ಡಾಂಬರ್ ಕಾರ್ಖಾನೆ ವಿರುದ್ಧ ರೈತರ ಪ್ರತಿಭಟನೆ
ಬಳ್ಳಾರಿ: ಸಂಡೂರು ತಾಲೂಕಿನ ಮುಸನಾಯಕನಹಳ್ಳಿ ಬಳಿ ಸ್ಥಾಪನೆ ಮಾಡಿರುವ ಡಾಂಬರ್ ಉತ್ಪಾದನಾ ಕಾರ್ಖಾನೆಗೆ ವಿರೋಧ ವ್ಯಕ್ತಪಡಿಸಿರುವ ಹಲವು ರೈತ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದ್ದವು.
ಕಾರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿರುವ ಬಳ್ಳಾರಿ ಜಿಲ್ಲೆಯ ಜೆಡಿಎಸ್ ಅಧ್ಯಕ್ಷ ಕುಡಿತಿನಿ ಶ್ರೀನಿವಾಸ್ ಅವರು, ಕಾರ್ಖಾನೆಯಿಂದಾಗಿ ಸಾಕಷ್ಟು ರಾಸಾಯನಿಕಗಳು ಉತ್ಪಾದನೆಯಾಗುತ್ತಿದೆ. ಇದು ಗ್ರಾಮದ ಜನರ ಮೇಲೆ ದುಷ್ಪರಿಣಾಮ ಬೀರಲಿದೆ. ಜನರಿಗೆ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಸಾವಿರಾರು ರೈತರಿಂದ ಭೂಮಿಯನ್ನು ಜೆಎಸ್ ಡಬ್ಲ್ಯೂ ಎಲ್ ಸ್ಟೀಲ್ಸ್ ಭೂಮಿಯನ್ನು ಪಡೆದಿದೆ. ಕಾರ್ಖಾನೆ ಸ್ಥಾಪನೆಗಾಗಿ ಅಕ್ರಮವಾಗಿ ಭೂಮಿಯನ್ನು ಗುತ್ತಿಗೆಗೆ ಪಡೆದುಕೊಂಡಿದೆ.
ಕಾರ್ಖಾನೆಯನ್ನು 34 ಎಕರೆ ಜಾಗದಲ್ಲಿ ಸ್ಥಾಪನೆ ಮಾಡಲಾಗಿದ್ದು, ಜನರ ಒಪ್ಪಿಗೆಯೇ ಇಲ್ಲದೆಯೇ ಸ್ಥಳದಲ್ಲಿ ಕಾರ್ಖಾನೆಯನ್ನು ಸ್ಥಾಪನೆ ಮಾಡಲಾಗಿದೆ. ಡಾಂಬರು ಉತ್ಪಾದನೆ ವೇಳೆ ಹಲವು ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತಿದ್ದು, ಇಲ್ಲಿನ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಪ್ರಮುಖವಾಗಿ ಗರ್ಭಿಣಿ ಹೆಣ್ಣು ಮಕ್ಕಳಿಗೆ ಹಾಗೂ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ. ಅವೈಜ್ಞಾನಿಕವಾಗಿ ಸ್ಥಾಪನೆ ಮಾಡಿರುವ ಕಾರ್ಖಾನೆಯನ್ನು ಕೂಡಲೇ ತೆರವುಗೊಳಿಸಬೇಕೆಂದು ಹೇಳಿದ್ದಾರೆ.