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಶೀಲಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸಿರುವ ಪೊಲೀಸರು ಚೀಟಿ ವ್ಯವಹಾರ ಹಾಗೂ ಹಣಕಾಸಿನ ವಿವಾದ ಸಂಬಂಧ ಈ ಕೊಲೆ ನಡೆದಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com